ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಲಿ: ಎಚ್.ಟಿ.ಮಂಜು

| Published : Nov 21 2025, 01:30 AM IST

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಲಿ: ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ವಿಪಕ್ಷ ಶಾಸಕನಾದರೂ ಅನುದಾನಕ್ಕಾಗಿ ಎಲ್ಲಾ ಸಚಿವರ ಬಾಗಿಲುಗಳಿಗೆ ತೆರಳಿ ಮನವಿ ಮಾಡಿದ್ದೇನೆ. ಸರ್ಕಾರ ನೀಡಿರುವ ಅಲ್ಪಸ್ವಲ್ಪ ಅನುದಾನವನ್ನು ತಾಲೂಕಿನ ಯಾವುದೇ ಗ್ರಾಮಕ್ಕೂ ಅನ್ಯಾಯವಾಗದಂತೆ ಶಾಸಕರ ಅನುದಾನವನ್ನು ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಹಂಚಲಾಗುವುದು .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

25 ಮಕ್ಕಳಿಗಿಂತ ಕಡಿಮೆ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ರಾಜ್ಯ ಸರ್ಕಾರವು ಹಿಂದೆ ಸರಿಯಬೇಕು ಎಂದು ಶಾಸಕ ಎಚ್.ಟಿ.ಮಂಜು ಆಗ್ರಹಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರವು ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದರೆ ಸುಮಾರು 7 ಸಾವಿರ ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಗಳನ್ನು ಗ್ರಾಮೀಣ ಭಾಗದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಗ್ರಾಮದ ಶಾಲೆ ಮುಚ್ಚಿದೆ ಎಂದು ಮಕ್ಕಳನ್ನು ಬೇರೆ ಗ್ರಾಮದ ಶಾಲೆಗೆ ಕಳುಹಿಸದೆ ಕೂಲಿಗೆ ಕಳುಹಿಸುವ ಸಾಧ್ಯತೆ ಇದೆ. ಇದರಿಂದ ಮತ್ತೆ ಗ್ರಾಮೀಣ ಜನರು ಸಾಕ್ಷರತೆ ಇಲ್ಲದೆ, ಅನಕ್ಷರತೆ ಉಂಟಾಗುವ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ವಿಪಕ್ಷ ಶಾಸಕನಾದರೂ ಅನುದಾನಕ್ಕಾಗಿ ಎಲ್ಲಾ ಸಚಿವರ ಬಾಗಿಲುಗಳಿಗೆ ತೆರಳಿ ಮನವಿ ಮಾಡಿದ್ದೇನೆ. ಸರ್ಕಾರ ನೀಡಿರುವ ಅಲ್ಪಸ್ವಲ್ಪ ಅನುದಾನವನ್ನು ತಾಲೂಕಿನ ಯಾವುದೇ ಗ್ರಾಮಕ್ಕೂ ಅನ್ಯಾಯವಾಗದಂತೆ ಶಾಸಕರ ಅನುದಾನವನ್ನು ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಹಂಚಲಾಗುವುದು ಎಂದು ತಿಳಿಸಿದರು.

ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ಧಿ ನನ್ನ ಗುರಿ. ನನ್ನ ಹಾಗೂ ಜೆಡಿಎಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಮತದಾರರಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನನ್ನ ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ, ದೊಡ್ಡಕ್ಯಾತನಹಳ್ಳಿ, ನಾಯಸಿಂಗನಹಳ್ಳಿ, ಕುಂದೂರು, ಕೊರಟಿಕೆರೆ, ಅಣ್ಣೇಚಾಕನಹಳ್ಳಿ ಅಕ್ಕಿಹೆಬ್ಬಾಳು ಹೋಬಳಿಯ ಮುದ್ಲಾಪುರ, ಹೊಸಮಾವಿನಕೆರೆ, ಗುಡುಗನಹಳ್ಳಿ, ಸೋಮನಾಥಪುರ, ಬೆಳತೂರು ಗ್ರಾಮಗಳಲ್ಲಿ ತಲಾ ಹತ್ತು ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ದಿಶಾ ಸಮಿತಿ ಸದಸ್ಯ ನರಸನಾಯಕ, ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲೇನಹಳ್ಳಿ ಮೋಹನ್, ದಿಲೀಪ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಕೊರಟಿಕೆರೆ ದಿನೇಶ್, ಕೆ.ಆರ್.ಡಿ.ಐ.ಎಲ್ ಇಂಜಿನಿಯರ್ ಚೇತನ್, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ಹಲವರಿದ್ದರು.