ಗ್ಯಾರಂಟಿ ಕೊಟ್ಟು ರಾಜ್ಯ ದಿವಾಳಿಯಾಗಿದೆ, ಇನ್ನು ದೇಶ ದಿವಾಳಿ ಮಾಡಲು ಹೊರಟಿದ್ದಾರೆ

| Published : May 17 2024, 12:42 AM IST / Updated: May 17 2024, 12:04 PM IST

ಗ್ಯಾರಂಟಿ ಕೊಟ್ಟು ರಾಜ್ಯ ದಿವಾಳಿಯಾಗಿದೆ, ಇನ್ನು ದೇಶ ದಿವಾಳಿ ಮಾಡಲು ಹೊರಟಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿನ ವಿದ್ಯುತ್ ಉತ್ಪಾದನಾ ಮತ್ತು ನಿರ್ವಹಣಾ ಸಂಸ್ಥೆಗಳು ಸಾಕಷ್ಟು ನಷ್ಟದಲ್ಲಿವೆ. ₹26 ಸಾವಿರ ಕೋಟಿ ಸಾಲ ಹೊಂದಿದ್ದು, ಈ ಸಂಸ್ಥೆಗಳಿಗೆ ಯಾವುದೇ ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ

ಗದಗ: ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇನ್ನು ದೇಶವನ್ನು ದಿವಾಳಿ ಮಾಡಲು ಮತ್ತೊಂದು ಯೋಜನೆ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಗುರುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರ ಖಜಾನೆ ಭರ್ತಿಯಾಗಿದ್ದರೆ ಕೇಂದ್ರ ಸರ್ಕಾರ ಬರ ಪರಿಹಾರವಾಗಿ ನೀಡಿರುವ ಪರಿಹಾರದ ಹಣದಲ್ಲಿಯೇ ₹2 ಸಾವಿರ ಕಡಿತ ಮಾಡಿ ರೈತರಿಗೆ ಯಾಕೆ ಕೊಟ್ಟಿದ್ದಾರೆ? ಇದರಿಂದಲೇ ಸ್ಪಷ್ಟವಾಗುತ್ತದೆ, ಅವರ ಬಳಿ ಹಣವಿಲ್ಲ ಎಂದು. ರಾಜ್ಯದಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನಾಲ್ಕೈದು ತಿಂಗಳಿಂದ ಸಂಬಳ ಕೊಟ್ಟಿಲ್ಲ. ವಿವಿಧ ಯೋಜನೆಗಳಡಿ ರೈತರಿಗೆ ಕೊಡಬೇಕಾದ ₹1200 ಕೋಟಿ ಸಬ್ಸಿಡಿ ಕೊಟ್ಟಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿನ ವಿದ್ಯುತ್ ಉತ್ಪಾದನಾ ಮತ್ತು ನಿರ್ವಹಣಾ ಸಂಸ್ಥೆಗಳು ಸಾಕಷ್ಟು ನಷ್ಟದಲ್ಲಿವೆ. ₹26 ಸಾವಿರ ಕೋಟಿ ಸಾಲ ಹೊಂದಿದ್ದು, ಈ ಸಂಸ್ಥೆಗಳಿಗೆ ಯಾವುದೇ ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಹಣವೇ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಸದ್ಯದಲ್ಲಿಯೇ ರಾಜ್ಯ ಅಂಧಕಾರದಲ್ಲಿ ಮುಳುಗುತ್ತದೆ. ಒಂದೆಡೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಕಳೆದ ಹಲವಾರು ತಿಂಗಳಿಂದ ನಾಲ್ಕೈದು ನೂರು ರುಪಾಯಿಗಳಿಗಿಂತಲೂ ಹೆಚ್ಚಿನ ಬಿಲ್‌ಗಳು ಬಡವರಿಗೆ ಬರುತ್ತಿವೆ. ಸರ್ಕಾರ ಉಚಿತ ವಿದ್ಯುತ್ ಎಂದು ಹೇಳಿ, ಬೇರೆ ಬೇರೆ ರೂಪದಲ್ಲಿ, ಹಿತ್ತಲ ಬಾಗಿಲಿನಿಂದ ಹಣ ವಸೂಲಿ ಮಾಡುತ್ತಿದೆ. ಇದು ರಾಜ್ಯ ಸರ್ಕಾರ ಜನರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್‌ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇನ್ನೊಂದೆಡೆ ಸಂವಿಧಾನ ತೆಗೆದು ಹಾಕುತ್ತಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ದೇಶದಲ್ಲಿ ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆಗಲೇ ಸಂವಿಧಾನ ತಿದ್ದುಪಡಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಗೆಲ್ಲುವ ವಿಶ್ವಾಸವೇ ಇಲ್ಲ. ಹಾಗಾಗಿ ಇನ್ನೊಬ್ಬರ ಸೋಲಿನ ಬಗ್ಗೆ ಮಾತನಾಡುತ್ತಿದೆ. ಸರಿ, ನೀವು ಯಾವ ಯಾವ ರಾಜ್ಯದಲ್ಲಿ ಎಷ್ಟು ಸೀಟು ಗೆಲ್ಲುತ್ತೀರಿ ಎನ್ನುವುದು ಹೇಳಿ ನೋಡೋಣ ಎಂದು ಸವಾಲು ಹಾಕಿದರು. ದೇಶದ ಜನರು ಈಗಾಗಲೇ ಕಿಚಡಿ ಸರ್ಕಾರಗಳ ಕಾರ್ಯವೈಖರಿಯನ್ನು ನೋಡಿದ್ದಾರೆ. ಕಳೆದ 10 ವರ್ಷಗಳಿಂದ ಮೋದಿ ನೇತೃತ್ವದ ಸ್ಥಿರ ಸರ್ಕಾರ ನೋಡಿದ್ದಾರೆ. ಸ್ಥಿರ ಸರ್ಕಾರದಿಂದ ಮಾತ್ರ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಸಂವಿಧಾನಕ್ಕೆ ಹೆಚ್ಚು ಬಾರಿ ತಿದ್ದುಪಡಿ ತಂದಿದ್ದು ಯಾರು? ದೇಶದ ಜನತೆಯ ಮೇಲೆ ಎಮರ್ಜೆನ್ಸಿ ಹೇರಿದ್ದು ಯಾರು? ವ್ಯಕ್ತಿ, ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿದ್ದು, ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿದ್ದು ಯಾರು? ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಉತ್ತರ ಒಂದೇ ಅದು ಕಾಂಗ್ರೆಸ್. ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ, ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಎಂದು ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಹಲವಾರು ದಶಕಗಳ ಅಧಿಕಾರ ನಡೆಸಿದ್ದರೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಿರಲಿಲ್ಲ. ಈಗ ಎಲ್ಲಿಲ್ಲದ ಕಾಳಜಿ ತೋರಿಸುತ್ತಿದ್ದಾರೆ. ಈ ಹಿಂದೆ ಕಾಲೇಕರ ಸಮಿತಿ ಯಾಕೆ ಜಾರಿ ಮಾಡಲಿಲ್ಲ? ಆನಂತರ ವಿ.ಪಿ. ಸಿಂಗ್ ಅವರು ಮಂಡಲ ಕಮಿಷನ್ ಜಾರಿ ಮಾಡಿದ್ದರು. ಆವಾಗ ಇದೇ ಕಾಂಗ್ರೆಸ್‌ನವರು ದೊಡ್ಡ ಪ್ರತಿಭಟನೆ ಮಾಡಿದ್ದನ್ನು ಮರೆತಿದ್ದಾರೆ ಎಂದರು.

ಹೊಸ ತಲೆಮಾರಿನ ಯುವಕರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಯುವಕರು ಜಾಗ್ರತರಿದ್ದಾರೆ. ದೇಶದ ಇತಿಹಾಸವನ್ನು ಓದಿಕೊಂಡಿದ್ದಾರೆ. ಅದರಲ್ಲಿಯೂ ಕಾಂಗ್ರೆಸ್ ಇತಿಹಾಸ ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಹಾಜರಿದ್ದರು.