ಮಣಿಪಾಲ: ಯಾವುದೇ ಕಾರಣಕ್ಕೆ ಕ್ಯಾನ್ಸರ್ ಪೀಡಿತ ಮಕ್ಕಳು ಚಿಕಿತ್ಸೆಯಿಂದ ದೂರ ಉಳಿಯಬಾರದು ಎಂಬ ಉದ್ದೇಶವನ್ನು ಹೊಂದಿರುವ ನೋಂದಾಯಿತ ಭಾರತೀಯ ಲಾಭರಹಿತ ಸಂಸ್ಥೆಯಾದ ಆಕ್ಸೆಸ್ ಲೈಫ್ ಮತ್ತು ಚೆಲ್ಲಾರಾಮ್ ಫೌಂಡೇಶನ್‌ಗಳು ಜೊತೆಯಾಗಿ, ರಾಜ್ಯದ ಪ್ರಥಮ, ಮೂಳೆ ಮಜ್ಜೆಯ ಕಸಿ (ಬಿಎಂಟಿ) ರೋಗಿ ಮಕ್ಕಳಿಗಾಗಿ ತನ್ನ ಹೋಮ್ ಅವೇ ಫ್ರಮ್ ಹೋಮ್ (ಎಚ್ಎಎಚ್) ಕೇಂದ್ರವನ್ನು ಮಣಿಪಾಲ ಮಾಹೆ ಕ್ಯಾಂಪಸ್‌ನಲ್ಲಿ ಶನಿವಾರ ಚಾಲನೆ ನೀಡಿದೆ.

ಈ ಕಾರ್ಯಕ್ರಮದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆಯಲ್ಲಿ, ಮುಂಬೈನ ಚೆಲ್ಲಾರಾಮ್ ಫೌಂಡೇಶನ್‌ನ ಮುಖ್ಯಸ್ಥ ಡಾ. ಅಶೋಕ್ ಗವಾಂಡೆ ಮಾಹೆಯ ಸಿಒಒ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಕೆ ಭಟ್; ಮಣಿಪಾಲ ಫೌಂಡೇಶನ್‌ನ ಮು.ಕಾ.ನಿ.ಅಧಿಕಾರಿ ಹರಿನಾರಾಯಣ್ ಶರ್ಮಾ ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ, ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಗಿರೀಶ್ ನಾಯರ್ ಮತ್ತು ಸಹಸಂಸ್ಥಾಪಕ ಅಂಕಿತ್ ದೇವ್ ಉಪಸ್ಥಿತರಿದ್ದರು.

ನಿಯಂತ್ರಿತ ವಾತಾವರಣ: ಹೊಸದಾಗಿ ಪ್ರಾರಂಭಿಸಲಾದ 10 ಘಟಕ ಸೌಲಭ್ಯವಿರುವ ಈ ಕೇಂದ್ರವನ್ನು ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಳಿಗೆ ಒಳಗಾಗುವ ಮಕ್ಕಳಿಗಾಗಿ ವಿಶೇಷವಾಗಿ, ಚಿಕಿತ್ಸೆ ಮತ್ತು ಚೇತರಿಕೆಯ ಸಮಯದಲ್ಲಿ ರೋಗನಿರೋಧಕ ಶಕ್ತಿ, ಸುರಕ್ಷಿತ, ನೈರ್ಮಲ್ಯ ಮತ್ತು ನಿಯಂತ್ರಿತ ವಾತಾವರಣಕ್ಕೆ ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಹಿಂದೆ 2022ರಲ್ಲಿ ಇಂತಹ 12 ಘಟಕಗಳಿರುವ ಎಚ್‌ಎಎಚ್‌ ಕೇಂದ್ರವನ್ನು ಆಕ್ಸಿಸ್ ಲೈಫ್ ಸಹೋಗದಲ್ಲಿ ಆರಂಭಿಸಲಾಗಿದ್ದು, ಇದುವರೆಗೆ ಅಲ್ಲಿ ಸುಮಾರು 350 ರೋಗಿ ಮಕ್ಕಳಿಗೆ ಉಚಿತ ವಸತಿ ನೀಡಲಾಗಿದೆ. ಈ ಎರಡನೇ ಕೇಂದ್ರದೊಂದಿಗೆ, ಮಕ್ಕಳು ತಮ್ಮ ಚಿಕಿತ್ಸೆಯನ್ನು ಗೌರವದಿಂದ ಪೂರ್ಣಗೊಳಿಸಲು ಮಾತ್ರವಲ್ಲದೆ, ಸುರಕ್ಷಿತ, ಕಾಳಜಿಯುಳ್ಳ ಮತ್ತು ಕುಟುಂಬ ಸ್ನೇಹಿ ವಾತಾವರಣದಲ್ಲಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಇನ್ನೂ ಅನೇಕ ಹಿಂದುಳಿದ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಹೇಳಿದ್ದಾರೆ.