ಸಾರಾಂಶ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಳಿ ನಡೆಸಿದ ಹೋರಾಟದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾರಣಾಂತಿಕ ಹಲ್ಲೆ ಹಾಗೂ ಲಾಠಿ ಚಾರ್ಜ್ ನಡೆಸಿತು. ಆದರೂ, ಹೋರಾಟ ಕೈ ಬಿಟ್ಟಿಲ್ಲ
ಕಾರಟಗಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರೆಯುವ ವರೆಗೂ ನಾನು ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಸಮುದಾಯದ ವ್ಯಕ್ತಿಯೇ ಮುಖ್ಯಮಂತ್ರಿ ಆದರೂ, ಮೀಸಲಾತಿ ದೊರೆಯದಿದ್ದರೆ ಅವರ ವಿರುದ್ಧವೂ ಹೋರಾಟ ಮಾಡುವುದಾಗಿ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಕಾರ್ಯಕ್ರಮದ ಆನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಳಿ ನಡೆಸಿದ ಹೋರಾಟದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾರಣಾಂತಿಕ ಹಲ್ಲೆ ಹಾಗೂ ಲಾಠಿ ಚಾರ್ಜ್ ನಡೆಸಿತು. ಆದರೂ, ಹೋರಾಟ ಕೈ ಬಿಟ್ಟಿಲ್ಲ. 8ನೇ ಹಂತದ ಹೋರಾಟ ಮಾಡುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆ ಉಳವಿಯಲ್ಲಿ ಜೂ. 23, 24ರಂದು ಮೀಸಲಾತಿ ಸಂಕಲ್ಪ ಸಭೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.ಮೀಸಲಾತಿ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮ ಬೇಡಿಕೆ ಅಸಂವಿಧಾನಿಕ ಹಾಗೂ ಸಂವಿಧಾನ ವಿರೋಧಿ ಎಂದು ಅವಮಾನ ಮಾಡಿದ್ದಾರೆ. ನಾವು ಸ್ವಾಭಿಮಾನಿಗಳು. ಹೀಗಾಗಿ ಮೀಸಲಾತಿ ನೀಡುವಂತೆ ಮತ್ತೆ ಸಿದ್ದರಾಮಯ್ಯ ಬಳಿ ಹೋಗುವುದಿಲ್ಲ. ಹೀಗಾಗಿ ಜನರಿಗೆ ನಮಗಾದ ಅನ್ಯಾಯ ತಿಳಿಸಲು ಸಭೆ ಮಾಡುತ್ತಿದ್ದೇವೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ಹೋರಾಟ ನಡೆಸಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಹೋರಾಟ ಮಾಡಿದ್ದೇನೆ. ಮೀಸಲಾತಿ ದೊರೆಯುವ ವರೆಗೂ ನಿರಂತರ ಹೋರಾಟ ನಡೆಸುತ್ತೇನೆ ಎಂದರು.