ಬಳ್ಳಾರಿ : ಆ ದಿನಗಳ ಮಾತು ಈಗೇಕೆ ಕೃತಿ ಲೋಕಾರ್ಪಣೆ

| Published : Apr 08 2024, 01:11 AM IST / Updated: Apr 08 2024, 12:42 PM IST

ಸಾರಾಂಶ

ವಿಶ್ವಕ್ಕೆ ಕನ್ನಡ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ನಾಟಕಗಳು ಮನುಷ್ಯನ ನಿಜ ರೂಪ ತಿಳಿಸುತ್ತವೆ.

ಬಳ್ಳಾರಿ: ಪುಸ್ತಕಗಳು ಜ್ಞಾನ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ, ನಾಟಕಕಾರ ಪ್ರೊ.ರಾಜಪ್ಪ ದಳವಾಯಿ ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಹಾಗೂ ಪ್ರದರ್ಶನ ಕಲೆ(ನಾಟಕ) ವಿಭಾಗ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪ್ರೊ.ಎನ್.ಶಾಂತನಾಯ್ಕ ಅವರು ರಚಿಸಿರುವ ‘ಆ ದಿನಗಳ ಮಾತು ಈಗೇಕೆ’ ಪುಸ್ತಕ ಬಿಡುಗಡೆ ಹಾಗೂ ‘ನಾಟಕ ರಚನಾ ಕಮ್ಮಟ-2024’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ಕನ್ನಡ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ನಾಟಕಗಳು ಮನುಷ್ಯನ ನಿಜ ರೂಪ ತಿಳಿಸುತ್ತವೆ. ಪ್ರಸ್ತುತ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿರುವುದು ಬೇಸರದ ಸಂಗತಿಯಾಗಿದ್ದು, ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳವುದರಿಂದ ಜ್ಞಾನವೃದ್ದಿಸುತ್ತದೆ ಹಾಗೂ ಸಮಾಜದಲ್ಲಿನ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ಹೇಳಿದರು.

ಬಳ್ಳಾರಿಯ ಸಾಹಿತಿ ಪಿ.ಆರ್.ವೆಂಕಟೇಶ್ ಪುಸ್ತಕ ಕುರಿತು ಹಾಗೂ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಯ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್, ಇಂಗ್ಲಿಷ್ ಮತ್ತು ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಶಾಂತನಾಯ್ಕ, ನಾಟಕ ವಿಭಾಗದ ಅತಿಥಿ ಉಪನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಹಾಗೂ ಡಾ.ಸಹನಾ ಪಿಂಜಾರ, ಹೇಮೇಶ್ವರ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.