ರಾಮದೇವರ ಬೆಟ್ಟದಲ್ಲಿ ಅತಿಎತ್ತರದ ರಾಮನ ಪ್ರತಿಮೆ

| Published : Aug 01 2024, 12:22 AM IST

ಸಾರಾಂಶ

ರಾಮನಗರ: ಐತಿಹಾಸಿಕ ಪುರಾಣ ಪ್ರಸಿದ್ಧ ರಾಮನಗರದ ರಾಮದೇವರ ಬೆಟ್ಟದಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ:

ಐತಿಹಾಸಿಕ ಪುರಾಣ ಪ್ರಸಿದ್ಧ ರಾಮನಗರದ ರಾಮದೇವರ ಬೆಟ್ಟದಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮದೇವರ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಬೆಟ್ಟ ಹತ್ತಿ ಶ್ರೀರಾಮನ ದರ್ಶನ ಪಡೆದ ಶಾಸಕರು, ಮೂಲಭೂತ ಸೌಕರ್ಯಗಳ ವಸ್ತುಸ್ಥಿತಿಯನ್ನು ವೀಕ್ಷಿಸಿದರು. ಅಲ್ಲದೆ, ರಾಮಗಿರಿ ಸೇವಾ ಟ್ರಸ್ಟ್ ಪ್ರಮುಖರಿಂದ ಅಹವಾಲುಗಳನ್ನು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮದೇವರ ಬೆಟ್ಟದಲ್ಲಿ ಶ್ರೀ ರಾಮನ ಪ್ರತಿಮೆಯನ್ನು ನಿರ್ಮಿಸಲು ಈಗಾಗಲೇ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಳಿ ಮನವಿ ಮಾಡಿದ್ದೇವೆ. ಸದ್ಯಕ್ಕೆ ರಾಮದೇವರ ಬೆಟ್ಟ ಹಾಗೂ ರೇವಣಸಿದ್ದೇಶ್ವರ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರ 4 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೆಂದು ಗಣೇಶ್ ಭಟ್ಟರು ಕೆತ್ತಿರುವ ಬಾಲರಾಮನ ಮೂರ್ತಿಯನ್ನು ರಾಮನ ದೇವರ ಬೆಟ್ಟದಲ್ಲಿ ಪ್ರತಿಷ್ಠಾಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಮದೇವರ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಾರ್ವಜನಿಕರು, ಪ್ರವಾಸಿಗಳು, ಭಕ್ತಾಧಿಗಳಿಂದ ಸಾಕಷ್ಟು ಅಹವಾಲುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ರಸ್ತೆ ಅಭಿವೃದ್ಧಿ, ಮಹಿಳೆಯರಿಗೆ ಸೂಕ್ತವಾದ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶೀಘ್ರದಲ್ಲೆ ಕೆಲಸಗಳನ್ನು ಆರಂಭಿಸುತ್ತೇವೆ ಎಂದು ಹೇಳಿದರು.

ರಾಮದೇವರ ಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆ ಸಂಗ್ರಹಿಸುತ್ತಿರುವ ಪ್ರವೇಶ ಶುಲ್ಕವನ್ನು ಸ್ಥಗಿತಗೊಳಿಸಲು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ರಾಮನಗರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಬಾಲ್ಯದಿಂದಲೂ ರಾಮನ ಆರಾಧನೆ ಮಾಡಿಕೊಂಡೇ ಬೆಳೆದಿದ್ದೇವೆ. ರಾಮನ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ಅಗತ್ಯ ನಮಗಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ವಿರೋಧ ಪಕ್ಷಗಳ ಆಲೋಚನೆ ಕೇವಲ ರಾಜಕೀಯ. ನಾವು ಈ ಜಿಲ್ಲೆಯಲ್ಲಿ ಇಲ್ಲೆ ಹುಟ್ಟಿ ಇಲ್ಲೆ ಮಣ್ಣಾಗುತ್ತೇವೆ. ನಾವು ರಾಜಕೀಯ ಮಾಡದೇ ಕೇವಲ ಜನ ಸೇವೆ ಮಾಡುತ್ತೇವೆ ಎಂದು ಹೇಳಿದರು.

ಅಭಿವೃದ್ಧಿಯ ದೂರದೃಷ್ಟಿಯಿಂದ ರಾಮನಗರ ಜಿಲ್ಲೆಯನ್ನು ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಇರಲಿದೆ. ರಾಮನಗರ ತಾಲೂಕಿನ, ರಾಮನಗರದ ಹೆಸರನ್ನು ಯಾವುದೇ ಕಾರಣಕ್ಕೂ ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯ. ಆದರೆ ವಿರೋಧ ಪಕ್ಷಗಳು ಈ ಬಗ್ಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋಮು ವಿಷ ಬೀಜ ಭಿತ್ತಿ ಕೆಟ್ಟ ರಾಜಕೀಯ ಮಾಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ತೇಜಸ್ವಿನಿ, ಪೌರಾಯುಕ್ತ ಡಾ.ಜಯಣ್ಣ, ಶ್ರೀ ರಾಮಗಿರಿ ಸೇವಾ ಸಮಿತಿ ಅಧ್ಯಕ್ಷ ಎಸ್.ನರಸಿಂಹಯ್ಯ, ಗೌರವಾಧ್ಯಕ್ಷ ಶೇಷಾದ್ರಿ ಅಯ್ಯರ್, ಖಜಾಂಚಿ ಪದ್ಮನಾಭ್, ಸಹ ಕಾರ್ಯದರ್ಶಿಗಳಾದ ಯತೀಶ್, ಡೇರಿ ವೆಂಕಟೇಶ್, ಜಗದೀಶ್, ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಅರ್ಚಕ ನಾಗರಾಜು ಭಟ್, ಸಂತೋಷ್ .ಪಿ, ಮುಖಂಡರಾದ ನಾಗರಾಜು, ಗುರುಪ್ರಸಾದ್, ಅನಿಲ್‌ಜೋಗೇಂದರ್, ವಾಸು, ಪಾದ್ರಳ್ಳಿ ಮಹದೇವು, ಪರ್ವಿಜ್ ಪಾಷ, ಶ್ರೀನಿವಾಸ, ವಸೀಂ, ಆಯಿಷಾ, ಪವಿತ್ರಾ, ಗಿರಿಜಮ್ಮ, ಆರೀಪ್, ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಮತ್ತಿತರ ಮುಖಂಡರು ಹಾಜರಿದ್ದರು.

ರಾಮಗಿರಿ ಟ್ರಸ್ಟ್ ಸಮಿತಿ, ಹಿರಿಯ ನಾಗರಿಕರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಎಲ್ಲರ ಸಹಕಾರ, ಸಲಹೆ, ಮಾರ್ಗದರ್ಶನ ಪಡೆದುಕೊಂಡು ರಾಮೋತ್ಸವ ಆಚರಿಸುತ್ತಿದ್ದೇವೆ.

ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ