ಜಿಲ್ಲೆಯಲ್ಲಿ 7.32 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

| Published : Jun 10 2025, 05:13 AM IST

ಸಾರಾಂಶ

ರಾಜ್ಯದಲ್ಲಿ ಮುಂಗಾರು ಮೊದಲೇ ಮಳೆ ಸುರಿದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಮೊದಲೇ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಮುಂಗಾರು ಮೊದಲೇ ಮಳೆ ಸುರಿದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಮೊದಲೇ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಗಾರಿಗೂ ಮೊದಲೇ ಮಳೆ ಸುರಿದಿರುವುದು ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಬಹುತೇಕ ರೈತರು ಬಿತ್ತನೆಗೆ ತಮ್ಮ ಹೊಲಗದ್ದೆಗಳಲ್ಲಿ ಸಿದ್ಧತೆಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ, ಈಗಾಗಲೇ ಕೆಲವರು ಬಿತ್ತನೆಯನ್ನೂ ಮಾಡಿದ್ದಾರೆ.

ಮಾರ್ಚ್ 1ರಿಂದ ಮೇ 31ರವರೆಗೆ ಪೂರ್ವ ಮುಂಗಾರು ಮಳೆ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ವಾಡಿಕೆಯಂತೆ ಜಿಲ್ಲೆಯಲ್ಲಿ 93 ಮೀ.ಮೀ. ಮಳೆ ಆಗಬೇಕಿತ್ತು. ಆದರೆ, 217 ಮೀ.ಮೀ. ಮಳೆಯಾಗಿದ್ದು, ಶೇ.133ರಷ್ಟು ಹೆಚ್ಚಾಗಿದೆ. ಇನ್ನು ಮೇ ತಿಂಗಳು ನೋಡುವುದಾದರೆ, ವಾಡಿಕೆಯಂತೆ 61 ಮೀ.ಮೀ. ಆಗಬೇಕಿತ್ತು. ಆದರೆ, ಆಗಿರುವುದು 163 ಮೀ.ಮೀ. ಹಾಗಾಗಿ, ಶೇ.170ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಬಿತ್ತನೆಗೆ ಭೂಮಿ ತೇವಗೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಕಳೆದ ವರ್ಷ ಹೆಸರು, ಸೋಯಾಬೀನ್ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು. ಹಾಗಾಗಿ, ರೈತರು ಈ ಬಾರಿಯೂ ಹೆಸರು, ಸೋಯಾಬೀನ್ ಬಿತ್ತನೆಯತ್ತ ಮುಖ ಮಾಡಿದ್ದಾರೆ. ಜೊತೆಗೆ ಭತ್ತ, ಮೆಕ್ಕೆಜೋಳ, ನೆಲಗಡಲೆ, ಅರಿಶಿನ, ಕಬ್ಬು, ತೊಗರಿ ಸೇರಿದಂತೆ ಮತ್ತಿತರ ಬೆಳೆ ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಜಿಲ್ಲೆಯ ಕೆಲವೆಡೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರಿಗೆ ನಷ್ಟವಾಗಿತ್ತು. ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗಿದೆ. ಬಿತ್ತನೆಗೆ ಭೂಮಿ ಹದಗೊಂಡಿದ್ದರಿಂದ ರೈತರು ಉತ್ಸಾಹದಿಂದ ಬಿತ್ತನೆಗೆ ಸಜ್ಜಾಗಿದ್ದಾರೆ.

7.32 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಬೆಳಗಾವಿ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ 7.32 ಲಕ್ಷ ಹೆಕ್ಟೇರ್ ಬಿತ್ತನೆಗೆ ಕೃಷಿ ಇಲಾಖೆ ಗುರಿ ಇಟ್ಟುಕೊಂಡಿದೆ. ಬಿತ್ತನೆಗೆ ಅಗತ್ಯ ಬೀಜ-ಗೊಬ್ಬರವನ್ನು ದಾಸ್ತಾನು ಮಾಡಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.13ರಷ್ಟು ಬಿತ್ತನೆಯಾಗಿದ್ದು, ಇನ್ನುಳಿದ ರೈತರು ಬಿತ್ತನೆಗೆ ಹೊಲ ಸಿದ್ಧಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ 7.32 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆಜೋಳ 1 ಲಕ್ಷ 33 ಸಾವಿರ ಹೆಕ್ಟೇರ್‌, ಸೋಯಾಬೀನ್ 99 ಸಾವಿರ, ಭತ್ತ 63 ಸಾವಿರ ಹೆಕ್ಟೇರ್, ಹೆಸರು 40 ಸಾವಿರ, ತೊಗರಿ 15 ಸಾವಿರ, ಉದ್ದು 11 ಸಾವಿರ, ನೆಲಗಡಲೆ 19 ಸಾವಿರ, ಹತ್ತಿ 38 ಸಾವಿರ, ಕಬ್ಬು 2.70 ಲಕ್ಷ ಹೆಕ್ಟೇರ್ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.

ಬೀಜ ಗೊಬ್ಬರ ದಾಸ್ತನು:

ಮುಂಗಾರು ಉತ್ತಮ ಮಳೆ ಆಗಿದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಹಿನ್ನೆಲೆಯಲ್ಲಿ 42,298 ಕ್ವಿಂಟಲ್ ಬೀಜಕ್ಕೆ ಬೇಡಿಕೆ ಇದೆ. ಆದರೆ, ಕೃಷಿ ಇಲಾಖೆಯು 59,500 ಕ್ವಿಂಟಾಲ್ ವಿವಿಧ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಆ ಪೈಕಿ ಸೋಯಾಬೀನ್ 41,800 ಕ್ವಿಂಟಾಲ್, ಭತ್ತ 900, ಉದ್ದು 1,100, ಹೆಸರು, ತೊಗರಿ 1,500, ಮೆಕ್ಕೆಜೋಳ 12 ಸಾವಿರ ಕ್ವಿಂಟಾಲ್ ಬೀಜಗಳನ್ನು ಬೇಡಿಕೆಗೆ ತಕ್ಕಂತೆ ಸಂಗ್ರಹಿಸಲಾಗಿದೆ. ಅದೇ ರೀತಿ 2,41,070 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರದ ಬೇಡಿಕೆ ಇದೆ.

ಕೃಷಿ ಇಲಾಖೆಯಿಂದ ಸರ್ಕಾರದ ಸಹಾಯಧನದಲ್ಲಿ 185 ಕೇಂದ್ರಗಳಲ್ಲಿ ಸಕಾಲದಲ್ಲಿ ಬೀಜ ವಿತರಿಸುತ್ತಿದ್ದೇವೆ. ಅದೇ ರೀತಿ ರಸಗೊಬ್ಬರವನ್ನು ಕೊಡುತ್ತಿದ್ದೇವೆ. ಬೀಜ-ಗೊಬ್ಬರದಲ್ಲಿ ಯಾವುದೇ ರೀತಿ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿದೆ. ಈಗಾಗಲೇ 8-10 ಸಾವಿರ ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಬಿತ್ತನೆಗೆ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ಇಲಾಖೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಶಿವನಗೌಡ ಪಾಟೀಲ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ 7.32 ಲಕ್ಷ ಹೆಕ್ಟೇರ್ ಬಿತ್ತನೆಗೆ ಕೃಷಿ ಇಲಾಖೆ ಗುರಿ ಇಟ್ಟುಕೊಂಡಿದೆ. ಬಿತ್ತನೆಗೆ ಅಗತ್ಯ ಬೀಜ-ಗೊಬ್ಬರವನ್ನು ದಾಸ್ತಾನು ಮಾಡಿದೆ. 185 ಕೇಂದ್ರಗಳಲ್ಲಿ ಸಕಾಲದಲ್ಲಿ ಬೀಜ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬೀಜ, ಗೊಬ್ಬರದಲ್ಲಿ ಯಾವುದೇ ರೀತಿ ಕೊರತೆ ಇಲ್ಲ ಎಂದು ಶಿವನಗೌಡ ಪಾಟೀಲ ಹೇಳಿದ್ದಾರೆ.