ಮತ್ತು ಬರುವ ಸಿಹಿ ತಿನಿಸಿ ವೃದ್ಧೆಯಿಂದ 12 ಲಕ್ಷ ರು ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ

| Published : May 10 2025, 01:09 AM IST

ಮತ್ತು ಬರುವ ಸಿಹಿ ತಿನಿಸಿ ವೃದ್ಧೆಯಿಂದ 12 ಲಕ್ಷ ರು ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಮುಂಭಾಗ ವೃದ್ಧೆ ಕುಳಿತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅರ್ಚಕರ ಮನೆ ಎಲ್ಲಿ ಬರುತ್ತದೆ ಎಂದು ಕೇಳಿದ್ದಾನೆ. ಅವರು ನನಗೆ ಗೊತ್ತಿಲ್ಲ ಎಂದು ತಿಳಿಸಿದಾಗ ಪರಿಚಯ ಮಾಡಿಕೊಳ್ಳುವ ನೆಪದಲ್ಲಿ ಅವನು ತಂದಿದ್ದ ಸಿಹಿಯನ್ನು ನೀಡಿದ್ದಾನೆ.

ಕನ್ನಡಪ್ರಭ ವಾರ್ತೆ ಹಲಗೂರುಸಿಹಿಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅದನ್ನು ತಿನ್ನಿಸಿ ವೃದ್ಧೆ ಕೈಯಲ್ಲಿದ್ದ ಆರು ಬಳೆಗಳು, ಕತ್ತಿನಲ್ಲಿದ್ದ ಸರ ಹಾಗೂ ಬೆರಳಿನಲ್ಲಿದ್ದ ಒಂದು ಉಂಗುರ ಸೇರಿ ಒಟ್ಟು 126 ಗ್ರಾಂ ತೂಕದ 12 ಲಕ್ಷ ರು. ಮೌಲ್ಯದ ಚಿನ್ನವನ್ನು ಅಪಹರಿಸಿ ಪರಾರಿಯಾಗಿರುವ ಘಟನೆ ಕುರುಬರ ಬೀದಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಗ್ರಾಮದಲ್ಲಿ ವಾಸವಾಗಿರುವ ಕಮಲಮ್ಮ ಚಿನ್ನಾಭರಣ ಕಳೆದುಕೊಂಡವರು. ಮನೆ ಮುಂಭಾಗ ವೃದ್ಧೆ ಕುಳಿತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅರ್ಚಕರ ಮನೆ ಎಲ್ಲಿ ಬರುತ್ತದೆ ಎಂದು ಕೇಳಿದ್ದಾನೆ. ಅವರು ನನಗೆ ಗೊತ್ತಿಲ್ಲ ಎಂದು ತಿಳಿಸಿದಾಗ ಪರಿಚಯ ಮಾಡಿಕೊಳ್ಳುವ ನೆಪದಲ್ಲಿ ಅವನು ತಂದಿದ್ದ ಸಿಹಿಯನ್ನು ನೀಡಿದ್ದಾನೆ.

ಕಳ್ಳ ನೀಡಿದ ಸಿಹಿ ತಿಂದ ನಂತರ ಅವರಿಗೆ ಮಂಕುಬಂತಾಗಿ ಅವರ ಕೈಯಲ್ಲಿದ್ದ ಪ್ರತಿ ಬಳೆ 15 ಗ್ರಾಂ ತೂಕದ ಒಟ್ಟು ಆರು ಬಳೆಗಳು ಮತ್ತು 30 ಗ್ರಾಂ ಕತ್ತಿನ ಚೈನು, 6 ಗ್ರಾಂ ಬೆರಳಲ್ಲಿದ್ದ ಉಂಗುರವನ್ನು ಕಸಿದು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಭೇಟಿ ನೀಡಿ ಕಮಲಮ್ಮ ಅವರಿಂದ ಮಾಹಿತಿ ಪಡೆದುಕೊಂಡು ಅವರಿಗೆ ನಿಮ್ಮಿಂದ ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಾಪಸ್ ಕೊಡುವುದಾಗಿ ಧೈರ್ಯ ತುಂಬಿದರು.

ಹಲಗೂರು ಪಟ್ಟಣದ ಬೀದಿಗಳು ಹಾಗೂ ಅಂಗಡಿ ಮುಂಗಟುಗಳ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇದರಿಂದ ಅಪರಾಧ ಕೃತ್ಯಗಳನ್ನು ತಡೆಯಲು, ಆರೋಪಿಗಳನ್ನು ಬಂಧಿಸಲು ಸಹಾಯವಾಗುತ್ತದೆ ಎಂದು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಸೂಚಿಸಿದರು.

ಅಪರಿಚಿತರು ಯಾರೇ ಆಗಲಿ ನಿಮ್ಮ ಮನೆ ಮುಂದೆ ಅಥವಾ ಬೀದಿಯಲ್ಲಿ ತಿರುಗಾಡುತ್ತಿದ್ದರೆ ನಮಗೆ ಮಾಹಿತಿ ನೀಡಿ ಅಥವಾ ಅವರಿಂದ ಯಾವುದೇ ತಿಂಡಿ ತಿನಿಸುಗಳನ್ನು ತೆಗೆದುಕೊಳ್ಳಬೇಡಿ. ಅನುಮಾನಾಸ್ಪದ ವ್ಯಕ್ತಿಗಳ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ವೃದ್ಧೆ ಕಮಲಮ್ಮನ ಅಣ್ಣನ ಪುತ್ರ ನಾಗೇಂದ್ರ ದೂರು ನೀಡಿದನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.------------

9ಕೆಎಂಎನ್ ಡಿ24,25

ಅಪರಿಚಿತನಿಂದ ಚಿನ್ನ ಕಳೆದುಕೊಂಡ ಕಮಲಮ್ಮವೃದ್ಧೆಯನ್ನು ವಿಚಾರಿಸುತ್ತಿರುವ ಪೊಲೀಸರು.