ಸಾರಾಂಶ
ಇವತ್ತು ವಕ್ಫ್ ಮೂಲಕ ನಿಮ್ಮ ಆಸ್ತಿ, ಹೊಲ, ಮಠಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಹಿಂದೂಗಳನ್ನೂ ಮುಗಿಸುವ ಕೆಲಸವಾಗುತ್ತದೆ. ಆದ್ದರಿಂದ, ನಾವು ಒಂದಾಗದಿದ್ದರೆ ಮುಂದೆ ಭವಿಷ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸವಣೂರು: ದೇಶದ, ಈ ರಾಜ್ಯದ ಹಿಂದೂಗಳು ಬ್ರಾಹ್ಮಣ, ಲಿಂಗಾಯತ, ಕುರುಬ, ಎಸ್ಸಿ-ಎಸ್ಟಿ ಎನ್ನದೇ ಜಾತಿ ಮತ ಮರೆತು ಒಂದಾಗಬೇಕಾದ ಕಾಲ ಬಂದಿದೆ. ಇವತ್ತು ವಕ್ಫ್ ಮೂಲಕ ನಿಮ್ಮ ಆಸ್ತಿ, ಹೊಲ, ಮಠಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಹಿಂದೂಗಳನ್ನೂ ಮುಗಿಸುವ ಕೆಲಸವಾಗುತ್ತದೆ. ಆದ್ದರಿಂದ, ನಾವು ಒಂದಾಗದಿದ್ದರೆ ಮುಂದೆ ಭವಿಷ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಅವರು ಮಾತನಾಡಿದರು.
ಭರತ ಬೊಮ್ಮಾಯಿ ಸೋಲಿಸಲು ಇಡೀ ರಾಜ್ಯ ಸರ್ಕಾರವೇ ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದೆ. ಗ್ರಾಪಂಗೆ ಒಬ್ಬರು ಸಚಿವರು, ಅವರಿಗೆ ಸಹಾಯಕರಾಗಿ 10 ಜನ ಶಾಸಕರನ್ನು ನೇಮಿಸಲಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ನಾಚಿಕೆಯಾಗಬೇಕು. ಕ್ಷೇತ್ರದಲ್ಲಿ ಅತಿವೃಷ್ಟಿಗೆ ಹಾನಿಗೊಳಗಾದ 13000 ಮನೆಗಳನ್ನು ನಿರ್ಮಿಸಿದ್ದಾರೆ. ವ್ಯವಸ್ಥಿತವಾದ ನೀರಾವರಿ ಯೋಜನೆಯಿಂದ ಈ ಭಾಗದ ಕೆರೆಗಳನ್ನು ತುಂಬಿಸಿದ್ದಾರೆ. ಅದಕ್ಕಾಗಿ ನಮಗಾಗಿ ಕೆಲಸ ಮಾಡುವವರನ್ನು, ನಮ್ಮವರನ್ನು ಆರಿಸಿ ಕಳಿಸಬೇಕು. ನಮಗೆ ಪೈಲ್ವಾನ್ ಬೇಕಾಗಿಲ್ಲ, ನಮಗಾಗಿ ದುಡಿಯುವ, ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕಾಗಿದ್ದಾರೆ ಎಂದರು.ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಮಯ್ಯ ಅವರ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಎಸ್ಪಿಯವರು ಸಾಲ ಹೆಚ್ಚಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕಟಣೆ ನೀಡುತ್ತಾರೆ. ಅಧಿಕಾರಿಗಳು ರಾಜಕಾರಣ ಮಾಡಬಾರದು ಎಂದು ಹೇಳಿದರು. ಗ್ಯಾರಂಟಿ..ಗ್ಯಾರಂಟಿ.... ಎಂದು ಬಾಯಿಬಡಿದುಕೊಳ್ಳುವ ಸಿಎಂ, ಡಿಸಿಎಂರಿಂದ ಯಾವುದೇ ಅಭಿವೃದ್ಧಿಗಳು ಆಗುತ್ತಿಲ್ಲ. ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ತಮ್ಮ ಒಂದು ಮತವನ್ನು ಕೂಲಿಯ ರೂಪದಲ್ಲಿ ನೀಡುವ ಮೂಲಕ ಉಪಕಾರ ತೀರಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಂತ್ರೋಡಿ ಗ್ರಾಪಂ ಅಧ್ಯಕ್ಷ ಬಾಪುಗೌಡ ಕೊಪ್ಪದ, ಮುಖಂಡರಾದ ಧರೆಪ್ಪಗೌಡ ಪಾಟೀಲ, ಬಸನಗೌಡ ಕೊಪ್ಪದ, ಬಸವರಾಜ ಕುಂದೂರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮತದಾರರು ಇದ್ದರು.