ಸಾರಾಂಶ
ಉಳ್ಳೇರಹಳ್ಳಿ ಭೂತಮ್ಮನ ಗುಡ್ಡದಲ್ಲಿ ಹಚ್ಚುವ ದೀಪ ಮಳೆ, ಗಾಳಿಗೆ ಆರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ದೀಪ ಪ್ರಕಾಶಮಾನವಾಗಿ ಉರಿದರೆ ಆ ವರ್ಷವಿಡೀ ಉತ್ತಮ ಮಳೆ ಬೆಳೆ ಫಸಲು ಸಿಗುತ್ತದೆ ಎಂದು, ದೀಪ ಮಂದವಾಗಿ ಉರಿದರೆ ಮಳೆ ಬೆಳೆ ಕಡಿಮೆಯಾಗುತ್ತದೆ ಎಂದು ದೀಪ ಮಧ್ಯರಾತ್ರಿ ಆರಿ ಹೋದರೆ ಕೆಂಡವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ
ಕನ್ನಡಪ್ರಭ ವಾರ್ತೆ ಟೇಕಲ್
ಮಾಲೂರು ತಾಲೂಕು ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ಳೇರಹಳ್ಳಿ ಗ್ರಾಮದ ಭೂತಮ್ಮನ ಬೆಟ್ಟದಲ್ಲಿ ಅತೀ ವಿಶೇಷವಾಗಿ ಪುರಾತನ ಕಾಲದಿಂದ ಪ್ರತಿವರ್ಷದ ಯುಗಾದಿ ಹಬ್ಬದಂದು ಸಂಜೆ ಅಖಂಡ ದೀಪ (ಜ್ಯೋತಿ) ಹಚ್ಚುವುದು ನೂರಾರು ವರ್ಷಗಳಿಂದ ಪ್ರತೀತಿಯಲ್ಲಿದೆ. ಇದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ.ಭೂತಮ್ಮನ ಬೆಟ್ಟದ ಅಂಚಿನಲ್ಲಿ ಭೂತಮ್ಮನ ಗುಡ್ಡವಿದ್ದು ಭೂಮಿ ಮಟ್ಟದಿಂದ ಬರಿ ಬಂಡೆ ಕಲ್ಲುಗಳನ್ನೆ ಏರಿ ಸುಮಾರು ೧೫ ಕಿ.ಮೀ ಮೇಲೆ ಕ್ರಮಿಸಿ ಅಲ್ಲಿರುವ ಭೂತಮ್ಮನ ಗುಡ್ಡದಲ್ಲಿ ದೀಪ ಹಚ್ಚಲಾಗುತ್ತದೆ. ಹಬ್ಬದ ಸಂಜೆ ಹಚ್ಚಿದರೆ ಈ ದೀಪ ಮಾರನೇ ದಿನದವರೆಗೂ ಪ್ರಕಾಶಮಾನವಾಗಿ ಉರಿಯುತ್ತದೆ.150 ಗ್ರಾಮಗಳಿಗೆ ಕಾಣುವ ಜ್ಯೋತಿ೧೫೦ ಗ್ರಾಮಗಳಿಗೆ ಕಾಣುವ ದೀಪ : ಈ ದೀಪವು ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಟೇಕಲ್, ಮಾಸ್ತಿ, ಬೂದಿಕೋಟೆ, ತಮಿಳುನಾಡಿನ ಹೊಸೂರು, ಬೇರಿಕೆ ಇನ್ನೂ ಸುಮಾರು ೧೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಲ್ಲರಿಗೂ ಕಾಣಸಿಗುತ್ತದೆ. ಎಲ್ಲರೂ ಭಕ್ತಿಭಾವದಿಂದ ಬೆಟ್ಟದಂಚಿನಲ್ಲಿ ಉರಿಯುತ್ತಿರುವ ದೀಪಕ್ಕೆ ನಮಸ್ಕರಿಸುತ್ತಾರೆ.ಹಿರಿಯರ ಲೆಕ್ಕಾಚಾರದಂತೆ ಉಳ್ಳೇರಹಳ್ಳಿ ಭೂತಮ್ಮನ ಗುಡ್ಡದಲ್ಲಿ ಹಚ್ಚುವ ದೀಪ ಮಳೆ, ಗಾಳಿಗೆ ಆರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ದೀಪ ಪ್ರಕಾಶಮಾನವಾಗಿ ಉರಿದರೆ ಆ ವರ್ಷವಿಡೀ ಉತ್ತಮ ಮಳೆ ಬೆಳೆ ಫಸಲು ಸಿಗುತ್ತದೆ ಎಂದು, ದೀಪ ಮಂದವಾಗಿ ಉರಿದರೆ ಮಳೆ ಬೆಳೆ ಕಡಿಮೆಯಾಗುತ್ತದೆ ಎಂದು ದೀಪ ಮಧ್ಯರಾತ್ರಿ ಆರಿ ಹೋದರೆ ಕೆಂಡವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ.ದೀಪಕ್ಕೆ ೫೦ ಕೆ.ಜಿ ಎಣ್ಣೆ ಬಳಕೆ
ಭೂತಮ್ಮನ ಬೆಟ್ಟದ ಮೇಲೆ ದೀಪ ಹಚ್ಚುವುದು ಉಳ್ಳೇರಹಳ್ಳಿ ಗ್ರಾಮದ ನಾಯಕ ಜನಾಂಗದವರು, ಪುರಾತನ ಕಾಲದಿಂದ ಈ ಕಾರ್ಯವನ್ನು ಗ್ರಾಮಸ್ಥರೊಡನೆ ಸೇರಿ ಹಚ್ಚಲಾಗುತ್ತದೆ. ದೀಪ ಹಚ್ಚಲು ಮೊದಲಿಗೆ ಪಕ್ಕದ ಜಂಗಾನಹಳ್ಳಿ ಗ್ರಾಮದಿಂದ ದೊಡ್ಡಮಣ್ಣಿನ ಮಡಿಕೆ ಬರುತ್ತದೆ ಉಳ್ಳೇರಹಳ್ಳಿ ಗ್ರಾಮದಿಂದ ಬಿಳಿ ಬಟ್ಟೆ ಅಂದರೆ ಹತ್ತಿ ಬಟ್ಟೆಯಿಂದ ಮುಕ್ಕಾಲು ಅಡಿ ಗಾತ್ರದ ಉದ್ದದ ಬತ್ತಿಯನ್ನು ಮಾಡಲಾಗುತ್ತದೆ. ಸುಮಾರು ೫೦ಕ್ಕೂ ಹೆಚ್ಚು ಕೆ.ಜಿ.ಯಷ್ಟು ಎಣ್ಣೆಯನ್ನು ಹರಳನ್ನು ಮಣ್ಣಿನ ಮಡಿಕೆಗೆ ಹಾಕಿ ಹಬ್ಬದ ಸಂಜೆ ೬-೩೦ಕ್ಕೆ ಭೂತಮ್ಮನ ದೀಪವನ್ನು ಹಚ್ಚಲಾಗುತ್ತದೆ. ಉಳ್ಳೇರಹಳ್ಳಿ ಗ್ರಾಮವು ಯುಗಾದಿ ಹಬ್ಬದಂದು ತನ್ನದೆ ಆದಾ ವೈಶಿಷ್ಟ್ಯತೆ ಹೊಂದಿದ್ದು ಭೂತಮ್ಮನ ಬೆಟ್ಟ, ಭೂತಮ್ಮ ದೀಪ ಹಚ್ಚುವ ಭೂತಮ್ಮನ ಗುಡ್ಡ ಹತ್ತುವುದು ತುಂಬಾ ಪ್ರಯಾಸದ ಕೆಲಸ. ತಾಲ್ಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಬೆಟ್ಟ ಹತ್ತಲು ಉತ್ತಮ ರಸ್ತೆ ಮಾಡಿದರೆ ಜನರಿಗೆ ಸಹಕಾರಿಯಾಗುತ್ತದೆ ಎಂಬುದು ಭರ್ಕರ ಆಶಯ.