ಕನ್ನಡಪ್ರಭ ವಾರ್ತೆ ಹೊನ್ನಾವರ

ಸನಾತನ ಎಂದರೆ ಶಾಶ್ವತ ಸತ್ಯ ಹೇಳುವ ಧರ್ಮ. ನಮ್ಮ ವೇದ, ಉಪನಿಷತ್ತು ಎಂದು ಸಂಕುಚಿತ ದೃಷ್ಟಿ ಇಟ್ಟುಕೊಂಡಿಲ್ಲ. ಪ್ರ ತಿಯೊಂದು ಧರ್ಮದ ಬಗ್ಗೆ ಗೌರವ ಭಾವ ಹೊಂದಿದೆ‌ ಎಂದು ಬ್ರಹ್ಮಾನಂದ ಭಾರತೀ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆ ವಿದ್ಯಾಮಂದಿರದ ಆವಾರದಲ್ಲಿ ನಡೆದ ಹಿಂದೂ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬೇರೊಂದು ಗುಂಪು ಬಲಾತ್ಕಾರವಾಗಿ ಸಂಚಿನ ಮೂಲಕ ಮತಾಂತರ ಮಾಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಇತಿಹಾಸ, ಮಹತ್ವದ ಬಗ್ಗೆ ತಿಳಿಸಿಕೊಡಬೇಕು. ನಮ್ಮಲ್ಲಿನ ಶ್ರೇಷ್ಟ ವ್ಯಕ್ತಿಗಳ ಆದರ್ಶಗಳ ಬಗ್ಗೆ ಅರಿವು ಮೂಡಿಸಬೇಕು. ಸನಾತನ ಧರ್ಮದ ಆಚರಣೆ ಬಗ್ಗೆ ಹಿಂಜರಿಕೆ ಇರಬಾರದು. ಮನೆಯಲ್ಲಿ ಭಗವದ್ಗೀತೆ ಪಠಣ ಮಾಡಿಸಿ, ಉದಾತ್ತಗ್ರಂಥ ಓದಿಸಿ. ಈ ಶ್ರೇಷ್ಠ ಸಂಸ್ಕ್ರತಿ ಮುಂದಿನ ತಲೆಮಾರಿಗೆ ನೀಡುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಸಂಸ್ಕಾರ, ಸ್ವದೇಶಿ ಜಾಗೃತಿ ಆಗಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಆರ್‌ಎಸ್ಎಸ್‌ನ ದಾಮೋದರ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವ ಪಕ್ಷ ಅಥವಾ ಜಾತಿ, ಮತ, ಪಂಥದ ವಿರುದ್ಧವಾಗಿ ಇಲ್ಲ. ದೇಶ ವಿರೋಧಿಗಳ ವಿರುದ್ಧವಾಗಿ ನಿಲ್ಲುವುದಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.


ಶ್ರೀ ದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ನಂದಿತಾ ಭಟ್ಟ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಹಿಂದೂ ಸಂಚಾಲನ ಸಮಿತಿ ಖರ್ವಾ ಮಂಡಲದ ಅಧ್ಯಕ್ಷ ಉಮೇಶ ಭಟ್, ಖರ್ವಾ ವಿಎಸ್ಎಸ್ ಮುಖ್ಯ ಕಾರ್ಯನಿರ್ವಾಹಕ ಮೋಹನ ನಾಯ್ಕ ಸ್ವಾಗತಿಸಿದರು. ಪ್ರದೀಪ ಭಟ್ ನಿರ್ವಹಿಸಿದರು. ದತ್ತಾತ್ರೇಯ ಮೇಸ್ತ ವಂದಿಸಿದರು.

ಗಮನ ಸೆಳೆದ ರ್‍ಯಾಲಿ:

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೈಕ್ ರ್‍ಯಾಲಿ ಹಾಗೂ ಚಂಡೆವಾದನ, ಪೂರ್ಣಕುಂಭದ ಮೂಲಕ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಹಿಂದೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.