ಕಾವೇರಿ ನದಿ ಪಕ್ಕದಲ್ಲಿದ್ದರೂ ಗ್ರಾಮಕ್ಕೆ ಕುಡಿಯಲು ನೀರಿಲ್ಲ; ಮಹದೇವಪುರ ಬೋರೆ ಗ್ರಾಮಸ್ಥರ ಪ್ರತಿಭಟನೆ

| Published : Aug 05 2024, 12:33 AM IST / Updated: Aug 05 2024, 12:48 PM IST

ಕಾವೇರಿ ನದಿ ಪಕ್ಕದಲ್ಲಿದ್ದರೂ ಗ್ರಾಮಕ್ಕೆ ಕುಡಿಯಲು ನೀರಿಲ್ಲ; ಮಹದೇವಪುರ ಬೋರೆ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿ ಪಕ್ಕದಲ್ಲೇ ಹರಿಯುತ್ತಿದ್ದರೂ 10 ದಿನಗಳಿಗೊಮ್ಮೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಮಹದೇವಪುರ ಬೋರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

 ಶ್ರೀರಂಗಪಟ್ಟಣ :  ಕಾವೇರಿ ನದಿ ಪಕ್ಕದಲ್ಲೇ ಹರಿಯುತ್ತಿದ್ದರೂ 10 ದಿನಗಳಿಗೊಮ್ಮೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಮಹದೇವಪುರ ಬೋರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮುಂಗಾರು ಮಳೆ ಅಬ್ಬರ ಹೆಚ್ಚಾಗಿ ಪ್ರವಾಹ ಬಂದು ನೀರು ಹರಿದರೂ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನೀರು ಕೊಡಿಸಬೇಕು ಕಾಲೋನಿ ನಿವಾಸಿಗಳು ಅಳಲು ತೋಡಿಕೊಂಡರು.

ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳಿಗೆ ಪ್ರತಿ ದಿನ ಹಾಗೂ ಇನ್ನು ಕೆಲವು ವಾರ್ಡ್‌ಗಳಿಗೆ 2-3 ದಿನಕ್ಕೆ ಕೊಡಲಾಗುತ್ತದೆ. ಆದರೆ, ನಮ್ಮ 5ನೇ ವಾರ್ಡ್‌ಗೆ ಈ ಹಿಂದೆ 4 ದಿನಗಳೊಗೊಮ್ಮೆ ನೀರು ಕೊಡಲಾಗುತ್ತಿತ್ತು. ಈಗ ನದಿ ನೀರು ಹೆಚ್ಚಾದಾಗಿನಿಂದ 15 ದಿನವಾದರೂ ನೀರು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

5ನೇ ವಾರ್ಡ್ ನಲ್ಲಿರುವ ಜನರಿಗೆ ನೀರಿನ ಹಾಹಾಕಾರ ಹೆಚ್ಚಾಗಿದೆ. ಅಕ್ಕ ಪಕ್ಕದಲ್ಲಿಯೂ ಒಂದು ಕೊಳವೆ ಪಂಪ್ ಇಲ್ಲದೆ ಅಲ್ಲಿನ ಜನರು ನೀರಿಗಾಗಿ ಪರದಾಡುವಂತಾಗಿದೆ. ಇರುವ ಒಂದು ತೊಂಬೆಯಲ್ಲಿ ನೀರಿಲ್ಲ. ಸರಬರಾಜು ಮಾಡುವ ನೀರುಗಂಟಿಗೆ ನೀರು ಕೊಡಿ ಎಂದು ನಿವಾಸಿಗಗಳು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರದ ಜಲ ಜೀವನ್ ಮಿಷನ್ ಹೊಸ ಯೋಜನೆಯಿಂದ ನೀರು ಸರಬರಾಜು ಮಾಡಿ ನೀರು ಒದಗಿಸುವ ಯೋಜನೆ ಕೈಗೊಳ್ಳಲಾಗಿದ್ದರೂ ಸಹ ನದಿಯಿಂದ ಗ್ರಾಮದವರೆಗೂ ಪೈಪ್ ಮಾತ್ರ ಅಳವಡಿಸಿದೆ. ಆದರೆ, ಕಾಮಗಾರಿ ನಡೆಯದೆ ಸ್ಥಗಿತಗೊಂಡಿದೆ. ನಿವಾಸಿಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ ಎಂದು ತಾಪಂ, ಗ್ರಾಪಂ ಅಧಿಕಾರಿಗಳ ವಿರುದ್ಧ ಶಾಪ ಹಾಕಿದರು.

ತಾಪಂ ಇಒ ವೇಣು ಈ ಸಂಬಂಧ ಪ್ರತಿಕ್ರಿಯಿಸಿ, ಮಹದೇವಪುರ ಬೋರೆ ನೀರಿನ ಸಮಸ್ಯೆ ಗೊತ್ತಾಗಿದೆ. ಬಡಾವಣೆ ಬಳಿ ಕೊಳವೆ ಬಾವಿ ಕೊರೆಸಿದರೂ ನೀರು ಬಂದಿಲ್ಲ. ಜಲಜೀವನನ ಮಿಷ್‌ನ್ ಯೋಜನೆಯಿಂದ ನೀರು ಒದಗಿಸಲು ಕಾಮಗಾರಿ ನಡೆಯುತ್ತಿದೆ. ಈ ಹಿಂದಿನ ಎಂಜಿನಿಯರ್ ಕಾಮಗಾರಿ ವಿಳಂಬದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಮತ್ತೇ ಕಾಮಗಾರಿಗೆ ಚಾಲನೆ ದೊರೆತಿದ್ದು, ಆದಷ್ಟು ಬೇಗ ಬೋರೆ ಜನರಿಗೆ ನೀರು ಒದಗಿಸಲು ಪಿಡಿಒ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಹಿಂದೆ ನಾಲ್ಕು ದಿಗಳಿಗೊಮ್ಮೆ ನೀರು ಸರಬರಾಜು ಮಾಡಿ ತೊಂಬೆ ಮೂಲಕ ನೀರು ಕೊಡಲಾಗುತ್ತಿತ್ತು. ಈ ಬಾರಿ ನದಿ ಪ್ರವಾಹದಿಂದ ನೀರಿನ ಘಟಕದ ಮೋಟರ್‌ಗಳವರೆಗೆ ನೀರು ಬಂದು ಪಂಪ್ ಬಳಿ ಹೋಗಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಮಹದೇವಪುರ ಗ್ರಾಪಂ ಪಿಡಿಒ ನಾಗೇಂದ್ರ ತಿಳಿಸಿದರು.