ಉತ್ತರದ ಸಾಲು ದೀಪಗಳು ಕೃತಿ ಇಂದು ಲೋಕಾರ್ಪಣೆ

| Published : May 18 2025, 02:26 AM IST

ಸಾರಾಂಶ

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರು ಹಲವರ ಸಹಕಾರದಿಂದ ಈ ಕೃತಿ ಸಂಪಾದಿಸಿದ್ದು, ಒಂದು ಪ್ರದೇಶದಲ್ಲಿ ಬಾಳಿದ ಎರಡು ತಲೆಮಾರಿನ ಪ್ರಮುಖ ನೂರುಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಅಪರೂಪದ ಮತ್ತು ದೇಶದಲ್ಲೇ ಮೊದಲ ಪ್ರಯತ್ನ ಇದು.

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ- ಧಾರವಾಡ ಮಹಾನಗರವನ್ನು ಕೇಂದ್ರಸ್ಥಾನ ಮಾಡಿಕೊಂಡು ಈ ನಾಡಿಗೆ ಅನುಪಮ ಪತ್ರಿಕಾ ಸೇವೆ ಸಲ್ಲಿಸಿದ ಒಂದು ನೂರು ಜನ ಸುದ್ದಿಯೋಧರ ಬದುಕಿನ ಯಶೋಗಾಥೆ ದಾಖಲಿಸಿದ ‘ಉತ್ತರದ ಸಾಲು ದೀಪಗಳು’ಎನ್ನುವ ಅಪರೂಪದ ಕೃತಿ ಮೇ 18ರ ಬೆಳಗ್ಗೆ 11ಕ್ಕೆ ಲೋಕಾರ್ಪಣೆಯಾಗಲಿದೆ.

ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಕೃತಿ ಬಿಡುಗಡೆ ಮಾಡುವರು. ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು, ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಕಾರ್ಯಕಾರಿ ಸಮಿತಿ ರಾಜ್ಯ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಭಾಗವಹಿಸುವರು.

ಪತ್ರಕರ್ತರ ಬದುಕು: ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರು ಹಲವರ ಸಹಕಾರದಿಂದ ಈ ಕೃತಿ ಸಂಪಾದಿಸಿದ್ದು, ಒಂದು ಪ್ರದೇಶದಲ್ಲಿ ಬಾಳಿದ ಎರಡು ತಲೆಮಾರಿನ ಪ್ರಮುಖ ನೂರುಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಅಪರೂಪದ ಮತ್ತು ದೇಶದಲ್ಲೇ ಮೊದಲ ಪ್ರಯತ್ನ ಇದು.

ಈವರೆಗೆ ಆಯಾ ರಾಜ್ಯಗಳ ಮಾಧ್ಯಮಕ್ಕೆ ಸಂಬಂಧಿಸಿದ ಅಕಾಡೆಮಿಗಳು, ಸಮಿತಿಗಳು, ಪತ್ರಿಕಾ ಸಂಘಗಳು ಆಯ್ದ ಕೆಲವು ಪತ್ರಕರ್ತರ ಕುರಿತಂತೆ ಪುಸ್ತಕಗಳನ್ನು ಹೊರತಂದಿವೆ. ಆದರೆ, ಹೀಗೆ ಒಂದು ಪ್ರದೇಶದ ಮಾಧ್ಯಮ ಇತಿಹಾಸ ಮತ್ತು ಅಲ್ಲಿನ ಪ್ರಮುಖ ಪತ್ರಕರ್ತರ ಬದುಕು ಕಟ್ಟಿಕೊಟ್ಟಿದ್ದು ಇದೇ ಮೊದಲು.

ಕರ್ನಾಟಕ ಪತ್ರಿಕೋದ್ಯಮಕ್ಕೆ ಈಗ ಹದಿನಾರು ದಶಕಕ್ಕೂ ಹೆಚ್ಚಿನ ಅವಧಿಯ ದೀರ್ಘ ಇತಿಹಾಸವಿದೆ. ಕಲ್ಲಚ್ಚಿನಲ್ಲಿ ಮಂಗಳೂರು ಸಮಾಚಾರ ಪ್ರಕಟಣೆಯಿಂದ (1843ರ ಜುಲೈ 1ರಂದು) ಪ್ರಾರಂಭವಾದ ಪತ್ರಿಕೋದ್ಯಮದ ಬಿತ್ತನೆ ಅಂದಿನ ಮುಂಬೈ ಕರ್ನಾಟಕದಲ್ಲಿದ್ದ ಧಾರವಾಡ ಜಿಲ್ಲೆಯಲ್ಲಿ ಹುಲುಸಾಗಿ ಬೆಳೆದದ್ದು ಇತಿಹಾಸದ ಪುಟಗಳಲ್ಲಿದೆ.

ನಾಡಿನ ಬಹುತೇಕ ಪತ್ರಿಕೆಗಳು ಕನ್ನಡ ನವೋದಯದ ಕಾಲದಲ್ಲಿ ಊರ್ಜಿತಗೊಂಡು ದೇಶಾಭಿಮಾನ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವು. ನಂತರದ ದಿನಗಳಲ್ಲಿ ಏಕೀಕೃತ ಕರ್ನಾಟಕ ನಾಡು, ನುಡಿ, ಸಂಸ್ಕೃತಿಯ ಸಂವರ್ಧನೆಗೆ ದೀಕ್ಷೆ ತೊಟ್ಟು ಅಹರ್ನಿಶಿ ದುಡಿದದ್ದು ಇತಿಹಾಸದಿಂದ ವ್ಯಕ್ತವಾಗುತ್ತದೆ.

ಘಟಾನುಘಟಿ ಪತ್ರಕರ್ತರು: ಕನ್ನಡ ಪತ್ರಿಕೋದ್ಯಮದ ಬಹುತೇಕ ಆದ್ಯರು ಮತ್ತು ಘಟಾನುಘಟಿಗಳು ಹುಬ್ಬಳ್ಳಿ- ಧಾರವಾಡದವರು ಎನ್ನುವುದು ನಿರ್ವಿವಾದ. ಕನ್ನಡ ಪತ್ರಿಕೋದ್ಯಮದ ಬಹುದೊಡ್ಡ ಅಧ್ಯಾಯ ಇಲ್ಲಿದೆ! ಈ ಸಾಧನೆ ಮತ್ತು ಇತಿಹಾಸವನ್ನು ಸಿದ್ದಣ್ಣವರ ಈ ಕೃತಿಯಲ್ಲಿ ಅತ್ಯಂತ ಶ್ರದ್ಧೆಯಿಂದ ದಾಖಲಿಸಿದ್ದಾರೆ.

ಮೊಹರೆ ಹಣಮಂತರಾಯರು, ಆರ್.ಆರ್. ದಿವಾಕರ್, ಪಾಟೀಲ ಪುಟ್ಟಪ್ಪ, ಕೆ. ಶಾಮರಾವ್ ಅವರಿಂದ ಮೊದಲಾಗುವ ಈ ಸುದ್ದಿಯೋಧರ ಪಟ್ಟಿಯಲ್ಲಿ ಎಂ. ಜೀವನ್, ಪಿ.ಎಲ್. ಬಂಕಾಪುರ, ಮಾರುತಿ ಬೆಳ್ಳಿಗಟ್ಟಿ, ಹನುಮಂತ ಹೂಗಾರ, ಜಿಬಿಎಸ್ ಜಗದೀಶ, ಜಿ.ಎಸ್. ಪುರಾಣಿಕಮಠ, ಗುರುರಾಜ ಜೋಶಿ, ಶಿವಾನಂದ ಜೋಶಿ, ಎಚ್.ಜಿ. ಬೆಳಗಾಂವಕರ, ಐ.ಕೆ. ಜಾಗೀರದಾರ, ಮತ್ತೀಹಳ್ಳಿ ಮದನ ಮೋಹನ್, ಖಾದ್ರಿ ಅಚ್ಯುತನ್, ಶಿವಾಜಿ ಗಣೇಶನ್, ರವಿ ಬೆಳಗೆರೆ, ರಂಜಾನ ದರ್ಗಾ ಅವರ ತನಕ ಕೊನೆಯಿಲ್ಲದಷ್ಟು ಸಾಲುದೀಪಗಳು ಈ ಕೃತಿಯಲ್ಲಿವೆ! ಪ್ರತಿಭೆಯಲ್ಲಿ ವೃತ್ತಿಪರತೆಯಲ್ಲಿ ಹೊಳೆದು ಬೆಳಗುವ ನಕ್ಷತ್ರಗಳು ಇವು.