ಸಾರಾಂಶ
ಹಾನಗಲ್ಲ: ನಲವತ್ತು ವರ್ಷಗಳಿಂದ ಅನಧಿಕೃತ ಜನವಸತಿ ಪ್ರದೇಶದ ಮನೆಗಳಲ್ಲಿ ವಾಸಿಸುತ್ತಿದ್ದ 990 ಕುಟುಂಬಗಳಿಗೆ ಇ-ಸ್ವತ್ತು ಸಹಿತ ನೋಂದಣಿ ಮಾಡಿಸಿ, ಮನೆಗಳ ಹಕ್ಕುಪತ್ರ ನೀಡಲಾಗುತ್ತಿದೆ. ಇನ್ನೂ ಇಂತಹ 9 ಸಾವಿರ ಪ್ರಕರಣಗಳು ತಾಲೂಕಿನಲ್ಲಿ ಬಾಕಿ ಇವೆ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ರಾಜ್ಯ ಕಂದಾಯ ಸಚಿವರ ಆದೇಶದಂತೆ ಕಳೆದ ಎರಡು ವರ್ಷಗಳಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ, ಅದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ನೋಂದಣಿ ಮಾಡಿಸಿ, ಅನಧಿಕೃತ ಜನವಸತಿಯಲ್ಲಿ ಮನೆ ಕಟ್ಟಿಕೊಂಡವರ ಮನೆಗಳನ್ನು ಅಧಿಕೃತಗೊಳಿಸಲಾಗಿದೆ. ಈ 990 ಮನೆಗಳು 2016ಕ್ಕಿಂತ ಮೊದಲು ಮನೆ ಕಟ್ಟಿದವುಗಳಾಗಿವೆ. ಇನ್ನೂ ಇಂತಹ 9 ಸಾವಿರ ಪ್ರಕರಣಗಳು ಬಾಕಿ ಇದ್ದು, ಆದ್ಯತೆ ಮೇಲೆ ಎಲ್ಲ ಮನೆಗಳ ಪರಿಶೀಲನೆ ನಡೆಸಿ ಅಧಿಕೃತ ಹಕ್ಕುಪತ್ರ ನೀಡಲಾಗುವುದು ಎಂದರು.ಈ 990 ಫಲಾನುಭವಿಗಳು ಅಕ್ಕಿಆಲೂರು, ಬಮ್ಮನಹಳ್ಳಿ ಹೋಬಳಿಯ ಹಳ್ಳಿಬೈಲ, ಲಕ್ಷ್ಮೀಪುರ, ಹುನಗನಹಳ್ಳಿ, ಹರಳಕೊಪ್ಪ, ಕೊಂಡೋಜಿ, ತಿಳವಳ್ಳಿ, ಉಪ್ಪಣಸಿ, ಕಲಕೇರಿ, ಕೆಲವರಕೊಪ್ಪ, ಬೀಂಗಾಪುರ, ಆಲದಕಟ್ಟಿ, ಅಕ್ಕಿವಳ್ಳಿ ಗ್ರಾಮಗಳಲ್ಲಿ ಈ ವರೆಗೆ ಅನಧಿಕೃತ ವಸತಿಗಳಲ್ಲಿ ವಾಸಿಸುತ್ತಿರುವವರಾಗಿದ್ದಾರೆ. ಈ ಮನೆಗಳನ್ನು 15 ವರ್ಷ ಪರಭಾರೆ ಮಾಡುವಂತಿಲ್ಲ. ಬಾಡಿಗೆಗೂ ಕೊಡುವಂತಿಲ್ಲ. ಸಕ್ರಮ ನಿಯಮ ಬಾಹಿರವಾದರೆ ಕ್ರಮ ಜರುಗಿಸಲಾಗುವುದು. ಈ ಮನೆಗಳ ಮೇಲೆ ಸಾಲ ಸೇರಿದಂತೆ ಎಲ್ಲ ಹಕ್ಕು ಮಾಲೀಕರಿಗಿದೆ. ಇದರೊಂದಿಗೆ 1 ಸಾವಿರ ಜನರಿಗೆ ಪೋಡಿ ಮುಕ್ತ ದಾಖಲೆಗಳನ್ನು ಕೂಡ ನೀಡಲಾಗುತ್ತಿದೆ. ಈ ಎಲ್ಲರಿಗೆ ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ಒಟ್ಟು 40 ಬಸ್ಗಳಲ್ಲಿ 2 ಸಾವಿರಕ್ಕೂ ಅಧಿಕ ಜನರು ತೆರಳಲಿದ್ದಾರೆ ಎಂದು ರೇಣುಕಾ ತಿಳಿಸಿದರು.
ಕಚೇರಿ ಸ್ಥಳಾಂತರ: ಹಾನಗಲ್ಲಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಮಿನಿ ವಿಧಾನಸೌಧದ ಬಳಿಯ ನೂತನ ಆಡಳಿತ ಕಚೇರಿಗೆ ಅಬಕಾರಿ, ಸಮಾಜ ಕಲ್ಯಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ನೀರಾವರಿ ನಿಗಮ, ಕೆಶಿಪ್, ರೇಷ್ಮೆ ಇಲಾಖೆ ಕಚೇರಿಗಳು ಒಂದೆರಡು ದಿನಗಳಲ್ಲಿ ಸ್ಥಳಾಂತರಗೊಳ್ಳಲಿವೆ ಎಂದು ಅವರು ತಿಳಿಸಿದರು.