ಶರಣಚೇತನ ಸಹಕಾರಿಯಿಂದ ಸಾಮಾಜಿಕ ಸೇವೆ: ಸಂತೋಷ ಚನಾಳ

| Published : May 18 2025, 02:21 AM IST

ಸಾರಾಂಶ

ಪ್ರತಿ ತಿಂಗಳ ಸದಸ್ಯರ ಸಭೆಯ ಭತ್ಯೆ ಹಣದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ನಮ್ಮ ಶರಣಚೇತನ ಸಂಸ್ಥೆ ಹಣಕಾಸು ಸಂಸ್ಥೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದೆ ಎಂದು ಸಂಸ್ಥೆ ನಿರ್ದೇಶಕ ಸಂತೋಷ ಚನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರತಿ ತಿಂಗಳ ಸದಸ್ಯರ ಸಭೆಯ ಭತ್ಯೆ ಹಣದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ನಮ್ಮ ಶರಣಚೇತನ ಹಣಕಾಸು ಸಂಸ್ಥೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದೆ ಎಂದು ಸಂಸ್ಥೆ ನಿರ್ದೇಶಕ ಸಂತೋಷ ಚನಾಳ ಹೇಳಿದರು.

ನಗರದ ರಮಾನಿವಾಸ ಸಭಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣಚೇತನ ಸೌಹಾರ್ದ ಸಹಕಾರಿ ಸಂಘ 9ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದ್ದು, ಮೇ 23ರಂದು ಅಂದಾಜು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ಕಟ್ಟಡದಲ್ಲಿ ಸೇವೆ ಮುಂದುವರಿಸಲಿದೆ. 1300 ಷೇರುದಾರರನ್ನು ಹೊಂದಿರುವ ಸಂಸ್ಥೆ ಪ್ರಸಕ್ತ ವರ್ಷದಲ್ಲಿ ₹98 ಸಾವಿರ ಲಾಭ ಗಳಿಸಿದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಇಂಗಳಗಾವಿ ಮಾತನಾಡಿ, ₹18 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹12 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಪ್ರಸಕ್ತ ವರ್ಷ ₹98 ಸಾವಿರ ನಿವ್ವಳ ಲಾಭ ಹೊಂದಿದ್ದು, ಷೇರುದಾರರಿಗೆ ಶೇ.15ರಷ್ಟು ಲಾಭಾಂಶ ವಿತರಣೆ ಮಾಡಲಾಗುವುದು. ಹೊಸ ಕಟ್ಟಡದಲ್ಲಿ ಗ್ರಾಹಕರಿಗೆ ವಿಶೇಷ ಸೇಫ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರ ಅನಕೂಲಕ್ಕಾಗಿ ಇ-ಸ್ಟಾಪಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಗುಣಮಟ್ಟದ ಸೇವೆ ನೀಡುವ ಮೂಲಕ ಗ್ರಾಹಕರ ಅನಕೂಲಕ್ಕೆ ತಕ್ಕಂತೆ ಸಾಲದ ವ್ಯವಸ್ಥೆ ನಮ್ಮಲ್ಲಿದೆ ಎಂದು ಹೇಳಿದರು.ಮೇ 23ರಂದು ಸಹಕಾರಿಯ ನೂತನ ಕಟ್ಟಡ ಉದ್ಘಾಟನೆ ನಡೆಯಲಿದ್ದು, ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು, ಓಲೆಮಠದ ಆನಂದ ದೇವರು, ಕೃಷ್ಣಾವಧೂತರು, ಸಿದ್ಧಮುತ್ಯಾ ಭಾಗವಹಿಸಲಿದ್ದಾರೆ. ಶಾಸಕ ಜಗದೀಶ ಗುಡಗುಂಟಿ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ಜಿ.ಎಸ್‌. ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಮುಖಂಡರಾದ ಅರುಣಕುಮಾರ ಶಾ, ಡಾ.ಉಮೇಶ ಮಹಬಳಶೆಟ್ಟಿ, ಏಗಪ್ಪ ಸವದಿ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ್‌ ಮೋಮಿನ್‌, ಸುಭಾಸ ಅನಂತಪೂರ, ಶರಣಗೌಡ ಪಾಟೀಲ, ಕರಾಸೌಸಸದ ಅಧ್ಯಕ್ಷ ಜಿ. ನಂಜೇಗೌಡ, ಆರ್‌.ಬಿ. ಪಾಟೀಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀಶೈಲ ಜಿರಲಿ, ರಮೇಶ ಉಪ್ಪಲದಿನ್ನಿ, ಮಲ್ಲು ಜೈನಾಪೂರ, ಬಸವರಾಜ ಹರಕಂಗಿ, ಶ್ರೀಕಾಂತ ಸರಶೆಟ್ಟಿ, ಕುಮಾರ ಬಾಗೇವಾಡಿ, ಸಂಗಮೇಶ ದಳವಾಯಿ, ಆನಂದ ಜಿರಲಿ, ಮುರಗೇಶ ಕಲ್ಯಾಣಶೆಟ್ಟಿ, ವ್ಯವಸ್ಥಾಪಕ ಸುನೀಲ ಹೊಸಮನಿ, ಕಿರಿಯ ಸಹಾಯಕರಾದ ಶ್ರೀಶೈಲ ಅಡಕಿ, ಶಿವಲಿಂಗ ಲಿಗಾಡಿ ಇತರರು ಇದ್ದರು.