ಸೂರು ನಿರ್ಮಿಸಿಕೊಡುವ ಕಾರ್ಯ ಶ್ರೇಷ್ಠ: ಪೇಜಾವರ ಶ್ರೀ

| Published : Oct 08 2024, 01:04 AM IST

ಸೂರು ನಿರ್ಮಿಸಿಕೊಡುವ ಕಾರ್ಯ ಶ್ರೇಷ್ಠ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲಾ ಕೋಟ್ಯಾನ್ ಎಂಬವರ ಬಡಕುಟುಂಬಕ್ಕೆ 8 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿಕೊಡಲಾಗುವ ಮನೆಗೆ ಶಿಲಾನ್ಯಾಸ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನವರಾತ್ರಿಯೆಂದರೆ ನಾಡಹಬ್ಬ, ನಾಡಹಬ್ಬವೆಂದರೆ ಕೆಲವರಿಗೆ ಮಾತ್ರ ಭಕ್ತಿ ಸಡಗರ ಸಂಭ್ರಮಗಳಲ್ಲ, ನಾಡಿನ ಸಮಸ್ತ ಜನತೆಯೂ ಸಂತೋಷ ನೆಮ್ಮದಿ ಸಂಭ್ರಮಗಳಿಂದ ಹಬ್ಬ ಆಚರಿಸುವಂತಾಗಬೇಕು. ಮನೆ ಇಲ್ಲದ ಬಡವನೊಬ್ಬ ಹೇಗೆ ತಾನೇ ಸಂಭ್ರಮ ಪಟ್ಟಾನು? ಆದ್ದರಿಂದ ಅಂಥಹ ಅರ್ಹ ಬಡಕುಟುಂಬಕ್ಕೆ ಮನೆ ಕಟ್ಟಿಕೊಡುವ ದೊಡ್ಡ ಕೆಲಸವೊಂದನ್ನು ಸಮಾಜದ ಹತ್ತು ಸಮಸ್ತರು ಮಾಡಿದರೆಂದರೆ ನಾಡಹಬ್ಬ ಸಾರ್ಥಕವಾಗುತ್ತದೆ. ಅಂಥಹ ಕೆಲಸ ಮಲ್ಪೆಯಲ್ಲಿ ನವರಾತ್ರಿಯ ಹೊತ್ತು ನಡೆಯುತ್ತಿರುವುದು ಅತ್ಯಂತ ಅಭಿನಂದನೀಯ ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಅವರು ಸೋಮವಾರ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಬೀಚ್ ಮಲ್ಪೆ, ಶ್ರೀ ಶಿವಪಂಚಾಕ್ಷರಿ ಭಜನಾ ಮಂದಿರ ಕೊಳ, ಶ್ರೀ ಬಾಲಕರ ರಾಮ ಭಜನಾ ಮಂದಿರ ಕೊಳ, ಶ್ರೀ ಹನುಮಾನ್ ವಿಠೋಭ ಭಜನಾ ಮಂದಿರ ಹನುಮಾನ್ ನಗರ, ಶ್ರೀ ಭಕ್ತಿ ಉದಯ ಪಂಡರಿನಾಥ ಭಜನಾ ಮಂದಿರ ತೊಟ್ಟಂ ವತಿಯಿಂದ ಕಮಲಾ ಕೋಟ್ಯಾನ್ ಎಂಬವರ ಬಡಕುಟುಂಬಕ್ಕೆ 8 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿಕೊಡಲಾಗುವ ಮನೆಗೆ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು.ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಈ ಬಾರಿ ಕರಾವಳಿಯಲ್ಲಿ ಮತ್ಸ್ಯ ಕ್ಷಾಮದ ಭೀತಿ ಎದುರಾಗಿದೆ. ಆ ನಡುವೆಯೂ ಮೀನುಗಾರರು ಇಂಥಹ ಸತ್ಕಾರ್ಯದ ಮೂಲಕ ಬಡವರ ಕಣ್ಣೀರೊರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.‌ ಸಮಸ್ತ ಹಿಂದು ಸಮಾಜಕ್ಕೆ ಸತ್ಪ್ರೇರಣೆ ನೀಡುತ್ತಿರುವ ಪೇಜಾವರ ಶ್ರೀಗಳು, ಮತ್ಸ್ಯ ಸಂಪತ್ತು ಅಭಿವೃದ್ಧಿಯಾಗಿ ಮೀನುಗಾರರ ಬದುಕಿನಲ್ಲಿ ನೆಮ್ಮದಿ ಉಂಟಾಗುವಂತೆ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ವಿನಂತಿಸಿದರು.ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ, ಐದು ಭಜನಾ ಸಂಘಗಳ ಅಧ್ಯಕ್ಷರು, ಮಾತೃಮಂಡಳಿ ಅಧ್ಯಕ್ಷರು, ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ, ತಾರಾನಾಥ ಕುಂದರ್, ರವಿ ಕರ್ಕೇರ, ರವಿ ಸಾಲ್ಯಾನ್, ಸೇಸಪ್ಪ ಸಾಲ್ಯಾನ್, ಸದಾನಂದ ಸಾಲ್ಯಾನ್, ನಾಗೇಶ ಸಾಲ್ಯಾನ್, ಧನಂಜಯ ತೊಟ್ಟಂ, ರಾಘವ ಕುಂದರ್, ಮಿಥುನ್ ಕುಂದರ್, ರಾಧಾಕೃಷ್ಣ ಮೆಂಡನ್ ಮೊದಲಾದವರಿದ್ದರು.ಮಂಜುನಾಥ ಸಾಲ್ಯಾನ್ ಸಹಕರಿಸಿದರು. ನಂದನ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಜಿ.ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.