ದೇವನಹಳ್ಳಿ: ಭಾರತದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ ಎಂದು ಬಿಜೆಪಿ ಮುಖಂಡ ಎಸ್‌ಎಲ್‌ಎನ್‌ ಅಶ್ವತ್ಥನಾರಾಯಣ್‌ ಹೇಳಿದರು.ಇಲ್ಲಿನ ಕೋಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬಿಜೆಪಿ ಹಾಗು ಜೆಡಿಎಸ್‌ ಕಾರ್ಯಕರ್ತರು ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಪ್ರತಿ ವಾರ್ಡಿನ ಮನೆ ಮನೆ ಪ್ರಚಾರ ನಡೆಸಿದರು.

ದೇವನಹಳ್ಳಿ: ಭಾರತದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ ಎಂದು ಬಿಜೆಪಿ ಮುಖಂಡ ಎಸ್‌ಎಲ್‌ಎನ್‌ ಅಶ್ವತ್ಥನಾರಾಯಣ್‌ ಹೇಳಿದರು.ಇಲ್ಲಿನ ಕೋಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬಿಜೆಪಿ ಹಾಗು ಜೆಡಿಎಸ್‌ ಕಾರ್ಯಕರ್ತರು ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಪ್ರತಿ ವಾರ್ಡಿನ ಮನೆ ಮನೆ ಪ್ರಚಾರ ನಡೆಸಿದರು. ಮೋದಿಯವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬೆಂಬಲ ನೀಡಿರುವುದರಿಂದ ಸ್ಥಳೀಯ ಮಟ್ಟದಲ್ಲೂ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕಾಗಿದೆ ಎಂದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ. ಸುಧಾಕರ್‌ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕಾದ ಸಂದರ್ಭ ಒದಗಿ ಬಂದಿದೆ. ದೇವನಹಳ್ಳಿ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದ್ದರೂ ಸಾಕಷ್ಟು ಅಭಿವೃದ್ಧಿಯಾಗಿಲ್ಲ. ಬದಲಾಗಿ ಹಿಂದುಳಿದಿದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿ ಮೋದಿಯವರು ಮತ್ತೆ ಪ್ರಧಾನಿಯಾಗಲೇ ಬೇಕು ಎಂದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಮಾತನಾಡಿ, ಎರಡೂ ಪಕ್ಷಗಳ ಮುಖಂಡರು ಅಲ್ಲದೆ ಕಾರ್ಯಕರ್ತರು ಸೇರಿದ್ದೇವೆ. ನಮ್ಮೆಲ್ಲರ ಉದ್ದೇಶ ಒಂದೇ ಆಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಡಾ. ಸುಧಾಕರ್‌ ಅತಿ ಹೆಚ್ಚಿನ ಮತಗಳನ್ನು ಗೆಲ್ಲಬೇಕು. ದೇವೇಗೌಡ ಅಪ್ಪಾಜಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದರು. ಹಾಗೆಯೇ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ, ಲಾಟರಿ ನಿಷೇಧ ಇತ್ಯಾದಿ ಯೋಜನೆಗಳನ್ನು ಜಾರಿಗೆ ತಂದರು. ಪ್ರಧಾನಿ ಮೋದಿಯವರ ಜೊತೆಯಲ್ಲಿ ಇಂತಹ ಮಹಾಪುರುಷರು ಇದ್ದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಾಣಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಮುನಿ ನಂಜಪ್ಪ, ದೇ.ಸೂ.ನಾಗರಾಜು, ವಿ.ಗೋಪಾಲ್‌, ಎಸ್‌. ರಮೇಶ್‌ಕುಮಾರ್‌, ವೈ.ಕೆ.ಚಂದ್ರಶೇಖರ್‌, ಸಾಯಿ ಕುಮಾರ್‌ ಬಾಬು, ಲಕ್ಷ್ಮೀನಾರಾಯಣ್‌, ಎಂ.ಕುಮಾರ್‌, ಅನಿಲ್‌ಕುಮಾರ್‌, ವಿ. ಗೋಪಾಲಕೃಷ್ಣ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ದೇವನಹಳ್ಳಿಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬಿಜೆಪಿ ಹಾಗು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಸಾಮೂಹಿಕ ಪೂಜೆ ಸಲ್ಲಿಸಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸುಧಾಕರ್‌ ಪರ ಚುನಾವಣಾ ಪ್ರಚಾರ ಕೈಗೊಂಡರು.