ಜಗತ್ತು ಶ್ರಮದಿಂದ ನಡೆಯುತ್ತದೆ, ಸಿದ್ಧಾಂತದಿಂದ ಅಲ್ಲ: ಸತ್ಯಬೋಧ ಜೋಶಿ

| Published : Jul 02 2024, 01:36 AM IST

ಸಾರಾಂಶ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು. ಕರ್ನಾಟಕದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ್’ ಪತ್ರಿಕೆಯ ಪ್ರತಿಯನ್ನು ಅನಾವರಣಗೊಳಿಸಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪತ್ರಕರ್ತರು ದೊರೆತ ಅವಕಾಶವನ್ನು ಬಳಸಿಕೊಂಡು ಸಮಾಜದ ಸಮಸ್ಯೆಗಳಿಗೆ ಮಿಡಿಯುವುದು ಅತೀ ಮುಖ್ಯ. ನಮ್ಮ ಸೇವೆಯ ಮೂಲಕವೇ ಸಮಾಜವನ್ನು ತಿದ್ದುವ ಕಾರ್ಯ ಮಾಡಬಹುದಾಗಿದೆ ಎಂದು ಮಣಿಪಾಲ ಎಂಐಸಿಯ ಟೆಲಿವಿಷಜನ್ ಮತ್ತು ಫಿಲ್ಮ್ ಪ್ರೊಡಕ್ಷನ್ ವಿಭಾಗದ ಪ್ರೊಫೆಸರ್‌ ಸತ್ಯಬೋಧ ಜೋಶಿ ಹೇಳಿದರು.

ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಕರ್ನಾಟಕದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ್’ ಪತ್ರಿಕೆಯ ಪ್ರತಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಸಮಾಜವನ್ನು ಸುಧಾರಿಸಲು ಹೊರಟ ನಾವು ನಮ್ಮ ಬದುಕನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಅದರ ಕಡೆ ನಾವು ಲಕ್ಷ್ಯ ವಹಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಮುಂದಿನ ಜನಾಂಗಕ್ಕೆ ಈ ಕ್ಷೇತ್ರ ಸುಂದರ ಆಗಿರಲು ಏನು ಮಾಡಬೇಕು ಎಂಬುದರ ಬಗ್ಗೆಯೂ ನಾವೆಲ್ಲ ಚಿಂತನೆ ಮಾಡಬೇಕು. ಜಗತ್ತು ಶ್ರಮ ವಹಿಸಿ ಕೆಲಸ ಮಾಡುವುದರಿಂದ ನಡೆಯುತ್ತದೆ ಹೊರತು ಸಿದ್ಧಾಂತದಿಂದ ಅಲ್ಲ. ಹಾಗಾಗಿ ಸಿದ್ಧಾಂತಕ್ಕಿಂತ ಕೆಲಸ ಮುಖ್ಯ ಎಂದರು.

‘ಪೊಲೀಸ್ ತನಿಖೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಮಾಧ್ಯಮಗಳು ಜನರ ಭಾವನೆಗಳ ಕಡೆ ಹೆಚ್ಚು ಗಮನ ಕೊಡದೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಇಂದಿನ ಜನರ ಮನಸ್ಥಿತಿ ಕೂಡ ಬದಲಾಗಿ, ನರಾತಕ್ಮತದ ಕಡೆ ಹೋಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆ ಬಗ್ಗೆ ನಾವೆಲ್ಲ ಆಲೋಚನೆ ಮಾಡಬೇಕಾಗಿರುವುದು ಅತೀ ಅಗತ್ಯ ಎಂದು ಹೇಳಿದರು.

ಸಾಕಷ್ಟು ಹಗರಣಗಳನ್ನು ಮಾಧ್ಯಮಗಳೇ ಬಯಲಿಗೆ ಎಳೆದಿದೆ ಎಂದ ಅವರು, ಇಂದು ಮಾಧ್ಯಮಗಳು ವ್ಯಕ್ತಿಯ ಭೌತಿಕವಾಗಿ ಹರಣ ಮಾಡುವ ಬದಲು ಚಾರಿತ್ರ ಹರಣ ಮಾಡುತ್ತಿದೆ. ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಹಿರಿಯ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.