ಕನ್ನಡಪ್ರಭ ವಾರ್ತೆ ದೂರಮನುಷ್ಯನಿಗಿರುವ ಯಾವುದೇ ತೆರನಾದ ನ್ಯೂನತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಬರಡನಪುರ ಗುರುಮಹಾಂತೇಶ್ವರ ದಾಸೋಹ ಮಠದ ಕಿರಿಯ ಸ್ವಾಮೀಜಿ ಯವರಾದ ಚನ್ನಬಸವ ಸ್ವಾಮೀಜಿ ಹೇಳಿದರು.ಮೈಸೂರು ತಾಲೂಕು ಜಯಪುರ ಹೋಬಳಿ ಬರಡನಪುರ ಗುರುಮಹಾಂತೇಶ್ವರ ಮಠದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ನಯರಾ ಎನರ್ಜಿ ಲಿಮಿಟೆಡ್ ಹಾಗೂ ಸಮುದಾಯ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ ದೃಷ್ಟಿ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಚಲನವಲನ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳ ಕೌಶಲ್ಯ ತರಬೇತಿ ಒಂದು ವಾರದ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಅನೇಕ ಅಂಗಸಂಸ್ಥೆಗಳನ್ನು ಹೊಂದಿದ್ದು, ಸಮುದಾಯ ಸಹಭಾಗಿತ್ವದೊಂದಿಗೆ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿವಿಧ ರೀತಿಯ ಕೌಶಲ್ಯ ಆಧಾರಿತ ತರಬೇತಿ ಶಿಬಿರ ಆಯೋಜಿಸಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ದೃಷ್ಟಿ ಇಲ್ಲದವರು, ಅಂಗವೈಕಲ್ಯ ನ್ಯೂನತೆ ಹೊಂದಿರುವವರು ಸೇರಿದಂತೆ ಅನೇಕರಿಗೆ ಸಂಸ್ಥೆಯು ಅವರ ಜೀವನೋಪಾಯಕ್ಕಾಗಿ ಕೌಶಲ ತರಬೇತಿ ನೀಡುತ್ತಿದ್ದು, ಜೀವನೋಪಾಯ ಕಟ್ಟಿಕೊಳ್ಳಲು ಸಹಾಯಕವಾಗಿವೆ ಎಂದು ಸಂಸ್ಥೆಯ ಸೇವಾ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.ಸಮಾಜ ಸೇವಕ ಎಸ್. ಶ್ರೀಕಾಂತ್ ಮಾತನಾಡಿ, ಅಂಧತ್ವ ಉಳ್ಳವರು,ನ್ಯೂನತೆ ಹೊಂದಿರುವವರು ಮನೋಸ್ಥೈರ್ಯವನ್ನು ಹೊಂದಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಒಂದು ವಾರಗಳ ಕಾಲ ಮಠದಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಕಲಿತ ತರಬೇತಿ ಕೌಶಲವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಪಿ. ರಮೇಶ್‌, ಹೈರಿಗೆ ಗ್ರಾಪಂ ಹರೀಶ್‌, ಮೈಸೂರು ತಾಲೂಕು ಪುನರ್ವಸತಿ ಸಂಪನ್ಮೂಲ ಸಂಯೋಜಕಿ ವಿ. ರಾಜೇಶ್ವರಿ, ಯೋಜನೆ ಸಂಯೋಜಕಿ ಎಚ್. ರುಕ್ಮಿಣಿ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸಿಬ್ಬಂದಿ ಇದ್ದರು.