ಧಾರವಾಡ:

ರಂಗಭೂಮಿ ಒಳಗೊಂಡಂತೆ ಕಲೆ ಮತ್ತು ಸಾಹಿತ್ಯ ಲೋಕವು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಈ ಬಿಕಟ್ಟನ್ನು ಕಲೆಯ ಸೃಷ್ಟಿಕರ್ತರು ಮತ್ತು ಕಲೆ ಸ್ವೀಕರಿಸಿ ಅನುಭವಿಸುವ ಸಹೃದಯರು ಗಂಭೀರವಾಗಿ ಚಿಂತಿಸಿ ಬಗೆಹರಿಸಿಕೊಳ್ಳಬೇಕೆಂದು ನಾಟಕಕಾರ, ರಂಗ ನಿರ್ದೇಶಕ ಕೆ.ವಿ. ಅಕ್ಷರ ಹೇಳಿದರು.

ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್‌ ಹೆಸರಿನಲ್ಲಿ ಕೊಡಮಾಡುವ ಶಾಂತರಂಗ ಹೆಸರಿನಲ್ಲಿ ಉತ್ತಮ ನಾಟಕ ಪ್ರಶಸ್ತಿಗೆ ಭಾಜನರಾದ ಕಂಠಿಹಾರ ನಾಟಕ ರಚಿಸಿದ ಶಿರೀಶ್ ಜೋಶಿಗೆ ಪ್ರಶಸ್ತಿ ಪ್ರದಾನ ಮಾಡಿದ ಅವರು, ರಂಗಭೂಮಿ ಮತ್ತು ಸಾಹಿತ್ಯವನ್ನೂ ಒಳಗೊಂಡಂತೆ ಕವಿ-ಕಾವ್ಯ-ಸಹೃದಯ ಈ ತ್ರಿಕೋನದ ಅನುಸಂಧಾನ ಪ್ರಕ್ರಿಯೆಯಲ್ಲಿಯೇ ಕಲಾಕೃತಿ ಸಹೃದಯತೆಯ ಸಾರ್ಥಕತೆ ತಲುಪಬೇಕು ಎಂದರು.

ಸಮಕಾಲೀನ ಸಂದರ್ಭದಲ್ಲಿ ಪ್ರದರ್ಶನ ಕಲೆಗಳು ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳಲ್ಲಿ ಪ್ರೇಕ್ಷಕರನ್ನು ಕೇಂದ್ರವಾಗಿಟ್ಟುಕೊಂಡು ತಾತ್ವಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಮಾತನಾಡಿದರು, ಕಂಠಿಹಾರ ಕೃತಿ ಕುರಿತು ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಅನಿಸಿಕೆ ತಿಳಿಸಿದರು. ಶಾಂತಕವಿ ಟ್ರಸ್ಟಿನ ಸದಸ್ಯರಾದ ಡಾ. ಅರವಿಂದ ಕುಲಕರ್ಣಿ ಇನ್ನೆರಡು ಕೃತಿಗಳಿಗೆ ಸಮಾಧಾನಕರ ಬಹುಮಾನ ಪ್ರಕಟಿಸಿದರು. ಪ್ರಶಸ್ತಿ ಪುರಸ್ಕೃತ ಶಿರೀಶ ಜೋಶಿ ಮಾತನಾಡಿದರು. ಸಕ್ಕರಿ ಬಾಬುರಾವ್ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಟ್ರಸ್ಟ್, ಕಾರ್ಯದರ್ಶಿ ಹನುಮೇಶ ಸಕ್ಕರಿ, ಸಾಹಿತಿಗಳಾದ ಹರ್ಷಾ ಡಂಬಳ, ಕೃಷ್ಣಾ ಕಟ್ಟಿ, ರಮೇಶ ನಾಡಗೇರ, ಸಮೀರ್ ಜೋಶಿ, ಪ್ರಕಾಶ ಗರುಡ, ರಜನಿ ಗರುಡ, ಡಾ. ಶಾಮಸುಂದರ ಬಿದರ ಕುಂದಿ ಮತ್ತಿತರರು ಇದ್ದಾರೆ.