ರಂಗಭೂಮಿ ಮಾನವೀಯತೆಯ ಪಾಠಶಾಲೆ: ಡಿ.ಪ್ರಸನ್ನ

| Published : Aug 25 2024, 01:55 AM IST

ಸಾರಾಂಶ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಎಚ್.ಎಸ್.ವೆಂಟೇಶ್ ಮೂರ್ತಿ ಅವರ ‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಂಗಭೂಮಿ ಮಾನವೀಯತೆಯ ಪಾಠಶಾಲೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಡಿ.ಪ್ರಸನ್ನ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಖಾಮುಖಿ ರಂಗ ತಂಡ, ಕಾಮನ್ ಮ್ಯಾನ್ ಸಂಸ್ಥೆ ಸಹಯೋಗದಲ್ಲಿ ಶಶಿ ಥಿಯೇಟರ್ ಪ್ರಸ್ತುತಪಡಿಸಿದ ಡಾ.ಎಚ್.ಎಸ್.ವೆಂಟೇಶ್ ಮೂರ್ತಿ ಅವರ ‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ಮಾನವೀಯತೆಯ ಪ್ರತೀಕವಾಗಿದೆ. ರಂಗ ಚಟುವಟಿಕೆಗಳು ಯುವಕರಲ್ಲಿ ಕ್ರೀಯಾಶೀಲತೆಯನ್ನು ತುಂಬುವುದರ ಜೊತೆಗೆ ಬದುಕಿನ ಪಾಠ ಕಲಿಸುತ್ತದೆ. ಹೊಸ ಪ್ರೇಕ್ಷಕರನ್ನು ರಂಗಭೂಮಿ ತನ್ನತ್ತ ಸೆಳೆದುಕೊಳ್ಳಬೇಕಾಗಿದೆ. ಹಾಗೆಯೇ ಹೊಸ ನಾಟಕಗಳ ರಚನೆ ಕೂಡ ಆಗಬೇಕಿದೆ. ರಂಗಾಯಣ ಈ ನಿಟ್ಟಿನತ್ತ ಕೆಲಸ ಮಾಡುತ್ತಿದೆ ಎಂದರು.

ರಂಗಾಯಣ ಆಡಳಿತಧಿಕಾರಿ ಶೈಲಜಾ ಮಾತನಾಡಿ, ಪೌರಾಣಿಕದ ಸ್ತ್ರೀ ಪಾತ್ರಗಳು ಅಂತರಂಗದಲ್ಲಿ ಮೌನವಾಗಿವೆ. ಈಗ ಹೊಸ ಹೊಸ ನಿರ್ದೇಶಕರು ಆ ಪಾತ್ರಗಳನ್ನು ಮಾತನಾಡಿಸತೊಡಗಿದ್ದಾರೆ. ಸ್ತ್ರೀಯರ ಅಂತರಂಗದ ಸೂಕ್ಷ್ಮತೆಗಳನ್ನು ವರ್ತಮಾನದೊಂದಿಗೆ ಸಮೀಕರಿಸುವ ಪ್ರಯತ್ನ ನಡೆಯುತ್ತಿದೆ. ಉರಿಯ ಉಯ್ಯಾಲೆ ಕೂಡ ಇತಂಹದೊಂದು ಪ್ರಯತ್ನವಾಗಿದೆ ಎಂದರು.

ಕಾಮನ್ ಮ್ಯಾನ್ ಸಂಸ್ಥೆ ಗೌರವಾಧ್ಯಕ್ಷ ಕೆ.ಜಿ.ವೆಂಕಟೇಶ್ ಮಾತನಾಡಿ, ಮಹಾಭಾರತದ ಸ್ತ್ರೀ ಪಾತ್ರಗಳು ಬದುಕಿನೊಂದಿಗೆ ಮಿಲನಗೊಂಡಿವೆ. ಅದರಲ್ಲೂ ದ್ರೌಪದಿಯ ಪಾತ್ರ ಹಲವು ಉರಿವ ಜ್ವಾಲೆಗಳಿಂದ ಕೂಡಿದೆ. ನೋವು, ಸಂಕಟ, ಸಿಟ್ಟು, ಅಪಮಾನಗಳ ಒಡಲ ಬೇಗೆಯಲ್ಲಿ ಬೆಂದ ಬಗೆಯನ್ನು ಉರಿಯ ಉಯ್ಯಾಲೆ ನಾಟಕ ಹೇಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಮುಖಾಮುಖಿ ಎಸ್‌ಟಿ ರಂಗತಂಡದ ಅಧ್ಯಕ್ಷ ಮಂಜು ರಂಗಾಯಣ ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಾಳಿ ಚಂದ್ರಶೇಖರ್, ರಂಗಾಯಣ ನಿರ್ದೇಶಕ ಡಿ.ಪ್ರಸನ್ನ ನಿವೃತ್ತ ಶಿಕ್ಷಕರಾದ ಶಶಿಕಲಾ, ಶಿವರಾಮ ರಾವ್, ಗಿಚ್ಚಿ ಗಿಲಿಗಿಲಿ ಕಲಾವಿದೆ ದೀಕ್ಷಾ ಅವರುಗಳನ್ನು ಸನ್ಮಾನಿಸಲಾಯಿತು. ಗಣೇಶ್ ಬಿಳಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.