ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಂಗ ಚಟುವಟಿಕೆಗಳು ಉತ್ಸವಗಳಾಗದೇ ಚಳವಳಿಗಳಾಗಬೇಕು. ಇಲ್ಲದೇ ಇದ್ದರೆ ಮನೋರಂಜನೆಗೆ ಸೀಮಿತವಾಗುತ್ತವೆ ಹೊರತು ಬೇರೇನನ್ನೂ ಹೇಳಲಾರವು ಎಂದು ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.ಇಲ್ಲಿನ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 3ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉಡುಪಿ ರಂಗ ಚಟುವಟಿಕೆಗಳ ದೊಡ್ಡ ಕೇಂದ್ರವಾಗಿದೆ. ಇಲ್ಲಿ ಅನೇಕ ರಂಗ ಸಂಸ್ಥೆಗಳಿವೆ. ನಿರಂತರ ರಂಗ ಕಾರ್ಯಕ್ರಮಗಳಾಗುತ್ತಿವೆ. ಆದರೆ, ಪರಸ್ಪರ ಕೊಡುಕೊಳ್ಳುವಿಕೆ ಇಲ್ಲದೇ ಸಂಸ್ಥೆಗಳು ದ್ವೀಪಗಳಾಗುತ್ತಿವೆ. ಇಲ್ಲಿ ರಂಗ ಚಳವಳಿಯಾಗದೇ ಇರಲು ಇದೂ ಕೂಡಾ ಕಾರಣ ಎಂದು ವಿಶ್ಲೇಷಿಸಿದರು.ರಂಗಸಾಧಕ ಸನ್ಮಾನ ಸ್ವೀಕರಿಸಿದ ಕಲಾವಿದ ವಿಜಯ್ ಆರ್. ನಾಯಕ್ ಮಾರ್ಪಳ್ಳಿ ಮಾತನಾಡಿ, ‘ಸುಮನಸಾ ಸಂಸ್ಥೆ ನಾಟಕ ಪ್ರದರ್ಶನ ನೀಡಲು ಸೀಮಿತಗೊಳ್ಳದೇ ಅನೇಕ ರಂಗಚಟುವಟಿಕೆಗಳನ್ನು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ ಎಂದು ಶ್ಲಾಘಿಸಿದರು.ಉದ್ಯಮಿಗಳಾದ ರಂಜನ್ ಕಲ್ಕೂರ, ಸುರೇಶ್ ಯು., ಮಹೇಶ್ ಎಂ. ಬಂಗೇರ, ಸದಾನಂದ ಸಾಲ್ಯಾನ್, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ, ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿನಯ್ ಕುಮಾರ್ ಕಲ್ಮಾಡಿ ಸ್ವಾಗತಿಸಿದರು. ಸದಸ್ಯರಾದ ಕವನಾ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ‘ನಗ್ನ ಥಿಯೇಟರ್ ಉಡುಪಿ’ ತಂಡದಿಂದ ‘ಅಗ್ನಿ ಮತ್ತು ಮಳೆ’ ಪ್ರದರ್ಶನಗೊಂಡಿತು.