ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ । ಶಿವಕುಮಾರ ರಂಗಶಾಲೆಯ ರಂಗಶಾಲಾ ನಾಟಕೋತ್ಸವ ಸಮಾರೋಪಕನ್ನಡಪ್ರಭ ವಾರ್ತೆ ಹೊಸದುರ್ಗ
ರಂಗಭೂಮಿ ಕಲಾವಿದನಿಗೆ ಕೇವಲ ಅಭಿನಯವನ್ನಷ್ಟೇ ಕಲಿಸಿಕೊಡುವುದಿಲ್ಲ, ಬದಲಿಗೆ ಅದು ಬದುಕಿನ ಸಂಸ್ಕೃತಿ, ಸಂಸ್ಕಾರ ಹಾಗೂ ಬದುಕುವ ವಿಧಾನವನ್ನು ಕಲಿಸುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ಕಳೆದ ಐದು ದಿನಗಳಿಂದ ನಡೆದ ಶಿವಕುಮಾರ ರಂಗಶಾಲೆಯ ರಂಗಶಾಲಾ ನಾಟಕೋತ್ಸವದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾಟಕೋತ್ಸವಗಳು ಕೇವಲ ಸಾಂಕೇತಿಕವಾಗಿರದೆ, ಅರ್ಥಪೂರ್ಣವಾಗಿ ಮೂಡಿಬರಬೇಕು. ಕಳೆದ 18 ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಕನಿಷ್ಠ 4 ನಾಟಕಗಳನ್ನು ಪ್ರಯೋಗಿಸುತ್ತಾ ಬರಲಾಗಿದ್ದು, ಈ ವರ್ಷ ವಿಶೇಷವಾಗಿ ಐದು ನಾಟಕಗಳ ಮರುಪ್ರಯೋಗದೊಂದಿಗೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ಸುಸಜ್ಜಿತ ರಂಗಮಂದಿರದಲ್ಲಿ ನಟಿಸುವುದು ಸುಲಭ. ಆದರೆ ನಿಜವಾದ ಪರೀಕ್ಷೆ ಆರಂಭವಾಗುವುದೇ ಶಿವಸಂಚಾರದ ಪ್ರವಾಸದಲ್ಲಿ. ಅಲ್ಲಿ ಎದುರಾಗುವ ಸೌಲಭ್ಯಗಳ ಕೊರತೆಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವ ಕಲೆ ಕಲಾವಿದನಿಗೆ ಸಿದ್ಧಿಸಬೇಕು. ಸಾರ್ವಜನಿಕರು ಕಲಾವಿದರ ನೈತಿಕತೆ ಮತ್ತು ಸಾಮಾಜಿಕ ಪರಿಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಸಾರ್ವಜನಿಕ ಜೀವನದಲ್ಲಿ ನಮ್ಮ ನಡವಳಿಕೆ ಅತ್ಯಂತ ಮುಖ್ಯ ಎಂದರು.
ರಂಗ ಶಿಕ್ಷಕ ವೆಂಕಟೇಶ್ ಮಾತನಾಡಿ, ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಂತೆ ಕೇವಲ ಉತ್ಪನ್ನಗಳನ್ನು ತಯಾರಿಸುತ್ತಿರುವಾಗ, ಶಿವಕುಮಾರ ರಂಗಶಾಲೆಯು ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಸಂವೇದನಾಶೀಲ ವ್ಯಕ್ತಿಗಳನ್ನು ಹಾಗೂ ಪ್ರಜ್ಞಾವಂತ ನಾಗರಿಕರನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು.
ಹೊಸದುರ್ಗದ ಜೀವವಿಮೆ ಅಧಿಕಾರಿ ನವೀನ್ ಕುಮಾರ್ ಮಾತನಾಡಿ, ಭಾವನೆಗಳ ಸಂಸ್ಕಾರವೇ ನಿಜವಾದ ಶಿಕ್ಷಣ. ಕೇವಲ ದೊಡ್ಡ ನಟರಾಗುವುದು ಅಥವಾ ಸಿನಿಮಾ-ಸೀರಿಯಲ್ಗಳಲ್ಲಿ ಮಿಂಚುವುದಷ್ಟೇ ಶಿಕ್ಷಣವಲ್ಲ ಅದಕ್ಕಿಂತ ಮಿಗಿಲಾಗಿ ಪರಿಪೂರ್ಣ ಮನುಷ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ರಂಗಭೂಮಿ ಬದುಕಿನ ಎಲ್ಲ ಪಾಠಗಳನ್ನು ಅಚ್ಚುಕಟ್ಟಾಗಿ ಕಲಿಸಿಕೊಡುತ್ತದೆ ಎಂದರು.
ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರೋಪದ ಅಂಗವಾಗಿ ಚಂದ್ರಶೇಖರ್ ವಸ್ತ್ರದ್ ಮತ್ತು ಜಿ.ಹೆಚ್.ಹನ್ನೆರಡು ಮಠ ಅವರ ರಚನೆ ಹಾಗೂ ಮಹಾಂತೇಶ್ ರಾಮದುರ್ಗ ನಿರ್ದೇಶನದ ಕಾಯಕಯೋಗಿ ನುಲಿಯ ಚಂದಯ್ಯ ನಾಟಕ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ನಾಟಕೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ವೇದಿಕೆಯ ಮೇಲೆ ರಂಗಶಾಲಾ ಶಿಕ್ಷಕಿ ಸಂಗೀತ ಬಿಡೆ ಉಪಸ್ಥಿತರಿದ್ದರು.