ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರಂಗ ಗೀತೆಗಳನ್ನು ಯುವ ಜನಾಂಗ ಕಲಿತು ಹಾಡುವ ಮೂಲಕ ಮುಂದಿನ ಪೀಳಿಗೆಗೆ ರಂಗಗೀತೆ, ನಾಟಕಗಳನ್ನು ಕೊಂಡೊಯ್ಯಬೇಕಾಗಿದೆ ಎಂದು ಹಿರಿಯ ರಂಗಕರ್ಮಿ ಸಿ.ಎಂ. ನರಸಿಂಹಮೂರ್ತಿ ತಿಳಿಸಿದರು.
ನಗರದ ಜೆಎಸ್ ಪಟೇಲ್ ಸಭಾಂಗಣದಲ್ಲಿ ಉಮ್ಮತ್ತೂರು ಗೆಳೆಯರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ರಂಗ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ರಂಗ ಗೀತೆಗಳು ಮನಸ್ಸಿಗೆ ಮುದ ನೀಡುವ ಜೊತೆಗೆ ನೈಜತೆಯನ್ನು ಹೊಂದಿದೆ. ವಾದ್ಯ ಪರಿಕರಗಳೊಂದಿಗೆ ಈ ಗೀತೆಗಳನ್ನು ಹಾಡುವುದೇ ಒಂದು ರೀತಿಯ ಆನಂದ. ಇಂಥ ರಂಗ ಗೀತೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದರು. ಉಮ್ಮತ್ತೂರು ಗೆಳೆಯರ ಬಳಗದ ಅಧ್ಯಕ್ಷ ಬಸವರಾಜು ಮಾತನಾಡಿ, ನಮ್ಮ ಜಿಲ್ಲೆ ಕಲೆಗಳ ತವರೂರು. ಡಾ. ರಾಜ್ಕುಮಾರ್, ಡಾ. ಪುನೀತ್ ರಾಜಕುಮಾರ್ ಅವರಂಥ ಮೇರು ಕಲಾವಿದರನ್ನು ವಿಶ್ವಕ್ಕೆ ಪರಿಚಯಿಸಿದ ಜಿಲ್ಲೆ ನಮ್ಮದು. ಜಾನಪದ ಕಲೆ ಹಾಗೂ ರಂಗ ಕಲಾ, ನಾಟಕಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಿದೆ. ಯುವ ಜನಾಂಗ ನಶಿಸುತ್ತಿರುವ ರಂಗ ಗೀತೆಗಳನ್ನು ಕಲಿತು ಹಾಡುವ ಮೂಲಕ ರಂಗ ಕಲೆಯನ್ನು ಉಳಿಸಿ ಬೆಳೆಸಬೇಕು. ನಾಟಕ, ರಂಗ ಗೀತೆಗಳಿಗೆ ಮುಂದಿನ ದಿನಗಳಲಿ ಭಾರಿ ಬೇಡಿಕೆ ಬರಲಿದೆ ಎಂದರು.
ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ. ಶಿವಸ್ವಾಮಿ, ಗ್ರಾಪಂ ಅಧ್ಯಕ್ಷ ಪಿ. ಶೇಖರ್, ಬಸವರಾಜು, ಕಲಾವಿದರಾದ ನಂಜೇದೇವನಪುರ ಪುರುಷೋತ್ತಮ್, ಮಂಗಲ ಶಿವಣ್ಣ, ಜನ್ನೂರು ರೇವಣ್ಣ, ಮಹದೇವಪುರ ಗುರುಸ್ವಾಮಿ, ಇತರರು ಇದ್ದರು.