ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದೇವಸ್ಥಾನ ಕಳವು ಹಾಗೂ ಸರಗಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ತಮಿಳುನಾಡು ಮೂಲದ ಶಿವ, ರೂಪೇಶ್, ಅನಿಲ್ ಕುಮಾರ್, ರೂಪೇಶ್ ಬಂಧಿತ ಆರೋಪಿಗಳು. ಬಂಧಿತರಿಂದ ₹2.22 ಲಕ್ಷ ಮೌಲ್ಯದ 18 ಗ್ರಾಂ ಚಿನ್ನಾಭರಣ, ಕಂಚಿನ ತಟ್ಟೆ, ಗಂಟೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾ. 16ರಂದು ದೇಶಿಹಳ್ಳಿ ಹೊರವಲಯದ ಚಿಲ್ಲರೆ ಅಂಗಡಿಯೊಂದರಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಮಾರ್ಚ್ 22ರಂದು ಕಾಮಸಮುದ್ರ ಠಾಣಾ ವ್ಯಾಪ್ತಿಯ ಬಂದರ್ಲಹಳ್ಳಿ ಗ್ರಾಮದ ಲಂಬಾಡಿ ಕೆರೆ ಅಂಗಳದಲ್ಲಿರುವ ಕುಂಟಿಗಂಗಮ್ಮ ದೇವಸ್ಥಾನದಲ್ಲಿ ಕಳವಾಗಿದ್ದು, ಪ್ರಕರಣ ದಾಖಲಾಗಿತ್ತು.ಈ ಬಗ್ಗೆ ಡಿವೈಎಸ್ಪಿ ವಿ.ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಕಾಮಸಮುದ್ರ ವೃತ್ತದ ಪ್ರಭಾರ ಅಧಿಕಾರಿ ಮಾರ್ಕೊಂಡಯ್ಯ ಹಾಗೂ ಬಂಗಾರಪೇಟೆ ಇನ್ಸ್ಪೆಕ್ಟರ್ ಸಿ.ರವಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ತಮಿಳುನಾಡಿನ ಕೆಳಮಂಗಲಂ ಹಾಗೂ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕಾರ್ಯಾಚರಣೆಯಲ್ಲಿಕಾಮಸ-ಮುದ್ರ ಪಿಎಸ್ಐ ಕಿರಣಕುಮಾರ್ ಬಿ.ವಿ, ಪಿಎಸ್ಐ ಲಕ್ಷ್ಮಿನಾರಾಯಣ, ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಮುನಾವರ್ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಲಕ್ಷ್ಮಣತೇಲಿ ಹಾಗೂ ಚಾಲಕ ಗುರುಮೂರ್ತಿ ಇದ್ದರು.