ಗುಣಮಟ್ಟದ ಜ್ಞಾನ ಪ್ರಸ್ತುತಿಗೆ ಅಪಾರ ಅವಕಾಶಗಳಿವೆ: ಎಂ.ಮುನಿಯಮ್ಮ

| Published : Feb 09 2024, 01:48 AM IST

ಸಾರಾಂಶ

ಗುಣಮಟ್ಟದ ಉನ್ನತ ಶಿಕ್ಷಣದ ಮೂಲಕ ಉದ್ಯೋಗ ಅವಕಾಶಗಳನ್ನು ಪಡೆಯಲು ಅಗತ್ಯವಿರುವ ಜ್ಞಾನ ವೃದ್ಧಿ ಮತ್ತು ಉದ್ಯೋಗ ನೈಪುಣ್ಯತೆಗೆ ಆದ್ಯತೆ ನೀಡಬೇಕು: ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಎಂ. ಮುನಿಯಮ್ಮ

ಕನ್ನಡಪ್ರಭ ವಾರ್ತೆ ಕಲಬುರಗಿ

21ನೇ ಶತಮಾನದಲ್ಲಿ ಉನ್ನತ ಪದವಿ, ಗುಣಮಟ್ಟದ ಜ್ಞಾನ ಪ್ರಸ್ತುತಿಗೆ ಅಪಾರ ಅವಕಾಶಗಳಿವೆ. ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಅಭಿವೃದ್ಧಿ ಮತ್ತು ಭವಿಷ್ಯದ ಉನ್ನತ ಶಿಕ್ಷಣದ ಬಲವರ್ಧನೆಗೆ ಪೂರಕವಾದ ಆಲೋಚನೆ ಮತ್ತು ವಿಸ್ತೃತ ಚಿಂತನೆಗಳು ನಡೆಯುತ್ತಿವೆ. ಗುಣಮಟ್ಟದ ಉನ್ನತ ಶಿಕ್ಷಣದ ಮೂಲಕ ಉದ್ಯೋಗ ಅವಕಾಶಗಳನ್ನು ಪಡೆಯಲು ಅಗತ್ಯವಿರುವ ಜ್ಞಾನ ವೃದ್ಧಿ ಮತ್ತು ಉದ್ಯೋಗ ನೈಪುಣ್ಯತೆಗೆ ಆದ್ಯತೆ ನೀಡಬೇಕು ಎಂದು ಗುವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ. ಮುನಿಯಮ್ಮ ಹೇಳಿದರು.

ಗುವಿವಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದೇಶಿ ವಿಶ್ವವಿದ್ಯಾಲಯಗಳು ಭವಿಷ್ಯದ ಶೈಕ್ಷಣಿಕ ಅಭಿವೃದ್ಧಿ, ಸಂಶೋಧನೆ ವಿಸ್ತರಣೆ ಮತ್ತು ಉದ್ಯೋಗಾಧಾರಿತ ಶಿಕ್ಷಣದ ಅವಶ್ಯಕತೆ ಕುರಿತು ಚಿಂತನೆ ನಡೆಸುತ್ತಿವೆ. ಆದರಿಂದ ಭವಿಷ್ಯದ ಹೊಸ ಕೋರ್ಸುಗಳು, ಉದ್ಯೋಗ ಸೃಷ್ಠಿ, ಕೌಶಲ್ಯ ಅಭಿವೃದ್ಧಿ, ಸಂಶೋಧನೆ ಕ್ಷೇತ್ರಗಳ ಪ್ರಗತಿ ಸಾಧನೆಗೆ ಅಗತ್ಯವಿರುವ ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಸಮುದಾಯ ಕುವೆಂಪು ಅವರ ವಿಶ್ವಮಾನವ ಚಿಂತನೆಯನ್ನು ಅರ್ಥಮಾಡಿಕೊಂಡು ಭವಿಷ್ಯದಲ್ಲಿನ ಯಶಸ್ಸಿಗೆ ದೂರದೃಷ್ಠಿ, ವಿಭಿನ್ನ ಆಲೋಚನೆ ಮತ್ತು ನಾಯಕತ್ವದ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಉದ್ಯಮ ಮತ್ತು ಕೈಗಾರಿಕೆ ಸಂಸ್ಥೆಗಳು ವೃತ್ತಿ ಕಾರ್ಯನೈಪುಣ್ಯತೆಗೆ ಆದ್ಯತೆ ನೀಡುತ್ತಿವೆ. ಆದರಿಂದ ವಿದ್ಯಾರ್ಥಿಗಳು ವೃತ್ತಿ ಪೂರಕ ಜ್ಞಾನ ಮತ್ತು ಕೌಶಲ್ಯ ತರಬೇತಿಗೆ ವಿಶೇಷ ಆಸಕ್ತಿವಹಿಸಬೇಕು ಎಂದರು.

ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುವಿವಿಯಲ್ಲಿ ಸೇವೆ ಸಲ್ಲಿಸಿರುವ ಸಿಬ್ಬಂದಿಗಳ ಅವಿರತ ಶ್ರಮದಿಂದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸಾಧನೆಯಲ್ಲಿ ಹೆಮ್ಮರವಾಗಿ ಬೆಳೆದಿದೆ. ವಿಶ್ವವಿದ್ಯಾಲಯ ಗುಣಮಟ್ಟದ ಬೋಧನೆ, ಸಂಶೋಧನೆ, ಪ್ರಕಟಣೆ ಮತ್ತು ಪಠ್ಯೇತರ ಚಟುವಟಿಕೆಗಳಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಇದರ ಜೊತೆಗೆ ಅನೇಕ ಸವಾಲುಗಳಿವೆ. ಅವುಗಳನ್ನು ಸಮರ್ಪಕವಾಗಿ ಎದುರಿಸಲು ಗುಣಮಟ್ಟದ ಪಠ್ಯಕ್ರಮ, ನಾವೀನ್ಯತೆ, ಪಠ್ಯದಲ್ಲಿ ಕೌಶಲ್ಯ ಅಳವಡಿಕೆ, ಪಠ್ಯಕ್ರಮ ಆಕಾರದೊಂದಿಗೆ ಸೃಜನಶೀಲತೆಗೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಬೋಧನಾ ಕೌಶಲ್ಯ, ನಾವೀನ್ಯ ಚಿಂತನೆ ಮತ್ತು ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಪ್ರಾಯೋಗಿಕವಾಗಿ ಪ್ರಬುತ್ವ ಸಾಧಿಸಬೇಕು ಎಂದ ಅವರು ನಾಲ್ಕು ದಶಕಗಳ ಶೈಕ್ಷಣಿಕ ಸೇವೆಗೆ ಶ್ರಮಿಸಿದ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸುವುದು ನಿಜಕ್ಕೂ ಹೆಮ್ಮೆಯ ವಿಷಯವೆಂದರು.

ಗುವಿವಿ ಕುಲಸಚಿವ ಡಾ. ಬಿ. ಶರಣಪ್ಪ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ವಿಶ್ವವಿದ್ಯಾಲಯ 43 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನೇಕ ಶೈಕ್ಷಣಿಕ ಯೋಜನೆ, ಮೌಲಿಕ ಪ್ರಕಟಣೆ, ಸಂಶೋಧನೆ ಕ್ಷೇತ್ರ ವಿಸ್ತರಣೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ, ಕ್ರೀಡೆ ಮತ್ತು ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ, ವೈಜ್ಞಾನಿಕ ಸಂಶೋಧನೆ ಚಟುವಟಿಕೆಗಳನ್ನು ನಿರಂತರವಾಗಿ ಒದಗಿಸಿದೆ. ಉನ್ನತ ಶಿಕ್ಷಣ ನೀಡುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ ವಿಶ್ವಾವಿದ್ಯಾಲಯ ಬೆನ್ನೆಲುಬಾಗಿದೆ. ಗುಣಮಟ್ಟದ ಶಿಕ್ಷಣ ಒತ್ತು ನೀಡುವ ಮೂಲಕ ಸಾಧನೆ ಮೆರೆಯುತ್ತಿದೆ ಎಂದರು.

ಗುವಿವಿ ಸಿಂಡಿಕೇಟ್ ಸದಸ್ಯೆ ಶ್ರೀಮತಿ. ರೇಷ್ಮಾ ಕೌರ್, ವಿದ್ಯಾ ವಿಷಯಕ ಪರಿಷತ್ ಸದಸ್ಯ ಕೆ. ಲಿಂಗಪ್ಪ, ಮೌಲ್ಯ ಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ್, ವಿತ್ತಾಧಿಕಾರಿ ರಾಜನಾಳ್ಕರ್ ಲಕ್ಷ್ಮಣ ಉಪಸ್ಥಿತರಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಚಂದ್ರಕಾಂತ್ ಕೆಳಮನಿ ಅತಿಥಿ ಪರಿಚಯಿಸಿದರು. ವಿತ್ತಾಧಿಕಾರಿ ರಾಜನಾಳ್ಕರ್ ಲಕ್ಷ್ಮಣ ಪ್ರಸಕ್ತ ಶೈಕ್ಷಣಿಕ ಸಾಲಿನ ವರದಿ ಮಂಡಿಸಿದರು. ಸಂಶೋಧನೆ ಮತ್ತು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯಕ್ಕೆ ಕೀರ್ತಿತಂದಿರುವ ಸಾಧಕ ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬಂಧಿಗಳನ್ನು ಅತಿಥಿಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ನಿವೃತ್ತರಾದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಸನ್ಮಾನಿಸಿದರು.

ಗುವಿವಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸೇವಾ ನಿವೃತ್ತ ಸಿಬ್ಬಂದಿಗಳು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ದಾನಮ್ಮ ಹಾಗೂ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಿಶ್ವವಿದ್ಯಾಲಯ ಗೀತೆ ಹಾಡಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳ ಅಂಬೇಕರ್, ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಚಂದ್ರಕಾಂತ್ ಕೆಳಮನಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು

ಗುವಿವಿ ಆಯೋಜಿಸಿರುವ ರಾಷ್ಟ್ರೀಯ ಭಾವಕ್ಯತಾ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಭರತನಾಟ್ಯ ಜಾನಪದ ನೃತ್ಯ ಪ್ರದರ್ಶಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಯುವಜನೋತ್ಸವ ತಂಡದ ಜಾನಪದ ಸಮೂಹ ನೃತ್ಯ ಪ್ರೇಕ್ಷಕರನ್ನು ರಂಜಿಸಿತು. ವಿಶ್ವವಿದ್ಯಾಲಯದ ಸಮಗ್ರ ಶೈಕ್ಷಣಿಕ ಸಾಧನೆಗೆ ವಿಶ್ವವಿದ್ಯಾಲಯ ವಿಶೇಷ ಒತ್ತು ನೀಡಿದೆ. ವಿದೇಶಿ ವಿಶ್ವವಿದ್ಯಾಲಯಗಳ ಜೊತೆಗೆ ಅಕಾಡೆಮಿಕ್ ಸ್ಟ್ಯಾಂಡರ್ಡ್‍ನ ಒಮ್ಮತದಿಂದ ಒಡಂಬಡಿಕೆ ಮತ್ತು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆಕೆಆರ್‍ಡಿಬಿಯಿಂದ 21ಕೋಟಿ ಅನುದಾನ ದೊರೆತಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಉನ್ನತ ಶಿಕ್ಷಣದ ಉತ್ಕøಷ್ಠತೆಗೆ ಪೂರಕ ಪಠ್ಯಕ್ರಮದ ಆಕಾರ ಮತ್ತು ನಾವೀನ್ಯತೆ, ಬೋಧನೆಯಲ್ಲಿ ಕೌಶಲ್ಯ ಕಲಿಕೆ ಮಹತ್ವ ನೀಡಲಾಗಿದೆ. ಜೊತೆಗೆ ನ್ಯಾಕ್‍ನ ನಾಲ್ಕನೇ ಆವೃತ್ತಿಗೆ ಈಗಾಗಲೇ ಸಿದ್ಧತೆ ನಡೆದಿದೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಎಲ್ಲಾ ತಯಾರಿಯೊಂದಿಗೆ ಅಂತಿಮಗೊಳಿಸಲಾಗುತ್ತಿದೆ.

- ಪ್ರೊ. ದಯಾನಂದ ಅಗಸರ, ಕುಲಪತಿ ಗುಲ್ಬರ್ಗ ವಿಶ್ವವಿದ್ಯಾಲಯ