ಸಾರಾಂಶ
ವಿಮಾನ ನಿಲ್ದಾಣದಲ್ಲಿ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿ ಸಂಕಷ್ಠಕ್ಕೆ ಸಿಲುಕಿದ ಆರೋಪಿ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ಹ್ಯಾಂಡ್ ಬ್ಯಾಗ್ ಭದ್ರತಾ ಸಿಬ್ಬಂದಿ ಪರಿಶೀಲಿಸುವಾಗ ತಮಾಷೆಗೆ ಬಾಂಬ್ ಇದೆ ಎಂದು ಹೇಳಿ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ತುತ್ತಾಗಿರುವ ಘಟನೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಹರಿಯಾಣ ಮೂಲದ ರಾಜೇಶ್ ಕುಮಾರ್ ಬೆನಿವಾಲ್ ತೊಂದರೆಗೆ ಸಿಲುಕಿದ್ದು, ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆಗೆ ತೆರಳಲು ಕೆಐಎಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಕೆಐಎ ಭದ್ರತಾ ವಿಭಾಗದ ವ್ಯವಸ್ಥಾಪಕರ ದೂರಿನ್ವಯ ರಾಜೇಶ್ ವಿರುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಹಾಜರಾಗುವಂತೆ ಆತನಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತೆರಳಲು ಗುರುವಾರ ರಾತ್ರಿ 10 ಗಂಟೆಗೆ ಸುಮಾರಿಗೆ ಕೆಐಎನ ಟರ್ಮಿನಲ್-2ಕ್ಕೆ ರಾಜೇಶ್ ಆಗಮಿಸಿದ್ದರು. ಆಗ ಕೌಂಟರ್-9ರಲ್ಲಿ ಅವರ ಬ್ಯಾಗ್ಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಆ ವೇಳೆ ಹ್ಯಾಂಡ್ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ರಾಜೇಶ್ ಹೇಳಿದ್ದಾರೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಆಗ ತಾನು ತಮಾಷೆಗೆ ಹೇಳಿದ್ದಾಗಿ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಕೊನೆಗೆ ಭದ್ರತಾ ಅಧಿಕಾರಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.