ಸರ್ಕಾರಿ ನೌಕರರಿಗೆ ತೊಂದರೆ ಆಗುವಂತಹ ಕಾನೂನು ಮಾಹಿತಿ ಹಕ್ಕು ಕಾಯ್ದೆ ಬಳಕೆ ಆಗಬಾರದು. ಈ ಕಾಯ್ದೆ ದುರುಪಯೋಗವಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

ಸರಕಾರಿ ನೌಕರ ಸಂಘದ ಪ್ರತಿಭಾ ಪುರಸ್ಕಾರ, ಮಾಹಿತಿ ಹಕ್ಕು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸರ್ಕಾರಿ ನೌಕರರಿಗೆ ತೊಂದರೆ ಆಗುವಂತಹ ಕಾನೂನು ಮಾಹಿತಿ ಹಕ್ಕು ಕಾಯ್ದೆ ಬಳಕೆ ಆಗಬಾರದು. ಈ ಕಾಯ್ದೆ ದುರುಪಯೋಗವಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸರಕಾರಿ ನೌಕರ ಸಂಘದ ಪ್ರತಿಭಾ ಪುರಸ್ಕಾರ ನೆರವೇರಿಸಿ, ಮಾಹಿತಿ ಹಕ್ಕು ಕಾರ್ಯಾಗಾರವನ್ನು ಉದ್ಘಾಟಿಸಿ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಮಾತನಾಡಿದರು.

ಅಧಿಕಾರಿಗಳು ಯಾವ ಮಾಹಿತಿಯನ್ನು ಹೇಗೆ ಕೊಡಬೇಕು ಎಂಬ ಅರಿವನ್ನು ಸ್ಪಷ್ಟವಾಗಿ ಹೊಂದಿರಬೇಕು. ಅಲ್ಲದೇ, ಮಾಹಿತಿ ಹಕ್ಕು ಅಧಿನಿಯಮದ ಕುರಿತಾಗಿ ವಿವರವಾಗಿ ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಯ ನಿವೃತ್ತ ಎಇಇ ವಿ.ಎಂ ಭಟ್ಟ ಮಾತನಾಡಿ, ಸರ್ಕಾರಿ ನೌಕರರಲ್ಲಿ ಸಕಾರಾತ್ಮಕ ನಡವಳಿಕೆ, ಶಿಸ್ತು, ಸಮಯ ಪಾಲನೆ, ಬೇರೆಯವರಿಗೆ ನೆರವಾಗುವ ಮನೋಭಾವ ಇದ್ದಾಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ. ಸೃಜನಶೀಲತೆ ಇಲ್ಲದ ನೌಕರ ಹೊಸತನ ಕೊಡಲು ಸಾಧ್ಯವಿಲ್ಲ. ಕ್ರಿಯಾತ್ಮಕತೆ ಇಲ್ಲದವ ಕೇವಲ ಗುಮಾಸ್ತ ಕೆಲಸಕ್ಕೆ ಮಾತ್ರ ಸೀಮಿತನಾಗುತ್ತಾನೆ. ಒತ್ತಡ ಮುಕ್ತವಾಗಲು ನಗು ನಗುತ್ತ ಸಾರ್ವಜನಿಕ ಸೇವೆ ಸಲ್ಲಿಸಬೇಕು ಎಂದರು.

ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ಸಂಘದ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲರ ಸಹಕಾರದೊಂದಿಗೆ ಕ್ರಿಯಾಶೀಲತೆಯಿಂದ ಮುನ್ನಡೆಯುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ತಾಪಂ ರಾಜೇಶ ಧನವಾಡಕರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಲ್. ಜಾಲಿಸತ್ಗಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಶರಣಪ್ಪ ಗೊಜನೂರು, ಆರ್.ಡಿ. ಜನಾರ್ದನ, ರೇಷ್ಮಾ ಶೇಟ್, ವಿಶಾಲ ನಾಯಕ, ಸಂತೋಷ ಬಂಟ, ವೀರವ್ವ ಪೂಜಾರಿ, ಮಂಜುನಾಥ ಆಗೇರ, ಗಣಪತಿ ಭಾಗ್ವತ, ಪ್ರಮುಖರಾದ ಪ್ರಕಾಶ ತಾರೀಕೊಪ್ಪ, ಪ್ರಭಾಕರ ಭಟ್ಟ, ಜ್ಯೋತಿ ನರೋಟಿ ಇತರರಿದ್ದರು.

ಖಜಾಂಚಿ ಶರಣಪ್ಪ ಗೋಜನೂರು ವರದಿ ವಾಚಿಸಿದರು. ನಿರ್ದೇಶಕರಾದ ಸುಧಾಕರ ನಾಯಕ, ಸಂತೋಷ ನಾಯ್ಕ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ವಿ.ಪಿ. ಭಟ್ಟ ವಂದಿಸಿದರು.

ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳನ್ನು ಪುರಸ್ಕರಿಸಲಾಯಿತು. ನಿವೃತ್ತರಾದ ಸರ್ಕಾರಿ ನೌಕರರನ್ನು ಗೌರವಿಸಲಾಯಿತು.