ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇತಿಹಾಸ ಸಾರುವ ಸ್ಮಾರಕ ಹಾಗೂ ಶಾಸನಗಳನ್ನು ಸೂಕ್ಷ್ಮ ಅಧ್ಯಯನ ಮಾಡಿ ಸಂರಕ್ಷಿಸುವ ಅಗತ್ಯವಿದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಕಮಲಾಪುರದ ಡಾ.ಆರ್.ತೇಜೇಶ್ವರ ತಿಳಿಸಿದರು.ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐಎಂಎ ಹಾಲ್ನಲ್ಲಿ ಭಾನುವಾರ ನಡೆದ 51ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕರ್ನಾಟಕ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಈಚಿನ ಅನ್ವೇಷಣೆಗಳ ಹಿನ್ನೆಲೆಯಲ್ಲಿ’ ಎಂಬ ವಿಷಯ ಕುರಿತು ಮಾತನಾಡಿದರು.
ಬೃಹತ್ ಶಿಲಾಯುಗದ ಕಾಲದಲ್ಲಿ ಮಾನವ ಮೊಟ್ಟ ಮೊದಲು ಕಬ್ಬಿಣ ಬಳಕೆ ಮಾಡಿದ್ದರು. ಶಿಲಾಯುಗ, ಮಡಕೆ, ಶಿಲಾಶಾಸನ, ತಾಮ್ರಶಾಸನ, ಮೂರ್ತಿ ಶಿಲ್ಪಿ, ಮಾಸ್ತಿಗಲ್ಲು, ವೀರಗಲ್ಲು ಶಿಲ್ಪಿ, ಹಳೆ ಶಿಲಾಯುಗ, ನೂತನ ಶಿಲಾಯುಗ, ಅರಿಯುವ ಕಲ್ಲು, ಶಿಲಾಯುಧ, ನಿಲಿಸುಗಲ್ಲು, ಕದಂಬರು ಆಳಿದ ಕೋಟೆಗಳು ಶಾಸನಗಳು ಸಿಗುತ್ತವೆ. ಕೆಳದಿ ಅರಸರ ಫಲವಂತಿಕೆ ಶಿಲ್ಪಗಳು, ದ್ವಿಬಾಹು ಗಣೇಶ ಇವುಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮಾದಾಪುರದಲ್ಲಿ ಸಿಕ್ಕಿದ್ದು, ಎನ್ನುವುದನ್ನು ಸ್ಲೈಡ್ಗಳ ಮೂಲಕ ಪ್ರದರ್ಶಿಸಿದರು.ಬಾದಾಮಿ ಚಾಲುಕ್ಯರ ಶಾಸನ, ಸಿಡಿತಲೆ ವೀರಗಲ್ಲುಗಳು, ರಾಷ್ಟ್ರಕೂಟರ ಕಾಲದ ವೀರಗಲ್ಲುಗಳನ್ನು ವ್ಯಕ್ತಿ ಪೂಜೆಯಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಬರಗಾಲ ಉಲ್ಲೇಖಿಸುವ ಮೊದಲ ಶಾಸನ, ರಾಕೆಟ್ಗಳು ಸಂಶೋಧನೆಯಲ್ಲಿ ಸಿಕ್ಕಿವೆ. ಕದಂಬ, ರವಿ ವರ್ಮನ ಶಾಸನ ಶಿವಪ್ಪ ನಾಯಕ ಅರಮನೆಯಲ್ಲಿರುವ ಪಟ್ಟಕತ್ತಿಗಳು ಪಟ್ಟಕತ್ತಿಯ ಶಿಲ್ಪವಿರುವ ವೀರಗಲ್ಲುಗಳನ್ನು ಕಾಣಬಹುದು. ಮರಾಠರು, ಕೆಳದಿ ಅರಸರು, ಪಟ್ಟಕತ್ತಿಗಳನ್ನು ಬಳಸುತ್ತಿದ್ದರು. ನೃತ್ಯದ ಶಿಲ್ಪಗಳು, ಕೋಟೆಯ ಚಿತ್ರಣ ಸೂರ್ಯಗ್ರಹಣ, ಚಂದ್ರಗ್ರಹಣ, ಶಿಲ್ಪಗಳು, ಸುವರ್ಣದಾನ ನೀಡುವ ಆತ್ಮಬಲಿದಾನದ ಶಿಲ್ಪ, ಹಂದಿ, ಮೊಲ ಬೇಟೆಯ ವೀರ ಮಾಸ್ತಿಗಲ್ಲುಗಳು ಮಹಾರಾಷ್ಟ್ರದಲ್ಲಿ ಗರುಢ ನಂದಿ ಕಂಡು ಬಂದಿವೆ ಎಂದು ಹೇಳಿದರು.
ಶಿವಪ್ಪನಾಯಕ ಅರಮನೆಯಲ್ಲಿ ರಾಕೆಟ್ಗಳಿವೆ. ಮದ್ದು ತುಂಬಿದ ರಾಕೆಟ್ಗಳು, ರಾಕೆಟ್ ತಯಾರಿಕೆಯ ವಸ್ತುಗಳು ಕಂಡು ಬಂದವು. ವಿಶೇಷ ಶಿಲ್ಪಗಳು, ಸ್ಮಾರಕಗಳ ದತ್ತು ಯೋಜನೆಯಿದೆ. ಸ್ಮಾರಕಗಳ ಸಂರಕ್ಷಣೆ ಹೇಗೆ ಎಂಬ ತರಬೇತಿ ನೀಡುತ್ತೇವೆ. ಎಲ್ಲಾ ಸ್ಮಾರಕಗಳಲ್ಲೂ ಬಾವಲಿ ಪಕ್ಷಿಗಳಿವೆ. ಮತ್ತಿ ತಿಮ್ಮಣ್ಣ ನಾಯಕನ ಸಮಾಧಿ, ಮಾಯಕೊಂಡದಲ್ಲಿರುವ ಮದಕರಿ ನಾಯಕನ ಸಮಾಧಿಗೆ ಹೋಗಿದ್ದೇನೆ. ಕದಂಬರು, ಮೌರ್ಯರ ಕಾಲದ ಸ್ಮಾರಕಗಳಿವೆ ಎಂದರು.ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ತನ್ನದೆ ಆದ ಇತಿಹಾಸವಿದೆ. ಕೋಟೆ ಆಳಿದ ಪಾಳೆಯಗಾರರನ್ನು ಕೇವಲ ನಾಯಕ ಜನಾಂಗಕ್ಕಷ್ಟೆ ಮೀಸಲುಗೊಳಿಸುವುದು ಸರಿಯಲ್ಲ. ಜಾತಿಯಿಂದ ಇತಿಹಾಸ ನೋಡುವ ದರಿದ್ರ ಮೊದಲು ನಿವಾರಣೆಯಾಗಬೇಕು. ಕ್ಷೇತ್ರ ಕಾರ್ಯದಲ್ಲಿ ಕೈಗೊಂಡಿರುವ ಹೊಸ ವಿಷಯವನ್ನು ಡಾ.ಆರ್.ತೇಜೇಶ್ವರ ಕೈಗೆತ್ತಿಕೊಂಡಿದ್ದಾರೆ ಎಂದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ ತೆಲಗಾವಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ಪ್ರೊ.ಟಿ.ವಿ.ಸುರೇಶ್ ಗುಪ್ತ, ಡಾ.ದೊಡ್ಡಮಲ್ಲಯ್ಯ, ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಮೃತ್ಯುಂಜಯ, ಅಪರಾದ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಪ್ರೊ.ಎಚ್.ನಿಂಗಪ್ಪ, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಗೋಪಾಲ ಸ್ವಾಮಿನಾಯಕ, ರಾಜಾವೀರ ಮದಕರಿ ಜಯಚಂದ್ರ ನಾಯಕ ಪ್ರೊ.ಎಂ.ಜಿ.ರಂಗಸ್ವಾಮಿ, ಜಿ.ಎಸ್.ಉಜ್ಜಿನಪ್ಪ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್ ಸೇರಿ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.