ಭವಿಷ್ಯದ ಆಶಾಕಿರಣಗಳಾದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯವಿದ್ದು, ಪೋಷಕರು ದೇಶ, ಧರ್ಮ ಮತ್ತು ಸಂಸ್ಕೃತಿ ಸೇರಿದಂತೆ ಹೆಚ್ಚಿನ ಆಸಕ್ತಿ ವಹಿಸುವ ಅಗತ್ಯವಿದೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭವಿಷ್ಯದ ಆಶಾಕಿರಣಗಳಾದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯವಿದ್ದು, ಪೋಷಕರು ದೇಶ, ಧರ್ಮ ಮತ್ತು ಸಂಸ್ಕೃತಿ ಸೇರಿದಂತೆ ಹೆಚ್ಚಿನ ಆಸಕ್ತಿ ವಹಿಸುವ ಅಗತ್ಯವಿದೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.ಹರಿಹರೋತ್ಸವ ಸಮಿತಿಯ ವತಿಯಿಂದ ಶನಿವಾರ ಸಂಜೆ ಪಟ್ಟಣದ ವಿಧ್ಯಾದಿರಾಜ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿ ಆಶೀರ್ವಚನ ನೀಡಿ, ಶಿಕ್ಷಣಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಉತ್ತಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ. ಅದ್ವೈತ ತತ್ವವನ್ನು ಸಾರಿದ ಆದಿಶಂಕರಾಚಾರ್ಯರು ಬೋದನೆಯ ಮೂಲಕ ವಿಶ್ವಕ್ಕೆ ಸಾರಿದ ಸಂದೇಶವೂ ಇದನ್ನೇ ಪ್ರತಿಪಾದಿಸುತ್ತದೆ ಎಂದು ಹೇಳಿದರು.
ಪ್ರಪಂಚದ ಎದುರು ವಿಶ್ವಾಸದಿಂದ ನಿಲ್ಲುವ ಆತ್ಮವಿಶ್ವಾಸ ಜ್ಞಾನದಿಂದ ಮಾತ್ರವೇ ಸಾಧ್ಯವಾಗಿದ್ದು, ಮಕ್ಕಳಲ್ಲಿ ಜ್ಞಾನಾಭಿವೃದ್ಧಿಯೊಂದಿಗೆ ಸದ್ಗುಣಗಳನ್ನು ಬೆಳೆಸುವ ಹೊಣೆಗಾರಿಕೆ ಪೋಷಕರದ್ದು, ಶಿಕ್ಷಣ ನಾಯಕತ್ವ ಗುಣದೊಂದಿಗೆ ಎಲ್ಲರನ್ನೂ ಮುನ್ನಡೆಸುವ ಆತ್ಮ ವಿಶ್ವಾಸವನ್ನು ಮೂಡಿಸುತ್ತದೆ. ಇದರೊಂದಿಗೆ ಧರ್ಮದ ಬಗ್ಗೆ ಗೌರವದೊಂದಿಗೆ ದೇಶಪ್ರೇಮ ಮತ್ತು ಧಾರ್ಮಿಕ ಚಿಂತನೆಯೂ ಇರಬೇಕು ಎಂದರು.ಭಾನುವಾರ ಬೆಳಿಗ್ಗೆ ನಡೆದ ಸಹಸ್ರ ನಾರಿಕೇಳ ಗಣಯಾಗದಲ್ಲಿ ಪಾಲ್ಗೊಂಡ ಶ್ರೀಗಳು ಮಧ್ಯಾಹ್ನ ಶ್ರೀ ರಾಮೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಸಿದರು. ಸಂಜೆ ನಡೆದ ಗಿರಿಜಾ ಕಲ್ಯಾಣ ಧಾರ್ಮಿಕ ಕಾರ್ಯದಲ್ಲಿ ಸಾನ್ನಿಧ್ಯ ವಹಿಸಿದ್ದರು.
ಹರಿಹರೋತ್ಸವ ಸಮಿತಿಯ ಲಕ್ಷ್ಮೀಶ ತಂತ್ರಿಗಳು, ವೆಂಕಟೇಶ ಪಟವರ್ಧನ್, ವಾದಿರಾಜ ಶೇಟ್, ಮುಕ್ತಾ ಬಾಯಿ, ಮಂಜುನಾಥ ಶೆಟ್ಟಿ, ಡಾ. ರವಿಶಂಕರ ಉಡುಪ, ಪ್ರಸನ್ನ ಹೊಳ್ಳ ಮುಂತಾದವರು ಇದ್ದರು.