ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದೆ<bha>;</bha> ಆದರೆ ಬಣ ಇಲ್ಲ: ಲಾಡ್‌

| Published : Nov 02 2023, 01:00 AM IST

ಸಾರಾಂಶ

ರಾಜ್ಯ ಸರಕಾರ ಹಾಗೂ ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ಇಲ್ಲವೇ ಇಲ್ಲ. ನಮ್ಮಲ್ಲಿ ಕೆಲವೊಂದು ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಬಣ ಎಂದು ಕರೆಯುವುದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ರಾಜ್ಯ ಸರಕಾರ ಹಾಗೂ ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ಇಲ್ಲವೇ ಇಲ್ಲ. ನಮ್ಮಲ್ಲಿ ಕೆಲವೊಂದು ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಬಣ ಎಂದು ಕರೆಯುವುದು ಸರಿಯಲ್ಲ. ಒಂದು ವೇಳೆ ಏನಾದರೂ ಬಣ ರಾಜಕೀಯ ಇದ್ದಲ್ಲಿ ಕೊನೆಗೆ ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮಾಧ್ಯಮಕ್ಕೆ ಟಿಆರ್‌ಪಿ ನೀಡುವುದಕೋಸ್ಕರ ಬಿಜೆಪಿ ನಾಯಕರು ರಾಜ್ಯ ಸರಕಾರ ಬೀಳುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರಕಾರ ಪತನವಾಗುತ್ತದೆ. ಅದನ್ನು ನಾವು ಬೀಳಿಸುತ್ತೇವೆ ಎಂಬುದು ಬಿಜೆಪಿ ನಾಯಕರ ಮೈಂಡ್‌ ಸೆಟ್‌ ಆಗಿದೆ ಎಂದರು. ಯಾವುದೇ ಸರಕಾರ ರಚನೆಯಾಗಿ ಆರು ತಿಂಗಳ ಕಾಲ ಬೀಳಿಸಲು ಬರುವುದಿಲ್ಲ ಎಂಬ ಕನಿಷ್ಠ ಜ್ಞಾನ ಬಿಜೆಪಿ ನಾಯಕರಿಗೆ ಇಲ್ಲವಾಗಿದೆ. ಪದೇ -ಪದೇ ಸರಕಾರ ಬೀಳುತ್ತದೆ, ಬೀಳಿಸುತ್ತೇವೆ ಎಂಬ ಬಿಜೆಪಿ ನಾಯಕರ ಮಾತನ್ನು ಕೇಳಿ-ಕೇಳಿ ನಮಗೂ ಸಾಕಾಗಿ ಹೋಗಿದೆ ಎಂದ ಅವರು, ರಾಜ್ಯ ಸರಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆ ಜಾರಿಯಿಂದ ಸರಕಾರ ದಿವಾಳಿಗೆ ಬಂದಿದೆ ಎಂಬ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಣ ಇಲ್ಲದಿದ್ದರೆ ಸರಕಾರ ಹೇಗೆ ನಡೆಯುತ್ತಿತ್ತು ಎಂದು ಲಾಡ್‌ ಪ್ರಶ್ನಿಸಿದರು. ಕರ್ನಾಟಕದ ರಾಜ್ಯೋತ್ಸವದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಕನ್ನಡ-ನಾಡು ನುಡಿಯನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಘೋಷಣೆ ಮಾಡಿದ್ದಾರೆ. ಕನ್ನಡದಲ್ಲಿಯೇ ಕಚೇರಿಯಲ್ಲಿ ವ್ಯವಹರಿಸುವಂತೆ ಸೂಚಿಸಿದ್ದಾರೆ. ಕನ್ನಡವನ್ನು ಉಳಿಸಿ-ಬೆಳೆಸಲು ಕಾಂಗ್ರೆಸ್‌ ಸರಕಾರ ಶ್ರಮಿಸಲಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಆಳವಾದ ಜ್ಞಾನವಿದೆ. ಅವರು ಕನ್ನಡದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಎಂದು ಶ್ಲಾಘಿಸಿದರು.