ಮಂಗಳೂರು: ರಾಜಕೀಯದಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶ ಲಭಿಸಬೇಕು, ದೇಶವನ್ನು ಅಳುವ ಪ್ರಮುಖ ಹುದ್ದೆಯಲ್ಲಿ‌ ಮಹಿಳೆಯರು ಕುಳಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಹಿಳಾ ಮೀಸಲಾತಿ ಸಮೂದೆಯೆನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಈ ಮಸೂದೆಯನ್ನು ಸಂಪೂರ್ಣವಾಗಿ ವಿಫಲ ಮಾಡಿದೆ. ಮಹಿಳೆಯರಿಗೆ ಮಾಡಿದ ಅವಮಾನವನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಯಾಗದಂತೆ ತಡೆದ ಕಾಂಗ್ರೆಸ್‌ ಮಹಿಳಾ ವಿರೋಧಿ ನಡೆ ಅನುಸರಿಸಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಪ್ರತಿಭಟನಾ ಪಾದಯಾತ್ರೆ ಸೋಮವಾರ ನಡೆಯಿತು. ನಗರದ ಪಿವಿಎಸ್ ವೃತ್ತದ ಬಳಿಯ ಬಿಜೆಪಿ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು. ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷದ ವಿರುದ್ಧ ಪ್ರತಿಭಟನಾ ಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭ ಮಾತನಾಡಿದ ಕಾಮತ್, ಮಹಿಳೆಯರು ಮುಖ್ಯ ವಾಹಿನಿಗೆ ಬರಬಾರದು ಎನ್ನುವ ಉದ್ದೇಶದೊಂದಿಗೆ ಕಾಂಗ್ರೆಸ್‌ ಮಸೂದೆ ಜಾರಿಯಾಗದಂತೆ ತಡೆದಿದೆ. ಲೋಕಸಭಾ ಸ್ಥಾನ 800ರಷ್ಟು ಹೆಚ್ಚಳವಾಗುವುದರಿಂದ 200ಕ್ಕೂ ಅಧಿಕ ಸ್ಥಾನಗಳು ಮಹಿಳೆಯರಿಗೆ ದೊರೆಯುತ್ತದೆ ಎಂದರು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಮಸೂದೆಗೆ ಒಪ್ಪಿಗೆ ಸಿಗದ ಕಾರಣ ಮಹಿಳೆಯರ ಕಡೆಗಣನೆಯಾದಂತಾಗಿದ್ದು, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಇದನ್ನು ಸಂಭ್ರಮಿಸಿದ್ದನ್ನು ಮಹಿಳಾ ಮೋರ್ಚಾ ಖಂಡಿಸುತ್ತದೆ ಎಂದರು.

ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದ್ಯಾ ವೆಂಕಟೇಶ್, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಪ್ರಮುಖರಾದ ವಿನೋದ್ ಮೆಂಡನ್, ಭಾಸ್ಕರಚಂದ್ರ ಶೆಟ್ಟಿ, ರಾಮ ಪ್ರಸಾದ್, ಪ್ರವೀಣ್ ನಿಡ್ಡೇಲ್, ಮನಪಾ ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.