ಕನ್ನಡಪ್ರಭ ವಾರ್ತೆ ಅರಸೀಕೆರೆ

ಹಸಿದವರಿಗೆ ಅನ್ನ ನೀಡುವ ಮಹತ್ವದ ಸೇವಾ ಕಾರ್ಯವನ್ನು ಉದ್ದೇಶವಾಗಿಟ್ಟುಕೊಂಡು ರುದ್ರಾಕ್ಷ ಫೌಂಡೇಶನ್ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ “ಸಮರ್ಪಣ” ಸಂಸ್ಥೆಯ ವತಿಯಿಂದ ಪ್ರತಿ ಶನಿವಾರ ಮತ್ತು ಸೋಮವಾರ “ಸಮರ್ಪಣ ಅಕ್ಷಯ ಪಾತ್ರೆ” ಸೇವಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ.ನಗರದಲ್ಲಿ ಆಯೋಜಿಸಿದ್ದ ಪ್ರಸಾದ ವಿನಿಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜಸೇವಕ ಹಾಗೂ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ ಅವರ ಪುತ್ರ ರಘು ಬಿಳಿ ಚೌಡಯ್ಯ ಅನ್ನದಾನಕ್ಕಿಂತ ಮಹಾದಾನ ಮತ್ತೊಂದಿಲ್ಲ. ಸಮಾಜದಲ್ಲಿ ಹಸಿದವರ ಕಷ್ಟ ಅರಿತು ಅವರಿಗೆ ನೆರವಾಗುವ ಕಾರ್ಯವನ್ನು ಸಮರ್ಪಣ ಸಂಸ್ಥೆ ಅರ್ಥಪೂರ್ಣವಾಗಿ ಮಾಡುತ್ತಿದೆ. ಇಂತಹ ಸೇವಾ ಚಟುವಟಿಕೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.ಈ ವೇಳೆ ಮಾತನಾಡಿದ ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜೈಪ್ರಕಾಶ್ ಗುರೂಜಿ, “ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆರಂಭದಲ್ಲಿ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭಿಸಲಾಗಿತ್ತು. ಬಳಿಕ ಎಪಿಎಂಸಿ ಯಾರ್ಡ್‌ನಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಸೇವೆಯೇ ನಮ್ಮ ಪ್ರಮುಖ ಧ್ಯೇಯ,” ಎಂದು ತಿಳಿಸಿದರು. ಬಸವಣ್ಣನವರು ಸಮಾಜಕ್ಕೆ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚಿಂತಕರು. ಅವರ ನೂತನ ಪ್ರತಿಮೆಯ ಮುಂಭಾಗದಲ್ಲಿ ಪ್ರಸಾದ ವಿತರಣೆ ಮಾಡುವ ಕನಸು ಇಂದು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸಮರ್ಪಣ ಮಹಿಳಾ ಘಟಕದ ಉಪಾಧ್ಯಕ್ಷೆ ಸುಮ ಮಾತನಾಡಿ ಸಂಸ್ಥೆಯ ಪ್ರಮುಖ ಉದ್ದೇಶ ಹಸಿದವರಿಗೆ ಅನ್ನ ನೀಡುವುದಾಗಿದೆ. ದೇವಸ್ಥಾನಗಳು, ರೈಲು ನಿಲ್ದಾಣ, ಪಿಪಿ ವೃತ್ತ, ಎಪಿಎಂಸಿ ಯಾರ್ಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಮ್ಮ ತಂಡದಿಂದ ನಿರಂತರವಾಗಿ ಅನ್ನ ಪ್ರಸಾದ ವಿತರಣೆ ನಡೆಯುತ್ತಿದೆ. ಸಮಾಜಸೇವೆಯಲ್ಲಿ ಆಸಕ್ತಿ ಇರುವವರು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಮರ್ಪಣ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ, ವಿಜಯ್ ಕುಮಾರ್, ಸುಧಾ ಮಂಜುನಾಥ್, ನಳಿನಾ, ಭಾಗ್ಯ, ಶ್ರೇಯಾ, ಪುಟ್ಟಸ್ವಾಮಿ, ಪ್ರಸನ್ನ ಕುಮಾರ್, ಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.