ಸಾರಾಂಶ
ಕೊಪ್ಪಳ: ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ ಅನುದಾನ ಬರುತ್ತದೆ ಎಂಬ ಭರವಸೆ ಇಲ್ಲ ಎಂದು ಕುಷ್ಟಗಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಿಎಂ, ಸಚಿವರು ಪ್ರವಾಸ ಮಾಡಿ ರಾಜ್ಯದ ಸಮಸ್ಯೆ ಆಲಿಸುತ್ತಿಲ್ಲ. ರಾಜ್ಯ ಸರ್ಕಾರ ಜೀವಂತವಿದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ಜನರ ಸಮಸ್ಯೆ ಕೇಳುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯಗೆ ಇದ್ದ ಲವಲವಿಕೆ ಈ ಅವಧಿಯಲ್ಲಿಲ್ಲ. ಅವರಿಗೆ ಇಬ್ಬರು, ಮೂವರು ಸೂಪರ್ ಸಿಎಂ ಇದ್ದರೂ ಇರಬಹುದು ಎಂದು ಅನಿಸುತ್ತದೆ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಯಲಬುರ್ಗಾ ಶಾಸಕರನ್ನು ಸಮಾಧಾನಪಡಿಸುವ ಉದ್ದೇಶದಿಂದ ಅಲ್ಲಿ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿದೆ. ಆದರೆ ಕುಷ್ಟಗಿ ಕ್ಷೇತ್ರಕ್ಕೆ ಏನೂ ನೀಡಿಲ್ಲ ಎಂದು ಆರೋಪಿಸಿದರು.ಸಿದ್ದು ಅನುದಾನ ನೀಡಲಿಲ್ಲ: ಕೃಷ್ಣಾ ಬಿ ಸ್ಕೀಂ ಯೋಜನೆ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಂಜೂರಾಗಿತ್ತು. ಆನಂತರ ಬಂದ ಸಿದ್ದರಾಮಯ್ಯ ಯಾವುದೇ ಅನುದಾನ ನೀಡಿರಲಿಲ್ಲ. ಮತ್ತೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಅನುದಾನ ನೀಡಿದರು. ಈಗ ಕೆರೆ ತುಂಬಿಸುವ ಯೋಜನೆ ಆರಂಭವಾಗಿವೆ. ಕುಷ್ಟಗಿ ತಾಲೂಕಿನ 33 ಕೆರೆಗಳ ಪೈಕಿ ಈಗಾಗಲೇ 18 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪೈಪ್ಲೈನ್ ಹಾದು ಹೋಗಬೇಕಾದ ಹಿನ್ನೆಲೆಯಲ್ಲಿ 15 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬವಾಗಿದೆ. ಈಗ ಸಂಸದರೊಂದಿಗೆ ಚರ್ಚಿಸಿ ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಜೆಜೆಎಂ ಕಾಮಗಾರಿಗಳು ಕಳಪೆಯಾಗಿವೆ. ಕಳಪೆ ಕಾಮಗಾರಿಯಿಂದಾಗಿ ಜನರಿಗೆ ನೀರು ತಲುಪುತ್ತಿಲ್ಲ. ಈಗ ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೃಷ್ಣಾ ನದಿಯಿಂದ ಕುಷ್ಟಗಿ ಕ್ಷೇತ್ರಕ್ಕೆ ಕುಡಿಯುವ ನೀರು ಯೋಜನೆಯೂ ಪೂರ್ಣಗೊಂಡಿಲ್ಲ ಎಂದರು.ಕೆಕೆಆರ್ಡಿಬಿಯಲ್ಲಿ ಕಾಂಗ್ರೆಸ್ಸಿಗರು: ಕೆಕೆಆರ್ಡಿಬಿಯಿಂದ ಕುಷ್ಟಗಿ ಕ್ಷೇತ್ರಕ್ಕೆ ₹76 ಕೋಟಿ ಹಂಚಿಕೆಯಾಗಿದೆ. ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲು ಉದ್ದೇಶಿಸಿರುವ ₹50 ಲಕ್ಷ ಅನುದಾನ ಸಹ ಬಿಡುಗಡೆಯಾಗಿಲ್ಲ. ಕೆಕೆಆರ್ಡಿಬಿಯ ಸಮಿತಿಯಲ್ಲಿ ಕೇವಲ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ಸ್ಥಾನಮಾನ ನೀಡಿಲ್ಲ. ಈ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ಕ್ಷೇತ್ರದ ಕ್ಯಾದಗುಪ್ಪಾದಲ್ಲಿ ಕೈಗಾರಿಕಾ ಪ್ರದೇಶ ಎಂದು ಜಮೀನು ಗುರುತು ಮಾಡಿ ಕೆಲವು ಕಾಮಗಾರಿ ಕೈಗೊಂಡಿದೆ. ನಮ್ಮಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಗ್ರಾನೈಟ್ ಇತರ ಉದ್ಯಮಗಳ ಆರಂಭಕ್ಕೂ ಒತ್ತು ನೀಡಲಾಗುವುದು. ಕೈಗಾರಿಕೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಕ್ಷೇತ್ರದಲ್ಲಿ ಆಸ್ಪತ್ರೆಗಳಿವೆ, ಕಟ್ಟಡಗಳಿವೆ, ಪೀಠೋಪಕರಣಗಳಿವೆ. ಆದರೆ ವೈದ್ಯರಿಲ್ಲ. ನಮಗೆ ಐದು ಹೈಸ್ಕೂಲ್, ಮೂರು ಪಿಯು ಕಾಲೇಜು, ಹಾಸ್ಟೆಲ್ ಉನ್ನತೀಕರಣ, ನಾಲ್ಕು ಮೊರಾರ್ಜಿ ಶಾಲೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇದರಲ್ಲಿ ಸರ್ಕಾರವೇ ರಾಜಕಾರಣ ಮಾಡಿ ಕಾಂಗ್ರೆಸ್ ಶಾಸಕರಿಗೆ ಕೊಡುತ್ತಿದೆ, ನಮಗೆ ಕೊಡುತ್ತಿಲ್ಲ. ಇಲ್ಲಿ ತಾರತಮ್ಯ ಮಾಡುತ್ತಿದೆ ಎಂದರು.ಬಿಜೆಪಿ ಸೋಲಿಗೆ ನಾವೇ ಕಾರಣ: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಮ್ಮ ಮುಖಂಡರ ತಪ್ಪುಗಳು ಸಹ ಆಗಿವೆ. ಬೇಗನೆ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ಈಗಲೂ ವಿರೋಧ ಪಕ್ಷದ ನಾಯಕರನ್ನು ಬೇಗ ಘೋಷಿಸಬೇಕು ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಕೆ. ಮಹೇಶ ಇದ್ದರು.