ಸಾರಾಂಶ
ಗುಣಮಟ್ಟದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಹುಬ್ಬಳ್ಳಿ: ಗುಣಮಟ್ಟದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಔಷಧ ಪೂರೈಕೆಯಲ್ಲಿ ಹಗರಣ ನಡೆದಿರುವ ಶಂಕೆ ಇದ್ದು, ಬಹಳಷ್ಟು ಪ್ರಮುಖರು ಪಾಲ್ಗೊಂಡಿರುವ ಅನುಮಾನ ಇದೆ ಎಂದರು.ಈ ಸರಣಿ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು ಎಂದು ಟೀಕಿಸಿದ ಜೋಶಿ, ಸಿಎಂ ಹೇಳಿದ 3 ದಿನದ ನಂತರವೂ ಯಾವ ಸಚಿವರೂ ಆಸ್ಪತ್ರೆಗೆ ಭೇಟಿ ನೀಡದೆ ಇರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ಸ್ಥಳೀಯವಾಗಿ ಔಷಧಗಳು ಲಭ್ಯ ಇಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಯಾವ ಕಂಪನಿಯವರು ಔಷಧ ಪೂರೈಸಿದರೂ ಬಳಸಿಕೊಳ್ಳುತ್ತದೆ ಎನ್ನುವುದಕ್ಕೆ ಸರ್ಕಾರ ದಿವಾಳಿ ಆಗಿದೆ ಎನ್ನುವುದನ್ನು ಪುಷ್ಟೀಕರಿಸುತ್ತದೆ. ಕೆಟ್ಟ ಮೇಲೆ ಬುದ್ಧಿ ಬಂದಂತೆ ಸಚಿವ ದಿನೇಶ ಗುಂಡೂರಾವ್ ಈಗ ಯೋಚಿಸಿ ಮಾತನಾಡುತ್ತಿದ್ದಾರೆ ಎಂದರು.ಕರ್ನಾಟಕದಲ್ಲಿ ಜನಸಂಖ್ಯೆ ಹೆಚ್ಚು- ಕಡಿಮೆಯಾದರೂ ಕೇಂದ್ರದ ಬೊಟ್ಟು ಮಾಡುವುದು ಆರೋಗ್ಯ ಸಚಿವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಅಟ್ಟರ್ ನಾನ್ ಸೆನ್ಸ್ರಾಜ್ಯಕ್ಕೆ ನಬಾರ್ಡ್ ಸಾಲ ಕಡಿತಗೊಳಿಸಿರುವ ವಿಚಾರದಲ್ಲಿ ಸಿಎಂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ತೀರ ಅಸಂಬದ್ಧ (ಅಟ್ಟರ್ ನಾನಸೆನ್ಸ್). ಕೃಷಿ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಆರ್ಬಿಐ ಅಧಿಕಾರ ನೀಡಿದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಸಿಎಂ ಮುಡಾ, ವಾಲ್ಮೀಕಿ, ಅಬಕಾರಿ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಸಿಎಂ, ನಬಾರ್ಡ್ ವಿಷಯವನ್ನು ಎಳೆದು ತರುತ್ತಿದ್ದಾರೆ ಎಂದು ಟೀಕಿಸಿದರು.ಮುಡಾ ಹಗರಣದಲ್ಲಿ ಹಣಕಾಸಿನ ವ್ಯವಹಾರ ಆಗಿರುವ ಕಾರಣಕ್ಕೆ ಇಡಿ ಎಂಟ್ರಿ ಆಗಿದೆ. ಮನಿ ಲಾಂಡ್ರಿಂಗ್ ಆ್ಯಕ್ಟ್ ತಂದಿದ್ದೆ ಯುಪಿಎ ಸರ್ಕಾರ ಎಂದು ಕುಟುಕಿದರು.
ಫೆಗಾಸಿಸ್ ಹಗರಣದ ಆರೋಪ ಮಾಡಿದವರು ಮೊಬೈಲ್ ಕೊಡಲಿಲ್ಲ, ತನಿಖೆಗೆ ಸಹಕಾರ ಕೊಡಲಿಲ್ಲ ಎಂದು ಜೋಶಿ ತಿಳಿಸಿದರು.