ಸಾರಾಂಶ
ಮೈಸೂರು: 92 ಕೋಟಿ ರೂ. ಖರ್ಚು ಮಾಡಿ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ನಡೆಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಆರತಿ ಮೂಲಕ ಸರ್ಕಾರ ನಾವು ಹಿಂದೂಗಳ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಶಾಸಕರ ಕ್ಷೇತ್ರಗಳಲ್ಲಿ ರಸ್ತೆ ಸರಿಪಡಿಸಲು ಹಣವಿಲ್ಲ. ಒಬ್ಬೊಬ್ಬ ಶಾಸಕರು ಕೇವಲ 1 ಕೋಟಿ ಅನುದಾನಕ್ಕೆ ಬೇಡಿಕೊಳ್ಳುತ್ತಿದ್ದೇವೆ. ಹೀಗಿರುವಾಗ 92 ಕೋಟಿ ಬಳಸುವ ಅವಶ್ಯಕತೆ ಇಲ್ಲ. ಕಾವೇರಿ ಆರತಿ ವಿಚಾರದಲ್ಲಿ ಬಿಜೆಪಿಯವರನ್ನು ಸಭೆಗೆ ಕರೆದಿದ್ದರು. ಕಾವೇರಿ ನದಿಯ ಪಕ್ಕದಲ್ಲಿ ಸ್ವಚ್ಛತೆಯ ವ್ಯವಸ್ಥೆ ಮಾಡಿದರೆ ಅದೇ ಆರತಿ ಮಾಡಿದ ಹಾಗೆ. ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಮಾಡೋದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದರು.
ತುಘಲಕ್ ಮಾದರಿ ಅಧಿಕಾರ:
ತುಮಕೂರು ಜಿಲ್ಲೆಯ ಹೆಸರು ಬದಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ನಡೆಯುವ ದೇವರು ಎನ್ನುತ್ತಾರೆ. ಅಂತಹ ಪುಣ್ಯಸ್ಥಳ ಇರುವ ತುಮಕೂರು ಜಿಲ್ಲೆಯ ಹೆಸರು ಬದಲಿಸೋದು ಒಳ್ಳೆಯದಲ್ಲ. ಸರ್ಕಾರ ತುಘಲಕ್ ಮಾದರಿಯಲ್ಲಿ ಅಧಿಕಾರ ನಡೆಸಲು ಹೊರಟಿದೆ ಎಂದು ಕಿಡಿಕಾರಿದರು.
ಉತ್ತರಪ್ರದೇಶದ ಮಾದರಿಯಲ್ಲಿ ಹೆಸರು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ನಮ್ಮ ನಮ್ಮ ಊರುಗಳ ಇತಿಹಾಸ ತಿಳಿದುಕೊಳ್ಳದೇ ಹೆಸರು ಬದಲಿಸೋದು ಒಳ್ಳೆಯದಲ್ಲ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕಾರಣ ಇನ್ನೂ ತಿಳಿದಿಲ್ಲ. ಈ ಹಿಂದೆ ಅಲ್ಲಿ ಚರ್ಚ್ ನಿರ್ಮಿಸಬೇಕೆಂದು ಡಿ.ಕೆ. ಶಿವಕುಮಾರ್ ಹೊರಟಿದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಾಳೆ ಮಂಡ್ಯ, ಮೈಸೂರಿನ ಹೆಸರನ್ನೂ ಬದಲಾವಣೆ ಮಾಡಬಹುದು. ಹೆಸರು ಬದಲಿಸುವ ವಿಚಾರದಲ್ಲಿ ತುಮಕೂರು ಜಿಲ್ಲೆಯ ಜನತೆ ಹೋರಾಟ ಮಾಡಬೇಕು ಎಂದರು.
ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತ ಘಟನೆ ಮನಸ್ಸಿಗೆ ಬಹಳ ನೋವು ನೀಡಿದೆ. ಪ್ರಕರಣ ಕುರಿತು ತನಿಖೆ ನಡೆಸಬಹುದು. ದೇಶದಲ್ಲಿ ಇದೊಂದು ದೊಡ್ಡ ದುರಂತವಾಗಿದೆ. ಅವರ ಕುಟುಂಬದವರು ಹೇಗೆ ನೋವು ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಆ ಎಲ್ಲಾ ಕುಟುಂಬಗಳಿಗೂ ತಾಯಿ ಚಾಮುಂಡೇಶ್ವರಿ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.
- ಟಿ.ಎಸ್. ಶ್ರೀವತ್ಸ, ಶಾಸಕ