ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶವಿಲ್ಲ

| Published : Oct 13 2024, 01:11 AM IST

ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಜಿಲ್ಲೆಯ ನರೇಗಾ ಕಾಮಗಾರಿ ಪ್ರಗತಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಮೊದಲನೇ ಸ್ಥಾನದಲ್ಲಿದೆ. ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ. ಪ್ರತಿ ಪಂಚಾಯಿತಿಗೆ 3 ಕೋಟಿ ರು.ಗಳಷ್ಟು ಅನುದಾನದ ಕಾಮಗಾರಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ದೊಡ್ಡಬಳ್ಳಾಪುರ: ಜಿಲ್ಲೆಯ ನರೇಗಾ ಕಾಮಗಾರಿ ಪ್ರಗತಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಮೊದಲನೇ ಸ್ಥಾನದಲ್ಲಿದೆ. ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ. ಪ್ರತಿ ಪಂಚಾಯಿತಿಗೆ 3 ಕೋಟಿ ರು.ಗಳಷ್ಟು ಅನುದಾನದ ಕಾಮಗಾರಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಭಕ್ತರಹಳ್ಳಿ, ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ.‌ ಆರ್.ಡಿ.ಪಿ.ಆರ್ ಇಲಾಖೆಯೊಂದಿಗೆ ಚರ್ಚಿಸಿ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಕ್ತ ಷರತ್ತುಗಳೊಂದಿಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದರು.

ಯಾವುದೇ ಕಾಮಗಾರಿ ಬದಲಿಸಿಲ್ಲ:

ನಾನು ತಾಲೂಕಿನ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿದ್ದೇನೆ, ಈ ಹಿಂದೆ ಮಾಡಿದ್ದ ಕ್ರಿಯಾಯೋಜನೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ, ರಾಜಕೀಯ ಬದಲಾವಣೆಗಳಿಗೆ ಅವಕಾಶ ನೀಡಿಲ್ಲ. 2017ರಲ್ಲಿ ತಾಲೂಕಿನಲ್ಲಿ ನಿರ್ಮಿಸಿರುವ ಒಳಚರಂಡಿಗಳು ಇಂದು ಕುಸಿಯುತ್ತಿವೆ, ಒಂದು ಒಳಚರಂಡಿ ಕನಿಷ್ಠ 30 ವರ್ಷ ಬಾಳಿಕೆ ಬರಬೇಕಿತ್ತು, ಆದರೆ, ಇಂದು ಒಳಚರಂಡಿ ಕುಸಿಯುತ್ತಿದೆ ಈ ಪ್ರಶ್ನೆಗೆ ಉತ್ತರವನ್ನು ಕಾಮಗಾರಿ ನಡೆಸಿದ ಗುತ್ತಿಗೆದಾರರೇ ನೀಡಬೇಕಿದೆ . ನಗರ ಭಾಗದ ಒಳಚರಂಡಿ ನಿರ್ವಹಣೆಗೆ 136 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ಜಿಲ್ಲಾಸ್ಪತ್ರೆ ನಿರ್ಮಾಣ ಗುರಿ:

ತಾಲ್ಲೂಕಿನ ಜನತೆಯ ಅರೋಗ್ಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗಾಗಿ ಸಿದ್ದೇನಾಯಕನ ಹಳ್ಳಿಯಲ್ಲಿ 9 ಎಕ್ಕರೆ ಪ್ರದೇಶದಲ್ಲಿ ಸುಮಾರು 22 ಕೋಟಿ ವೆಚ್ಚದಲ್ಲಿ 50 ಬೆಡ್ ಗಳ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 195 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದೆ. ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಈ ಕೊರತೆಯನ್ನು ನೀಗಿಸಲು 6 ಎಕರೆ ಪ್ರದೇಶದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ನೇಕಾರರ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ:

ನಮ್ಮ ತಾಲೂಕು ನೇಕಾರಿಕೆಗೆ ಪ್ರಸಿದ್ದಿ ಪಡೆದಿದ್ದು, ನೇಕಾರರ ಅಭಿವೃದ್ಧಿ ನನ್ನ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ 75 ಕೊಟಿ ವೆಚ್ಚದಲ್ಲಿ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕರೆಂಟ್ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ನೇಕಾರರಿಗೆ ಮುಂದೆ ಇದೊಂದು ಉತ್ತಮ ಸೇವೆ ಸಲ್ಲಿಸುವ ಯೋಜನೆಯಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜವಳಿ ಉತ್ಸವ ಮಾಡಲು ನಿರ್ಧರಿಸಲಾಗಿದೆ. ತಾಲೂಕಿನ ನೇಕಾರಿಕೆ ಉಳಿಸಲು ನೇಕಾರರ ಹಿತರಕ್ಷಣೆ ಕಾಪಾಡುವ ಸಲುವಾಗಿ ಪವರ್ ಲೂಮ್ ಪ್ರೊಟೆಕ್ಷನ್ ಆಕ್ಟ್ ಜಾರಿ ತರಬೇಕಿದೆ ಎಂದರು.

ವಿದ್ಯುತ್ ಚಿತಾಗಾರ ನಿರ್ಮಾಣ:

ತಾಲೂಕಿನ ಓಬದೇನಹಳ್ಳಿಯ ಸಮೀಪ 4 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದ ಅವ, ಕಳೆದ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ, ಅವರ ಅನುಕೂಲಕ್ಕಾಗಿ 9.5 ಕೋಟಿ ವೆಚ್ಚದಲ್ಲಿ ಕಾಡನೂರು ಗ್ರಾಮದಿಂದ ಪೈಪ್ ಲೈನ್ ಗಳ ಮೂಲಕ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಉಪವಿಭಾಗಾಧಿಕಾರಿ ಕಚೇರಿಗೆ ಪ್ರತ್ಯೇಕ ಕಟ್ಟಡ:

ತಾಲೂಕಿನಲ್ಲಿ ತಾಲೂಕು ಕಚೇರಿ ಸ್ಥಿತಿ ಅದೋಗತಿಗೆ ತಲುಪಿದೆ. ಸ್ವಚ್ಛತೆ ಮರೀಚೆಕೆಯಾಗಿದೆ. ತಾಲೂಕು ಕಚೇರಿಯಲ್ಲೇ ಉಪವಿಭಾಗಾಧಿಕಾರಿ ಕಚೇರಿ ಇದೆ. ವೃದ್ಧರು, ಅಂಗವಿಕಲರು, ಮಹಿಳೆಯರು ಮೆಟ್ಟಿಲೇರಿ ಕಚೇರಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಅದನ್ನು ತಪ್ಪಿಸಲು ಡಿವೈಎಸ್ ಪಿ ಕಚೇರಿ‌ ಪಕ್ಕದಲ್ಲಿ 25ಕೋಟಿ ವೆಚ್ಚದಲ್ಲಿ ಎಸಿ ಕಚೇರಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.

ರಾಜ್ಯ ಸರ್ಕಾರದಡಿಯಲ್ಲಿ ಬರುವ 42 ಇಲಾಖೆಗಳ ಯೋಜನಾ ಸೌಲಭ್ಯಗಳನ್ನು ತಾಲೂಕಿನ ಜನತೆಗೆ ತರುವ ಪ್ರಯತ್ನ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನು ಯಾವತ್ತೂ ಟೀಕೆ ಮಾಡಿಲ್ಲ. ಸುಃಖಾ ಸುಮ್ಮನೆ ಟೀಕೆ ಮಾಡುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ವಾರ್ಥ ರಾಜಕಾರಣ ಬಿಡಿ:

ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿರುವ ಕೆಲ ನಗರಸಭಾ ಸದಸ್ಯರು ವಿಷಬೀಜ ಬಿತ್ತುವ ಮೂಲಕ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕ್ಷುಲ್ಲಕ ಆರೋಪಗಳಿಂದ ಸಾಮರಸ್ಯ ಕದಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಮಂತ್ರಿಗಳು ತಾಲೂಕಿನ ಅಭಿವೃದ್ದಿಗೆ ಪೂರಕ ಸಹಕಾರ ನೀಡುತ್ತಿದ್ದಾರೆ. ಆದರೆ ಸ್ಥಳೀಯ ಕೆಲ ಕಾಂಗ್ರೆಸ್‌ ಮುಖಂಡರ ಸ್ವಾರ್ಥದಿಂದ ಹಲವು ಯೋಜನೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಮಾಜಿ ಶಾಸಕರ ಹೆಸರು ಹೇಳದೆ ಮಾರ್ಮಿಕವಾಗಿ ಆರೋಪಿಸಿದರು.

ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಕಲ್ಪನೆಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಮುಂಬರುವ ದಿನಗಳಲ್ಲಿ ಈ ಪರಿಕಲ್ಪನೆಗೆ ತಕ್ಕಂತೆ ಕಾರ್ಯವನ್ನು ಮಾಡುತ್ತಾ ಟೀಕೆ ಮಾಡುವ ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳಿದ್ದಲೇ ಉತ್ತರಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಗ್ರಾಮಾಂತರ ಘಟಕ ಅಧ್ಯಕ್ಷ ನಾಗೇಶ್, ನಗರ ಘಟಕ ಅಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯ ಪದ್ಮನಾಭ್ ಮುಖಂಡರಾದ ಮೋಹನ್, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೋಟೋ- 12ಕೆಡಿಬಿಪಿ8-

ದೊಡ್ಡಬಳ್ಳಾಪುರ ಶಾಸಕ ಧೀರಜ್‌ ಮುನಿರಾಜ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.