ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಮಲೆನಾಡು ಭಾಗದ ಜಿಲ್ಲೆಗಳ ಪ್ರಮುಖ ಸಮಸ್ಯೆಗಳಿಗೆ ಯಾವುದೇ ಸಮರ್ಪಕ ಪರಿಹಾರ ನೀಡಲಾಗಿಲ್ಲ ಎಂದು ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಮಂಜೂರಾದ ಹಲವಾರು ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ಆದರೆ ಹೊಸ ಘೋಷಣೆಗಳನ್ನು ಮಾತ್ರ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಮಲೆನಾಡು ಪ್ರದೇಶದಲ್ಲಿ ಹೆಚ್ಚುತ್ತಿರುವ ಆನೆ, ಮಾನವ ಸಂಘರ್ಷ ಸಮಸ್ಯೆಗೆ ಸರ್ಕಾರ ಪಂಚವಾರ್ಷಿಕ ಯೋಜನೆ ಘೋಷಿಸಿರುವುದು ಸಮರ್ಪಕ ಕ್ರಮವಲ್ಲ. ಇದು ತುರ್ತು ಮತ್ತು ಸೂಕ್ಷ್ಮ ಸಮಸ್ಯೆಯಾಗಿದ್ದು ತಕ್ಷಣವೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಹೆತ್ತೂರು ಭಾಗದಲ್ಲಿ ಆನೆಗಳ ಸಂಚಾರಕ್ಕೆ ಕಾರಿಡಾರ್ ನಿರ್ಮಿಸಲು ಈಗಾಗಲೇ ವರದಿ ನೀಡಲಾಗಿದೆ. ಆ ವರದಿಯ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡುವುದರ ಜೊತೆಗೆ ಕಾರಿಡಾರ್ ನಿರ್ಮಾಣಕ್ಕಾಗಿ ಸರ್ಕಾರವು ಒಮ್ಮೆಲೇ ಕನಿಷ್ಠ 500 ಕೋಟಿ ರು. ಅನುದಾನ ನಿಗಧಿ ಮಾಡಬೇಕು. ಇದಕ್ಕಾಗಿ ಕಾಂಪಾ ನಿಧಿ ಬಳಸಬಹುದು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ, ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗಾ ಜಿಲ್ಲೆಗಳ ನಾಯಕರನ್ನು ಮೆಚ್ಚಿಸಲು ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ಹಾಸನ ಜಿಲ್ಲೆಯಂತಹ ಮಲೆನಾಡು ಭಾಗಗಳಿಗೆ ಸಮರ್ಪಕ ಅನುದಾನ ನೀಡದಿರುವುದು ಅನ್ಯಾಯ ಎಂದು ಹೇಳಿದರು.