ಇರುವುದು ಒಂದೇ ಎಕರೆ ಜಮೀನು; ಭತ್ತ, ಮೀನು ಸಾಕಾಣಿಕೆ ಜೊತೆಗೆ ಸಾಗಿದೆ ಜೀವನ

| Published : Jun 18 2025, 11:49 PM IST

ಇರುವುದು ಒಂದೇ ಎಕರೆ ಜಮೀನು; ಭತ್ತ, ಮೀನು ಸಾಕಾಣಿಕೆ ಜೊತೆಗೆ ಸಾಗಿದೆ ಜೀವನ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಇರುವುದು ಒಂದೇ ಎಕರೆ ಜಮೀನು. ಕಪಿಲಾ ನದಿ ದಂಡೆಯಲ್ಲಿರುವುದು ಭೂಮಿ ಸದಾ ವಸ್ತಿಯಾಗಿರುತ್ತದೆ. ಎರಡು ಬೆಳೆ ಭತ್ತ ಬೆಳೆದುಕೊಳ್ಳುತ್ತಿದ್ದೇವು. ಮನೆ ಬಳಕೆಯಾಗಿ ಉಳಿಯುವ ಭತ್ತವನ್ನು ಮಾರಾಟ ಮಾಡುತ್ತೇವೆ. 20-25 ಸಾವಿರ ರು. ಸಿಗುತ್ತದೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ವೆಂಕಟೇಶ ಅವರು ಇರುವ ಒಂದೇ ಎಕರೆ ಜಮೀನಿನಲ್ಲಿ ಭತ್ತ ಹಾಗೂ ಮೀನು ಕೃಷಿ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದಾರೆ.

ನಮಗೆ ಇರುವುದು ಒಂದೇ ಎಕರೆ ಜಮೀನು. ಕಪಿಲಾ ನದಿ ದಂಡೆಯಲ್ಲಿರುವುದು ಭೂಮಿ ಸದಾ ವಸ್ತಿಯಾಗಿರುತ್ತದೆ. ಎರಡು ಬೆಳೆ ಭತ್ತ ಬೆಳೆದುಕೊಳ್ಳುತ್ತಿದ್ದೇವು. ಮನೆ ಬಳಕೆಯಾಗಿ ಉಳಿಯುವ ಭತ್ತವನ್ನು ಮಾರಾಟ ಮಾಡುತ್ತೇವೆ. 20-25 ಸಾವಿರ ರು. ಸಿಗುತ್ತದೆ.

ಹೀಗಿರುವಾಗ ನಂಜನಗೂಡು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಮೀನುಕೃಷಿ ಮಾಡಿ ಎಂದು ಸಲಹೆ ಮಾಡಿದರು. ಅದರಂತೆ ನರೇಗಾದಲ್ಲಿ ಒಂದು ಲಕ್ಷ ರು. ಅನುದಾನ ಸಿಕ್ಕಿತು. ಐದು ಕುಂಟೆಯಲ್ಲಿ ಕೊಳ ನಿರ್ಮಿಸಿ, ಎರಡು ಸಾವಿರ ಮೀನುಮರಿಗಳನ್ನು ಬಿಟ್ಟು, ಸಾಕಾಣಿಕೆ ಮಾಡಿದರು. ಉತ್ತಮವಾದ ಇಳುವರಿ ಬಂದಿತು. ಜೊತೆಗೆ ಆದಾಯವೂ ಬಂದಿತು.

ಎರಡನೇ ಬಾರಿ ಸುತ್ತೂರು ಜೆಎಸ್ಎಸ್‌ ಕೆವಿಕೆಯಿಂದ ಹೊಸ ಮೀನು ತಳಿ ತೆಗೆದುಕೊಂಡು ಸಾಕಾಣಿಕೆಗೆ ಮುಂದಾದರು. ಯಾಕೋ ಸರಿ ಹೋಗಲಿಲ್ಲ. ಭತ್ತದ ಬೆಳೆ ಮುಂದುವರೆದಿದೆ. ಈಗ ಮತ್ತೆ ಮೀನು ಸಾಕಾಣಿಕೆಗೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ.

ನಾನು ತಾಪಂ ಸದಸ್ಯನಾಗಿ, ಅಲ್ಲಿ ಇಲ್ಲಿ ಓಡಾಡುತ್ತಿರುವುದರಿಂದ ಇತರೆ ಬೆಳೆ ಬೆಳೆಯಲಾಗಲಿಲ್ಲ. ಭತ್ತ ಹಾಗೂ ಮೀನು ಕೃಷಿಯನ್ನು ಆರಾಮವಾಗಿ ಮಾಡಬಹುದು ಎಂದೇ ಅಷ್ಟಕ್ಕೆ ಸೀಮಿತವಾಗಿದ್ದೇನೆ. ನನ್ನ ಜೊತೆಗೆ ಪತ್ನಿ ಮಂಗಳಮ್ಮ ಕೂಡ ಕೃಷಿಯಲ್ಲಿ ಸಾಥ್‌ ನೀಡುತ್ತಿದ್ದಾರೆ ಎನ್ನುತ್ತಾರೆ ವೆಂಕಟೇಶ.

ಮೀನು ಕೃಷಿಯಲ್ಲಿ ವೆಂಕಟೇಶ ಅವರ ಸಾಧನೆಗಾಗಿ 2022ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ,

ಸಂಪರ್ಕ ವಿಳಾಸ

ವೆಂಕಟೇಶ ಬಿನ್‌ ಚಿಕ್ಕಮಾದಶೆಟ್ಟಿ

ಆಲಂಬೂರು

ನಂಜನಗೂಡು ತಾಲೂಕು

ಮೈಸೂರು ಜಿಲ್ಲೆ

ಮೊ.99644 15328ವ್ಯವಸಾಯ ಕಷ್ಟ. ಸರಿಯಾದ ಬೆಲೆ ಸಿಕ್ಕರೇ ಪರವಾಗಿಲ್ಲ. ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ನನಗೆ ಮೊದಲು ಬಾರಿಗೆ ಮೀನು ಕೃಷಿಯಲ್ಲಿ ಆದಾಯ ಬಂತು. ನಂತರ ಹೊಸ ತಳಿ ಸಾಕಾಣಿಕೆ ಮಾಡಲು ಹೋದಾಗ ನಷ್ಟವಾಯಿತು.

-ವೆಂಕಟೇಶ, ಆಲಂಬೂರುಇವ್ರು ತಾಪಂ ಮಾಜಿ ಸದಸ್ಯರು,

ಒಬ್ಬ ಮಗ ಎಂಜಿನಿಯರ್‌, ಮತ್ತೊಬ್ಬ ಪದವೀಧರ

ವೆಂಕಟೇಶ ಅವರು ನಂಜನಗೂಡು ತಾಲೂಕು ಪಂಚಾಯ್ತಿ ಸದಸ್ಯರಾಗಿ ಐದು ವರ್ಷ ಕಾರ್ಯನಿರ್ವಹಿಸಿದ್ದಾರೆ. ಇವರು ಬಿಜೆಪಿ ಟಿಕೆಟ್‌ ಮೇಲೆ ಹೊರಳವಾಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವಧಿ ಮುಗಿದ ನಾಲ್ಕು ವರ್ಷಗಳಾಗುತ್ತಾ ಬಂತು, ಮತ್ತೊಮ್ಮೆ ಸ್ಪರ್ಧಿಸುವಿರಾ? ಎಂದರೇ ಎರಡು ಪಕ್ಷಗಳು ಸೇರಿಕೊಂಡು (ಆಡಳಿತ- ವಿರೋಧ ಪಕ್ಷ) ಚುನಾವಣೆನೇ ಮಾಡ್ತಾ ಇಲ್ಲ. ಚುನಾವಣೆ ಮಾಡಿದರೆ, ನಮ್ಮ ಕ್ಷೇತ್ರದ ಮೀಸಲಾತಿ ಯಾವುದಕ್ಕೆ ನಿಗದಿಯಾಗುತ್ತದೆ ಎಂಬುದನ್ನು ನೋಡಿಕೊಂಡು ತೀರ್ಮಾನಿಸುತ್ತೇನೆ ಎನ್ನುತ್ತಾರೆ ವೆಂಕಟೇಶ್‌.

ಅಂದಹಾಗೆ ಇವರ ಮೊದಲ ಪುತ್ರ ವಿ. ಶಿವಕುಮಾರ್‌ ಬೆಂಗಳೂರು ಆಚಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ ಮುಗಿಸಿದ್ದಾರೆ. ಎರಡನೇ ಮಗ ಚಂದ್ರು ನಂಜನಗೂಡಿನಲ್ಲಿ ಪದವಿ ಪಡೆದಿದ್ದಾರೆ.