ಸಾರಾಂಶ
ನಿರಂತರ ಯೋಗ ಕಲಿಕೆಯಿಂದ ಮಾನಸಿಕ ಹಾಗೂ ದೈಹಿಕ ದೃಢತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಹಿರಿಯ ವಿಭಾಗದ ಪ್ರಧಾನ ನ್ಯಾಯಾಧೀಶರಾದ ಎಸ್.ನಟರಾಜ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಾಗರ
ನಿರಂತರ ಯೋಗ ಕಲಿಕೆಯಿಂದ ಮಾನಸಿಕ ಹಾಗೂ ದೈಹಿಕ ದೃಢತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಹಿರಿಯ ವಿಭಾಗದ ಪ್ರಧಾನ ನ್ಯಾಯಾಧೀಶರಾದ ಎಸ್.ನಟರಾಜ್ ಅಭಿಪ್ರಾಯಪಟ್ಟರು.ಇಲ್ಲಿನ ಪ್ರಾಂತ್ಯ ಆರ್ಯ ಈಡಿಗರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಜಿಲ್ಲಾ ಅಮೆಚೂರ್ ಯೋಗಾಸನಾ ಕ್ರೀಡಾ ಅಸೋಸಿಯೇಷನ್ ಮತ್ತು ಕಾನೂನು ನೆರವು ಸಮಿತಿ, ಗುರುಕುಲಂ ಯೋಗ ವಿದ್ಯಾಕೇಂದ್ರದ ವತಿಯಿಂದ ಏರ್ಪಡಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಯೋಗಾಸನಾ ಸ್ಪರ್ಧೆ ಮತ್ತು ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕುರಿತು ಇನ್ನಷ್ಟು ಆಸಕ್ತಿ ಹೆಚ್ಚಬೇಕು. ಭಾರತೀಯ ಯೋಗಕ್ಕೆ ಪ್ರಾಚೀನ ಇತಿಹಾಸವಿದೆ. ಭಾರತದಲ್ಲಿ ಋಷಿಮುನಿಗಳ ಕಾಲದಿಂದಲೂ ಯೋಗವನ್ನು ಕಲಿಯುತ್ತಾ, ಕಲಿಸುತ್ತಾ, ಅನುಸರಿಸುತ್ತಾ ಬರಲಾಗಿದೆ. ಇದೀಗ ವಿಶ್ವದೆಲ್ಲೆಡೆ ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಜೂ. ೨೧ರಂದು ಭಾರತ ಕರೆ ಕೊಟ್ಟ ಯೋಗದಿನಕ್ಕೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆತಿದೆ. ನಾವು ಯೋಗ ಕಲಿಯುವ ಮೂಲಕ ಮಕ್ಕಳಿಗೂ ಯೋಗ ಕುರಿತು ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸಂಸ್ಥೆ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ ಮಾತನಾಡಿ, ೧೯೭೮ರಲ್ಲಿ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ರಾರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಯೋಗಾಸನಾ ಸ್ಪರ್ಧೆಗಳಿಗೆ ರಾಜ್ಯದ ತಂಡವನ್ನು ಕಳಿಸಲಾಗುತ್ತಿದೆ. ಕರ್ನಾಟಕದ ಯೋಗಪಟುಗಳು ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾರೆ ಎಂದು ಹೇಳಿದರು.
ಕಾರ್ಯದಲ್ಲಿ ಗಣಪತಿ ಶಿರಳಗಿ, ಜಲೀಲ್ ಸಾಗರ್, ವಿಕಾಸ್ ವಿ., ಆರ್ವಿ ಎಲ್.ಎಚ್. ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ಮಾದೇಶ್ ಎಂ.ವಿ., ಪ್ರಮುಖರಾದ ಪರಮೇಶ್ವರ್, ಕರುಣಾಕರ್, ಕೆ.ಎಸ್.ಗೌತಮ್, ಅಮರನಾಥ್, ಗಣೇಶ್ ಕುಮಾರ್, ಲಕ್ಷ್ಮೀನಾರಾಯಣ, ಶ್ರೀಧರಮೂರ್ತಿ ಕಾನುಗೋಡು ಹಾಜರಿದ್ದರು. ರಾಜೇಶ್ ಸ್ವಾಗತಿಸಿದರು. ಸಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ರಾಯ್ಕರ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.