ಸಾರಾಂಶ
ಚಿಕ್ಕಮಗಳೂರು: ಪ್ರಸಿದ್ಧ ದೈವಗಳ ಆವಾಸ ತಾಣವಾದ ಹಿರೇಮಗಳೂರಿನ ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ಭಕ್ತಾದಿಗಳ ಪೂಜಾಕೈಂಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಹಿರೇಮಗಳೂರು ಗ್ರಾಮದ ಶ್ರೀ ಮುತ್ತಿನಮ್ಮ ಹಾಗೂ ಶ್ರೀ ಕೆಂಚರಾಯ ದೇವಸ್ಥಾನಗಳಿಗೆ 80 ಲಕ್ಷ ರು. ವೆಚ್ಚದಲ್ಲಿ ಕಲ್ಲಿನ ಕೆಲಸಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಭಕ್ತ ಸಮೂಹದ ಧಾರ್ಮಿಕ ನೆಲೆಯನ್ನು ಗಟ್ಟಿಗೊಳಿಸಲು ದೇವಾಲಯಗಳ ಅಭಿವೃದ್ಧಿಗೆ ಹೆಜ್ಜೆ ಹಾಕಲಾಗುತ್ತಿದೆ ಎಂದರು. ದೇವಾಲಯ ಅಥವಾ ಧರ್ಮದ ಕೆಲಸದಲ್ಲಿ ಜಾತಿ ಇರಕೂಡದು. ಅಭಿಮಾನದಿಂದ ಮನೆಯ ಕೆಲಸದಂತೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕು. ಈಗಾಗಲೇ ಹಿಂದಿನ ಸರ್ಕಾರದ ಅವಧಿಯಲ್ಲಿ ಎರಡು ದೇವಾಲಯ ಅಭಿವೃದ್ಧಿಗೆ ಅನುದಾನ ಮಂಜೂರಾತಿಯಾಗಿತ್ತು. ಇದೀಗ ಅನುದಾನವು ಬಿಡುಗಡೆಗೊಂಡು ಕಲ್ಲಿನ ಕೆಲಸಕ್ಕೆ ಆರಂಭವಾಗುತ್ತಿರುವುದು ಸ್ವಾಗತಾರ್ಹ ಎಂದರು.ತಾಲೂಕಿನ ಯಾವುದೇ ಗ್ರಾಮಗಳಲ್ಲಿರದ ಹಲವಾರು ದೇವತೆಗಳು ಹಿರೇಮಗಳೂರಿನಲ್ಲಿ ನೆಲೆಸಿವೆ. ಶ್ರೀ ಕೋದಂಡರಾಮಚಂದ್ರ ಸ್ವಾಮಿ, ಮುತ್ತಿನಮ್ಮ, ಚಿಕ್ಕಮ್ಮ, ಭಾರ್ಗವಪುರಿ, ಪರಶುರಾಮ, ಪಾತಾಳೇಶ್ವರ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ, ಗೌರೇಶ್ವರ, ಶನೇಶ್ವರ, ಮಾಸ್ತಮ್ಮ ಗುಡಿಗಳಿರುವ ಪವಿತ್ರಗಳನ್ನು ಒಳಗೊಂಡಿದೆ ಎಂದು ಹೇಳಿದರು.ಜಗತ್ತಿನಲ್ಲೇ ಭಾರತವು ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನೆಲೆಯನ್ನು ಒಳಗೊಂಡಿರುವ ದೇಶ. ಧರ್ಮಾಧಾರಿತ, ಸಂಸ್ಕೃತಿಯಾಧಾರಿತ ನೆಲೆಗಟ್ಟನ್ನು ಉಳಿಸಿಕೊಂಡಿದೆ. ಜೊತೆಗೆ ಭಾರತೀಯರು ಸೈನಿಕರು, ದೇಶಕ್ಕೆ ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿಸಬೇಕು. ರಾಷ್ಟ್ರಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಂಡಿರಬೇಕು ಎಂದು ತಿಳಿಸಿದರು.ದೇಶದ ಹಲವಾರು ಮಹಾನೀಯರ ಸಂದೇಶದಂತೆ ದೇವಾಲಯ ನಿರ್ಮಾಣ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಸ್ವಧರ್ಮವನ್ನು ಹೆಚ್ಚಿನ ಪ್ರೀತಿಯಿಂದ ಬೆಳೆಸಿದರೆ, ಅನ್ಯಧರ್ಮಕ್ಕೆ ತೆರಳಲು ಇಚ್ಛೆ ಪಡುವುದಿಲ್ಲ. ಹಾಗಾಗಿ ಸ್ವಧರ್ಮವನ್ನು ಗಟ್ಟಿಗೊಳಿಸುವಂಥ ಕೆಲಸ ಎಲ್ಲರೂ ಒಂದಾಗಿ ಮಾಡಬೇಕು. ಜೊತೆಗೆ ಸ್ವಧರ್ಮ ಗೌರವಿಸದಂತೆ ಪರಧರ್ಮವನ್ನು ಗೌರವಿಸುವ ಪರಿ ಕಲಿತಿರಬೇಕು ಎಂದರು. ಶ್ರೀ ಮುತ್ತಿನಮ್ಮ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಮಾತನಾಡಿ, ಪ್ರಸ್ತುತ ಶ್ರೀ ಮುತ್ತಿನಮ್ಮ ದೇವಾಲಯಕ್ಕೆ 75 ಲಕ್ಷ ರು., ಕೆಂಚರಾಯಸ್ವಾಮಿ ದೇವಾಲಯಕ್ಕೆ 5 ಲಕ್ಷ ರು.ಗಳು ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಗೊಂಡಿದೆ. ಜೊತೆಗೆ ಸಣ್ಣಪುಟ್ಟ ಆರ್ಥಿಕ ವ್ಯತ್ಯಾಸಗಳು ಕಂಡುಬಂದಲ್ಲಿ ಶಾಸಕರು ತಮ್ಮ ನಿಧಿಯಿಂದ ಅನುದಾನ ಭರವಸೆ ನೀಡಿರುವುದು ಶ್ಲಾಘನೀಯ ಎಂದರು.ಹಿಂದಿನ ಶಾಸಕ ಸಿ.ಟಿ.ರವಿ ಹಾಗೂ ಹಾಲಿ ಶಾಸಕರು ಕೂಡಾ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ದೇವಾಲಯ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರ ಮಾರ್ಗದರ್ಶನದೊಂದಿಗೆ ಎಲ್ಲರೂ ಒಗ್ಗಟ್ಟಾಗಿ ದೇವಾಲಯವನ್ನು ಸದ್ಯದಲ್ಲೇ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.