ಜನನ, ಮರಣ ನೋಂದಣಿ ವಿಳಂಬ ಆಗಬಾರದು: ಡಿಸಿ

| Published : May 27 2025, 11:52 PM IST / Updated: May 27 2025, 11:53 PM IST

ಸಾರಾಂಶ

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿ ಸಮನ್ವಯ ಸಮಿತಿ ಸಭೆ

- - -

- ನ್ಯಾಯಾಲಯ ಆದೇಶದಂತೆ ಜನನ, ಮರಣ ದಿನಾಂಕವು ನೋಂದಣಿ ಆಗಬೇಕು

- ಜನವರಿ-ಏಪ್ರಿಲ್‌ವರೆಗೆ 4593 ಗಂಡು, 4439 ಹೆಣ್ಣು ಸೇರಿ 9032 ಜನನ ಪ್ರಕರಣ.

- ಇದೇ ಅವಧಿಯಲ್ಲಿ 3313 ಗಂಡು, 2599 ಹೆಣ್ಣು ಸೇರಿ 5912 ಮರಣ ಪ್ರಕರಣ ದಾಖಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ್ಯಾಯಾಲಯ ಆದೇಶದಂತೆ ಜನನ, ಮರಣ ದಿನಾಂಕವು ನೋಂದಣಿ ಆಗಬೇಕು. ನ್ಯಾಮತಿಯಲ್ಲಿ ನೋಂದಣಿಗೆ ಶೀಘ್ರವೇ ಲಾಗಿನ್ ಸಮಸ್ಯೆ ಸರಿಮಾಡಿಸಬೇಕು. ಸಾರ್ವಜನಿಕರು ಜನನ ದಿನಾಂಕ ತಿದ್ದುಪಡಿ ಮಾಡುವಂತೆ ಒತ್ತಾಯಿಸಬಾರದು. ಜನನ ಮರಣಗಳನ್ನು ನಿಗದಿತ ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರಾಧಿಕಾರದ ಮುಂದೆ ಪ್ರತಿಯೊಬ್ಬರೂ ನೋಂದಾಯಿಸಬೇಕು ಎಂದರು.

2024ರ ಸಾಲಿನ ಜನವರಿಯಿಂದ ಡಿಸೆಂಬರ್ ಮಾಹೆಯವರೆಗೆ ಜನನ ಅಂಕಿ ಅಂಶದಲ್ಲಿ 14703 ಗಂಡು, 13847 ಹೆಣ್ಣು ಸೇರಿ 28550 ಜನನ ಪ್ರಕರಣಗಳಿವೆ. ಮರಣ ಪ್ರಕರಣಗಳಲ್ಲಿ ಇದೇ ಅವಧಿಯಲ್ಲಿ 9902 ಗಂಡು, 7361, ಹೆಣ್ಣು, 1 ತೃತೀಯ ಲಿಂಗ ಸೇರಿ 17264 ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಜರುಗಿವೆ ಎಂದರು.

ಪ್ರಸಕ್ತ 2025ರ ಸಾಲಿನ ಜನವರಿಯಿಂದ ಏಪ್ರಿಲ್‌ವರೆಗೆ ಜನನ ಅಂಕಿ ಅಂಶದಲ್ಲಿ 4593 ಗಂಡು, 4439 ಹೆಣ್ಣು ಸೇರಿ 9032 ಜನನ ಪ್ರಕರಣಗಳಿವೆ. ಮರಣ ಪ್ರಕರಣಗಳಲ್ಲಿ ಇದೇ ಅವಧಿಯಲ್ಲಿ 3313 ಗಂಡು, 2599 ಹೆಣ್ಣು ಸೇರಿ 5912 ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಜರುಗಿದೆ. ಜನನ ಹಾಗೂ ಮರಣಗಳ ಅಂಕಿ ಅಂಶಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜನನ, ಮರಣ ನೋಂದಣಿ ಪ್ರಾಧಿಕಾರವಾಗಿದ್ದು, ನಗರ, ಪಟ್ಟಣ ಪ್ರದೇಶದಲ್ಲಿ ಮುಖ್ಯಾಧಿಕಾರಿ, ಆಯುಕ್ತರು ಪ್ರಾಧಿಕಾರವಾಗಿರುತ್ತಾರೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916 ನೊಂದಣಿ ಘಟಕಗಳು, ನಗರ ಪ್ರದೇಶದಲ್ಲಿ 20 ಸೇರಿದಂತೆ ಒಟ್ಟು 936 ನೊಂದಣಿ ಘಟಕಗಳಿರುತ್ತವೆ ಎಂದರು.

ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಉಪಸ್ಥಿತರಿದ್ದರು.

- - -

-26ಕೆಡಿವಿಜಿ35:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿ ಸಮನ್ವಯ ಸಮಿತಿ ಸಭೆ ನಡೆಯಿತು.