ಪಾಲಿಕೆ ಸಭೆಯಲ್ಲಿ ಅನುದಾನ ಹಂಚಿಕೆ ಗದ್ದಲ

| Published : Aug 18 2024, 01:46 AM IST

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯರ ಗದ್ದಲ ಜೋರಾಗಿತ್ತು. ವಾರ್ಡ್‌ವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯರ ಗದ್ದಲ ಜೋರಾಗಿತ್ತು. ವಾರ್ಡ್‌ವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್‌ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್‌ ವಿರುದ್ಧ ಕಿಡಿಕಾರಿದ ಪ್ರತಿಪಕ್ಷದ ಸದಸ್ಯರು, ಪಾಲಿಕೆಯ 58 ವಾರ್ಡ್‌ಗಳ ಪೈಕಿ 37 ವಾರ್ಡ್‌ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಲಾಗಿದೆ. ಉಳಿದ ವಾರ್ಡ್‌ಗಳಿಗೆ ಅನುದಾನ ಏಕೆ ಹಂಚಿಲ್ಲ ಎಂದು ಪ್ರಶ್ನಿಸಿದರು.ಸಭೆಯಲ್ಲಿ ಗದ್ದಲ:

ಎಲ್ಲ ವಾರ್ಡ್‌ಗಳಿಗೆ ಅನುದಾನವನ್ನು ಸರಿ ಸಮಾನವಾಗಿ ಹಂಚಿಕೆ ಮಾಡಬೇಕು. ಕೆಲವೇ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಮುಜಮ್ಮಿಲ್‌ ಡೋಣಿ ಆಕ್ರೋಶ ಹೊರಹಾಕಿದರು.ಬಳಿಕ, ಆಡಳಿತ ಪಕ್ಷದ ನಾಯಕ ಗಿರೀಶ ದೋಂಗಡಿ ಮಾತನಾಡಿ, ಸಭೆಯನ್ನು ಅಜೆಂಡಾ ಅನ್ವಯ ನಡೆಸಬೇಕು. ಅನುದಾನ ಹಂಚಿಕೆ ವಿಚಾರ ಆಮೇಲೆ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದರು. ಆದರೆ, ಪ್ರತಿಪಕ್ಷದ ಸದಸ್ಯರು ಮಾತ್ರ ಬಜೆಟ್‌ ಕುರಿತು ಚರ್ಚೆ ನಡೆಸಬೇಕೆಂದು ಪಟ್ಟುಹಿಡಿದರು. ಇದರಿಂದ ಗದ್ದಲ ಉಂಟಾಗಿ ಸಭೆಯಲ್ಲಿ ಯಾರೂ ಏನು ಮಾತನಾಡುತ್ತಿದ್ದಾರೆ ಎನ್ನುವುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಮೇಯರ್‌ ಸವಿತಾ ಕಾಂಬಳೆ ಅವರು ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದರು.

ನಂತರ ಸಭೆ ಶುರುವಾದ ಬಳಿಕ ಒಟ್ಟು ₹10 ಕೋಟಿ ಅನುದಾನದಲ್ಲಿ ₹ 6 ಕೋಟಿ ಅನುದಾನವನ್ನು ಪ್ರತಿಪಕ್ಷಕ್ಕೆ ಹಾಗೂ ₹ 4 ಕೋಟಿ ಅನುದಾನವನ್ನು ಆಡಳಿತ ಪಕ್ಷಕ್ಕೆ ಹಂಚಿಕೆ ಮಾಡಲಾಗುವುದು ಎಂದು ಮೇಯರ್‌ ಸವಿತಾ ಕಾಂಬಳೆ ಸಭೆಗೆ ತಿಳಿಸಿದರು.

ಪಾಲಿಕೆಗೆ ಅನುದಾನದ ಸಮಸ್ಯೆ:

ಬೆಳಗಾವಿ ಪಾಲಿಕೆಗೆ ಅನುದಾನದ ಸಮಸ್ಯೆ ಎದುರಾಗಿದ್ದು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಾಲಿಕೆಯಿಂದ ₹ 3 ಕೋಟಿ ಜಿಎಸ್‌ಟಿ ದಂಡ ಪಾವತಿಸಬೇಕಿದ್ದು, ಈ ದಂಡದ ಮೊತ್ತವನ್ನು ಕಡಿತಗೊಳಿಸುವಂತೆ ಮನವಿ ಮಾಡಲಾಯಿತು.ಇದಕ್ಕೂ ಮುನ್ನ ನೂತನವಾಗಿ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಉಪ ಮೇಯರ್ ಆನಂದ ಚೌಹಾನ್‌, ಶಾಸಕ ಆಸೀಫ್ ಸೇಠ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

17ಬಿಇಎಲ್‌3--------------------------------

ಬಾಕ್ಸ್‌

ಪಾಲಿಕೆ ಮೇಲೆ ಮೊಕದ್ದಮೆಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ನಿರ್ವಹಣೆಯ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಹೊಸ ಗುತ್ತಿಗೆಯನ್ನು 15 ದಿನದಲ್ಲಿ ನೇಮಕಾತಿ ಮಾಡಲಾಗುವುದು. ತುರಮರಿ ಕಸ ವಿಲೇವಾರಿ ಘಟಕದಲ್ಲಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕಸ ವಿಲೇವಾರಿ ನಿರ್ವಹಣೆ ಮಾಡುವ ಕಂಪನಿಯು ಪಾಲಿಕೆ ಮೇಲೆ ಮೊಕದ್ದಮೆ ದಾಖಲಿಸಿದೆ. ಅಲ್ಲಿ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ವ್ಯಾಪಕ ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತುರಮರಿ ಕಸ ವಿಲೇವಾರಿ ಘಟಕವನ್ನು ಪರಿಶೀಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.