ಕಡೇಚೂರು ಬಾಡಿಯಾಳ ಕೈಗಾರಿಕಾ ಕಂಪನಿಗಳಿಂದ ವಿಷಾನಿಲ - ದಟ್ಟವಾದ ಕೆಮಿಕಲ್‌ ಹೊಗೆ, ದುರ್ನಾತ...!

| N/A | Published : Jun 14 2025, 02:03 AM IST / Updated: Jun 14 2025, 11:19 AM IST

ಕಡೇಚೂರು ಬಾಡಿಯಾಳ ಕೈಗಾರಿಕಾ ಕಂಪನಿಗಳಿಂದ ವಿಷಾನಿಲ - ದಟ್ಟವಾದ ಕೆಮಿಕಲ್‌ ಹೊಗೆ, ದುರ್ನಾತ...!
Share this Article
  • FB
  • TW
  • Linkdin
  • Email

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ (ಜೂ.12) ಮಧ್ಯರಾತ್ರಿ ಕೆಮಿಕಲ್‌ ಕಂಪನಿಗಳಿಂದ ಹೊರಹೊಮ್ಮಿದ ದಟ್ಟವಾದ ಕಪ್ಪುಹೊಗೆ, ದುರ್ನಾತ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿತ್ತಲ್ಲದೆ, ಸಹಜವಾಗಿ ಉಸಿರಾಡಲೂ ಕಷ್ಟವಾಗಿತ್ತು.

  ಯಾದಗಿರಿ : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ (ಜೂ.12) ಮಧ್ಯರಾತ್ರಿ ಕೆಮಿಕಲ್‌ ಕಂಪನಿಗಳಿಂದ ಹೊರಹೊಮ್ಮಿದ ದಟ್ಟವಾದ ಕಪ್ಪುಹೊಗೆ, ದುರ್ನಾತ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿತ್ತಲ್ಲದೆ, ಸಹಜವಾಗಿ ಉಸಿರಾಡಲೂ ಕಷ್ಟವಾಗಿತ್ತು. 

ಕಳೆದ ಕೆಲವು ದಿನಗಳಿಂದ ವಾತಾವರಣ ಶಾಂತವಾಗಿ, ಎಲ್ಲೆಡೆ ಮೊದಲಿನಿಂತೆ ಸುಧಾರಣೆಯಾಗುತ್ತಿದೆ ಎಂದುಕೊಂಡು ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರಿಗೆ ಆಘಾತ ಮೂಡಿಸಿತ್ತು. ಜೊತೆಗೆ, ಕೆಮಿಕಲ್‌ಯುಕ್ತ ಕಲುಷಿತ ನೀರು ಕಾರ್ಖಾನೆಗಳಿಂದ ಅಡ್ಡದಾರಿಯ ಮೂಲಕ ಹಳ್ಳಗಳಿಗೆ ಹರಿಯುತ್ತಿರುವುದು ಮಳೆ ಸುರಿಯುತ್ತಿರುವ ಈ ಸಂದರ್ಭದಲ್ಲಿ ಆತಂಕ ಮೂಡಿಸಿದೆ. ವಾರದ ಹಿಂದಷ್ಟೇ, ಇಂತಹ ಕಲುಷಿತ ನೀರಿನಿಂದ ಸಾವಿರಾರು ಮೀನುಗಳು-ಜಲಚರಗಳು ಸಾವನ್ನಪ್ಪಿದ ಬೆನ್ನಲ್ಲೇ, ಮತ್ತೇ ಕೆಮಿಕಲ್‌ ಕಂಪನಿಗಳು ಬುಧವಾರ- ಗುರುವಾರ ಕಲುಷಿತ ನೀರು ಹರಿಬಿಡುತ್ತಿರುವುದ ಕಂಡು ಮತ್ತೇನು ಆಪತ್ತು ಕಾದಿದೆಯೋ ಎಂದು ದಿಗಿಲಾಗಿದ್ದರು.

ವಿಷಪೂರಿತ ನೀರನ್ನು ಇಲ್ಲಿನ ಆದರ್ಶ ಕಂಪನಿಯವರು ಚರಂಡಿಗೆ ಬಿಡುತ್ತಿದ್ದು, ಅದು ಮುಂದೆ ಹಳ್ಳ- ನದಿಗೆ ಸೇರಿ ಜನ- ಜಾನುವಾರುಗಳ ಜೀವಕ್ಕೆ ಕುತ್ತಾಗಲಿದೆ ಎಂದು ಆರೋಪಿಸಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸೇನೆಯ ವೀರೇಶ ಸಜ್ಜನ್‌ ಹಾಗೂ ಮತ್ತಿತರರು ಶುಕ್ರವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕೈಗಾರಿಕೆ ಪ್ರದೇಶದಲ್ಲಿನ ಕೆಲವು ಕಂಪನಿಗಳು ಈ ಕಳ್ಳಾಟದಿಂದ ಜನರ ಜೀವಕ್ಕೆ ಆಪತ್ತು ಎರಗಲಿದೆ. ಅಧಿಕಾರಿಗಳು ಅಥವಾ ಗಣ್ಯರು ಪರಿಶೀಲನೆ ವೇಳೆ ಮಾತ್ರ ಸುಮ್ಮನಾಗುವ ಕಂಪನಿಗಳು, ಹೊತ್ತಿಲ್ಲದ ಹೊತ್ತಲ್ಲಿ, ರಾತೋರಾತ್ರಿ ವಿಷಕಾರಿ-ಅಪಾಯ ತರುವ ಹೊಗೆಯನ್ನು ಬಿಡುತ್ತಾರೆ ಎಂದು ಅವರು ಆರೋಪಿಸಿದರು. 

Read more Articles on