ಸಸ್ಯ, ಪ್ರಾಣಿ ಸಂಕುಲಕಕ್ಕೆ ತಿಮ್ಮಕ್ಕನ ಕೊಡುಗೆ ಅಪಾರ

| Published : Nov 17 2025, 01:02 AM IST

ಸಾರಾಂಶ

ಈಗಾಗಲೇ ಪರಿಸರದ ಅಸಮತೋಲನದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿವೆ. ಇದಕ್ಕೆಲ್ಲಾ ಇರುವುದು ಒಂದೇ ಪರಿಹಾರ ಅದು ಸಾಲು ಮರದ ತಿಮ್ಮಕ್ಕನಂತವರು ಊರಿಗೆ ಒಬ್ಬರು ಹುಟ್ಟಬೇಕು. ತಿಮ್ಮಕ್ಕನ ಮಾದರಿಯಲ್ಲೆ ಎಲ್ಲರೂ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ಸಾಲು ಮರದ ತಿಮ್ಮಕ್ಕನವರ ಜಯಂತಿಯನ್ನು ಸರ್ಕಾರ ಮಾಡಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಯಾವುದೇ ಸ್ವಾರ್ಥ ಮನೋಭಾವ, ಆಸೆಯಿಲ್ಲದೆ 8 ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಣೆ ಮಾಡಿರುವಂತಹ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಈ ಭೂಮಿ ಇರುವ ತನಕ ತಿಮ್ಮಕ್ಕನ ಹೆಸರು ಶಾಶ್ವತವಾಗಿತ್ತದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ತಿಳಿಸಿದರು.

ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿ ಗುಡಿಬಂಡೆ ಸಾರ್ವಜನಿಕರ ವತಿಯಿಂದ ಏರ್ಪಡಿಸಿದ್ದ ಸಾಲು ಮರದ ತಿಮ್ಮಕ್ಕಗೆ ಶ್ರದ್ಧಾಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಾಲು ಮರದ ತಿಮ್ಮಕ್ಕ ಯಾವುದೇ ಆಸೆಯಿಲ್ಲದೇ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಕೋಟ್ಯಂತರ ಪ್ರಾಣಿ ಸಂಕುಲಕ್ಕೆ ನೆರವಾಗಿದ್ದಾರೆ ಎಂದರು.

ತಿಮ್ಮಕ್ಕನ ಜಯಂತಿ ಆಚರಿಸಲಿ

ತಿಮ್ಮಕ್ಕನ ಮಾದರಿಯಲ್ಲೆ ಎಲ್ಲರೂ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುವಂತೆ ಸಾಲು ಮರದ ತಿಮ್ಮಕ್ಕನವರ ಜಯಂತಿಯನ್ನು ಸಹ ಆಚರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.

ಊರಿಗೊಬ್ಬರು ತಿಮ್ಮಕ್ಕ ಹುಟ್ಟಲಿ

ಬಳಿಕ ನಿವೃತ್ತ ಶಿಕ್ಷಕ ಎನ್.ನಾರಾಯಣಸ್ವಾಮಿ ಮಾತನಾಡಿ, ಈಗಾಗಲೇ ಪರಿಸರದ ಅಸಮತೋಲನದ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿವೆ. ಇದಕ್ಕೆಲ್ಲಾ ಇರುವುದು ಒಂದೇ ಪರಿಹಾರ ಅದು ಸಾಲು ಮರದ ತಿಮ್ಮಕ್ಕನಂತವರು ಊರಿಗೆ ಒಬ್ಬರು ಹುಟ್ಟಬೇಕು ಎಂದರು.

ದಲಿತ ಮುಖಂಡ ಇಸ್ಕೂಲಪ್ಪ ಸಾಲು ಮರದ ತಿಮ್ಮಕ್ಕನವರ ಕುರಿತು ಪರಿಸರ ಗೀತೆಯನ್ನು ಹಾಡುವ ಮೂಲಕ ತಿಮ್ಮಕ್ಕನವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು.