ಗದಗ: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಲ್ಲ. ಇವು ರಾಜ್ಯದ ಬಡವರನ್ನು ಬಡತನದಿಂದ ಮೇಲೆತ್ತಲು ಅತ್ಯಂತ ಸಹಕಾರಿಯಾಗಿದ್ದು, ಇದನ್ನು ರಾಜ್ಯದಲ್ಲಿ ಮಾನವ ಹಕ್ಕಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ಕೇವಲ ಉಚಿತ ಕೊಡುಗೆಗಳಾಗಿ ನೋಡಬಾರದು. ಅವುಗಳನ್ನು ಮಾನವ ಹಕ್ಕುಗಳನ್ನಾಗಿ ಪರಿವರ್ತಿಸಬೇಕು. ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿರುವ ಬಡವರಿಗಾಗಿ ಖರ್ಚು ಮಾಡುವುದು ಸರ್ಕಾರದ ಕರ್ತವ್ಯವೇ ಹೊರತು ಅದು ಹೊರೆಯಲ್ಲ ಎಂದರು.ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಾವು ಐಷಾರಾಮಿ ಕಾರುಗಳಲ್ಲಿ ಓಡಾಡುವಾಗ, ಪಕ್ಕದವನು ಹಸಿವಿನಿಂದ ಬಳಲುತ್ತಿದ್ದರೆ ಆ ಸುಖಕ್ಕೆ ಅರ್ಥವಿಲ್ಲ. ಪ್ರತಿಯೊಬ್ಬ ಪ್ರಜೆಯೂ ಕನಿಷ್ಠ ಸೌಲಭ್ಯಗಳೊಂದಿಗೆ ಸಂತುಷ್ಟನಾಗಿರಬೇಕು. ಅಂದಾಗ ಮಾತ್ರ ಸಂವಿಧಾನದ ಆಶಯದಂತೆ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದ ಅವರು, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಕೆಲವಾರು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.ನಿಧಿ ನೀಡಿದ ಲಕ್ಕುಂಡಿ ಪ್ರಜ್ವಲ್ಗೆ ನಿವೇಶನ ಹಸ್ತಾಂತರ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕಳೆದ ಜ.10ರಂದು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಹಸ್ತಾಂತರಿಸಿದರು.ಈ ವೇಳೆ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಮೀರನಾಯಕ ಅವರು, ಮಾರುತಿ ನಗರದ 7 ಎಕರೆ ಕ್ಷೇತ್ರದಲ್ಲಿಯ 274/4 ರ ಸರ್ವೇಯಲ್ಲಿ ನಿವೇಶನವನ್ನು ವಿತರಿಸಲಾಗಿದ್ದು, ಸ್ಥಳದಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬದವರನ್ನು ನಿಲ್ಲಿಸಿ ಜಿಪಿಎಸ್ ಭಾವಚಿತ್ರವನ್ನು ತೆಗೆಯಲಾಗಿದೆ ಎಂದರು.ಕಳೆದ ಜ. 22ರಂದು ಗ್ರಾಮ ಪಂಚಾಯಿತಿಯು ವಿಶೇಷ ಗ್ರಾಮಸಭೆಯನ್ನು ಕರೆದು ಪ್ರಜ್ವಲ್ನ ತಾಯಿ ಗಂಗವ್ವನನ್ನು ಫಲಾನುಭವಿಯೆಂದು ಆಯ್ಕೆ ಮಾಡಿತ್ತು. ನಂತರ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ನಿವೇಶನ ನೀಡುವ ಪತ್ರವನ್ನು ನೀಡಿದ್ದರು. ಅದರಂತೆ ಗುರುವಾರ ರಿತ್ತಿ ಕುಟುಂಬಕ್ಕೆ ನಿವೇಶನವನ್ನು ನೀಡಿದ್ದಾರೆ. ನಿವೇಶನವನ್ನು ತೋರಿಸಿರುವುದಕ್ಕೆ ಪ್ರಜ್ವಲ್ ರಿತ್ತಿ ಕುಟುಂಬವು ಸಂತಸ ವ್ಯಕ್ತಪಡಿಸಿದೆ.