ಸಾರಾಂಶ
ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹೆಬ್ಬಾವು ಸುತ್ತಿದ ಹಾಗೆ ಭ್ರಷ್ಟಾಚಾರದ ಸುರಿಮಳೆಯಾಗುತ್ತಿದೆ. ದಲಿತರ, ಹಿಂದುಳಿದ ವರ್ಗದ ಹಾಗೂ ಮುಸ್ಲಿಂ ಸಮಾಜದ ಚಾಂಪಿಯನ್ ಎಂದು ಹೇಳುವ ಕಾಂಗ್ರೆಸ್ ಅದೇ ಸಮಾಜದ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹ 187 ಕೋಟಿ, ಎಸ್ಟಿಪಿ ₹ 32 ಸಾವಿರ ಕೋಟಿ ಹಣ ಎಲ್ಲಿ ಹೋಯಿತು? ಲೋಕಸಭೆ ಚುನಾವಣೆಯಲ್ಲಿ ಮದ್ಯ ಕುಡಿಸಲು ಆ ಹಣ ಹೋಗಿದೆಯೇ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಹಣ ಯಾಕೆ ತೆಗೆದುಕೊಳ್ಳಲಿಲ್ಲ? ಅತ್ಯಂತ ಹಿಂದುಳಿದ ಬಡವರ ಹಣವೇ ಬೇಕಾಗಿತ್ತಾ? ಇದು ಪಾಪಗೇಡಿ ಕೆಲಸ. ನಿಜವಾಗಿ ನೀವು ಪಾತ್ರಧಾರಿ ಇಲ್ಲ ಎಂದರೆ ಸಿಬಿಐ ತನಿಖೆಗೆ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ವೀಕ್ ಆಗಿಲ್ಲ. ಅತ್ಯಂತ ಬಲಿಷ್ಠವಾಗಿ ರಾಜ್ಯ ಹಾಗೂ ದೇಶದಲ್ಲಿ ಬೆಳೆಯುತ್ತಿದೆ. ನನ್ನ ಜೀವನದಲ್ಲಿ ಎಸ್ಟಿಪಿ ಅನುದಾನವನ್ನು ಬಳಸಲಿಲ್ಲ. ನನ್ನ ಸುದೀರ್ಘ ರಾಜಕಾರಣ ಜೀವನದಲ್ಲಿ ಇಂಥ ಭ್ರಷ್ಟಾಚಾರ ನೋಡಿಲ್ಲ. ಅತ್ಯಂತ ಪಾಪಿಷ್ಟ ಸರ್ಕಾರ ಎಂದು ಜರಿದರು.