ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸೂಕ್ತ ಕಾಲ

| Published : Oct 28 2025, 12:03 AM IST

ಸಾರಾಂಶ

ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷಪೂರ್ತಿ ಸಮಿತಿಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ’. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಚಿಕ್ಕಬಳ್ಳಾಪುರವು 31 ನೇ ಜಿಲ್ಲೆಯಾಗಿದೆ. ರಾಜ್ಯದಲ್ಲಿ 59 ಸಾವಿರ ಬೂತ್‌ಗಳಿದ್ದು, ಕನಿಷ್ಠ ಪ್ರತಿ ಬೂತ್‌ನಿಂದ ಇಬ್ಬರು ಸದಸ್ಯರು ಸೇರಿದರೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರ್ಪಡೆಯಾಗಲಿದ್ದಾರೆ’

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚುನಾವಣಾ ಸಂದರ್ಭಕ್ಕೆ ಸೀಮಿತಗೊಳ್ಳದೇ ವರ್ಷದ 365 ದಿನವೂ ಕಾಂಗ್ರೆಸ್‌ ಪ್ರಚಾರ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿಳಿಸಿದರು.ನಗರದ ಬಿ.ಬಿ.ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ಪ್ರಥಮ ಬಾರಿಗೆ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರ್ಷಪೂರ್ತಿ ಸಮಿತಿಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ’. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಚಿಕ್ಕಬಳ್ಳಾಪುರವು 31 ನೇ ಜಿಲ್ಲೆಯಾಗಿದೆ ಎಂದರು.

ಪಂಚಾಯಿತಿ ಮಟ್ಟದಲ್ಲಿ ಸದಸ್ಯರು‘ಜಿಲ್ಲಾ, ಬ್ಲಾಕ್, ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ‌ ಹಾಗೂ ಡಿಜಿಟಲ್ ಯೂತ್ ಹೆಸರಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಸದಸ್ಯರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 59 ಸಾವಿರ ಬೂತ್‌ಗಳಿದ್ದು, ಕನಿಷ್ಠ ಪ್ರತಿ ಬೂತ್‌ನಿಂದ ಇಬ್ಬರು ಸದಸ್ಯರು ಸೇರಿದರೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರ್ಪಡೆಯಾಗಲಿದ್ದಾರೆ’ ಎಂದರು.

ಪಕ್ಷದ ಪ್ರಚಾರಕ್ಕೆ ಸಿಎಂ ಚಾಲನೆ

ಈ ಹಿಂದೆ ಕೇಂದ್ರದ ಮಾಜಿ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗಾಂಧಿ ನಡಿಗೆ ಜನತೆಯ ಕಡೆಗೆ ಎಂಬ ಹೆಸರಲ್ಲಿ ಆರಂಭಿಸಿದ್ದರು. ಅದೇ ರೀತಿ ‘ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಡಿ ಇದನ್ನು ಆರಂಭಿಸಲಾಗಿದೆ’ ಎಂದರು.

ತಲಾ ಆದಾಯ: ರಾಜ್ಯ ಪ್ರಥಮ

ಇತ್ತೀಚೆಗೆ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ, ದೇಶದ ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಒಂದನೇ ಸ್ಥಾನದಲ್ಲಿದೆ. 2.9 ಲಕ್ಷ ರು.ಗಳ ತಲಾ ಆದಾಯವನ್ನು ರಾಜ್ಯ ಹೊಂದಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಪಡೆದ ಕಾಂಗ್ರೆಸ್, ಮತಗಳ್ಳತನದಲ್ಲಿ ಪಾಲು ಇಲ್ಲವೇ ಎಂಬ ಬಿಜೆಪಿಯವರು ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸೊರಕೆ, ‘ಕಳೆದ ಬಾರಿಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.‘ಜಾತ್ಯತೀತ ಎಂದು ಹೇಳಿಕೊಂಡು ಜೆಡಿಎಸ್, ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸೂಕ್ತ ಕಾಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕ್ರಿಯಾಶೀಲರಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ ಎಂದರು.

ಮತಗಳ್ಳತನ ಬಗ್ಗೆ ಜನಜಾಗೃತಿ

ಈಗಾಗಲೇ ಜನರ ಜಾಗೃತಿಗಾಗಿ ರಾಹುಲ್ ಗಾಂಧಿಯವರು 2000 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಮತಗಳ್ಳತನ ವಿಚಾರವಾಗಿ ಪಕ್ಷದಿಂದ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸೊರಕೆ ಹೇಳಿದರು. ರಾಜ್ಯದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ಸೇರ್ಪಡೆಗೊಂಡಿದ್ದು ಪತ್ತೆಯಾಗಿದೆ. ಈ ಸಂಬಂಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ರಾಜ್ಯ ಸಂಚಾಲಕರಾದ ಆದರ್ಶ್ ಯಲ್ಲಪ್ಪ, ಜಾನ್ , ಮುನೀರ್, ಯೋಗೀಶ್ವರಿ, ಬ್ಲಾಕ್ ಅಧ್ಯಕ್ಷ ರಾದ ನಾಗಭೂಷಣ್,rಕ್ಷತಿ ರೆಡ್ಡಿ, ಮುಖಂಡರಾದ ಅಡ್ಡಗಲ್ ಶ್ರೀಧರ್, ಕೋನಪಲ್ಲಿ ಕೋದಂಡ,ಪಟ್ರೇನಹಳ್ಳಿ ಕೃಷ್ಣ,ಬಾಬಾಜಾನ್, ರಾಜಾಬಾಬು, ಮತ್ತಿತರರು ಇದ್ದರು.