ಹಾಸನ ಲೋಕ ಕಣದಲ್ಲಿ ಈ ಬಾರಿ ಮೊಮ್ಮಕ್ಕಳ ಜಿದ್ದಾಜಿದ್ದಿ!

| Published : Apr 18 2024, 02:22 AM IST / Updated: Apr 18 2024, 10:23 AM IST

Prajwal Revanna
ಹಾಸನ ಲೋಕ ಕಣದಲ್ಲಿ ಈ ಬಾರಿ ಮೊಮ್ಮಕ್ಕಳ ಜಿದ್ದಾಜಿದ್ದಿ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರಾಜಕಾರಣದ ಜಿದ್ದಾಜಿದ್ದಿನ ಕ್ಷೇತ್ರಗಳ ಪೈಕಿ ಹಾಸನ ಜಿಲ್ಲೆ ಕೂಡ ಒಂದು. ಸದಾ ಸುದ್ದಿಯಲ್ಲಿರುವ ಈ ಜಿಲ್ಲೆಯಲ್ಲಿ ಮೊಮ್ಮಕ್ಕಳ ರಾಜಕೀಯ ಶುರುವಾಗಿದೆ.

ಎಚ್‌.ಟಿ.ಮೋಹನ್ ಕುಮಾರ್‌

 ಹಾಸನ : ರಾಜ್ಯ ರಾಜಕಾರಣದ ಜಿದ್ದಾಜಿದ್ದಿನ ಕ್ಷೇತ್ರಗಳ ಪೈಕಿ ಹಾಸನ ಜಿಲ್ಲೆ ಕೂಡ ಒಂದು. ಸದಾ ಸುದ್ದಿಯಲ್ಲಿರುವ ಈ ಜಿಲ್ಲೆಯಲ್ಲಿ ಮೊಮ್ಮಕ್ಕಳ ರಾಜಕೀಯ ಶುರುವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಸಚಿವರೂ ಆಗಿದ್ದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಕ್ಕಳ ನಡುವೆ ಭಾರೀ ಸಮರವೇ ನಡೆದಿದೆ.

ಹಾಲಿ ಲೋಕಸಭಾ ಸದಸ್ಯ, ದೇವೇಗೌಡರ ಮೊಮ್ಮಗ, ಪ್ರಜ್ವಲ್ ರೇವಣ್ಣ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹಾಗೆಯೇ ತಮ್ಮ ತಾತನ ಕಾಲದ ಗತವೈಭವವನ್ನು ಮರುಕಳಿಸಲು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟಸ್ವಾಮಿಗೌಡರ ಮೊಮ್ಮಗನಾದ ಶ್ರೇಯಸ್ ಪಟೇಲ್ ಕೂಡ ರಣಕಣದಲ್ಲಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್‌-ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳ ನಡುವೆ ಮಾತ್ರವೇ ನೇರ ಹಣಾಹಣಿ ಇದೆ.ಪ್ರಚಾರದ ಅಬ್ಬರ:ಎರಡೂ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ಈಗಾಗಲೇ ಒಮ್ಮೆ ಸಂಸದರಾಗಿದ್ದಾರೆ. ಈ ಬಾರಿಯೂ ತಮ್ಮ ಯಥಾಸ್ಥಿತಿ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪ್ರಜ್ವಲ್‌ ಪರ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಸೇರಿ ಜೆಡಿಎಸ್‌ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ, ಮೋದಿಯ ವರ್ಚಸ್ಸು, ಬಿಜೆಪಿಯ ಮೈತ್ರಿ ಇವರಿಗೆ ವರದಾನವಾಗುತ್ತಿದೆ. ಆದರೆ, ಬಿಜೆಪಿ ನಾಯಕ ಪ್ರೀತಂಗೌಡ ಜೊತೆಗಿನ ಮುನಿಸು ಸ್ವಲ್ಪ ಮಟ್ಟಿಗೆ ತೊಡಕಾಗುವ ಸಾಧ್ಯತೆಯಿದೆ.

ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್‌.ಡಿ.ರೇವಣ್ಣ ಎದುರು ಕೇವಲ 2,380 ಮತಗಳ ಅಂತರದಲ್ಲಿ ಸೋತ ಶ್ರೇಯಸ್‌ ತಮ್ಮ ಮೇಲಿರುವ ಅನುಕಂಪದ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ, ಈ ಹಿಂದೆ ಜೆಡಿಎಸ್‌ನಲ್ಲಿದ್ದ ಶಿವಲಿಂಗೆಗೌಡ ಈಗ ಕಾಂಗ್ರೆಸ್‌ ಶಾಸಕರಾಗಿದ್ದು, ಇವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ತಮ್ಮ ಗೆಲುವಿಗೆ ಸಹಕರಿಸುವ ಆಶಯ ಇವರದು. ಕ್ಷೇತ್ರದ ಕಿರು ಪರಿಚಯ:

ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ. ಒಂದು ಕಾಲಕ್ಕೆ ಎಚ್‌.ಡಿ.ದೇವೇಗೌಡರು ಹಾಗೂ ಪುಟ್ಟಸ್ವಾಮಿಗೌಡರು ಸ್ನೇಹಿತರೇ ಆಗಿದ್ದರು. ನಂತರದಲ್ಲಿ ರಾಜಕೀಯ ದ್ವೇಷಿಗಳಾದರು. ಹಾಗಾಗಿ, ದೇವೇಗೌಡರು ಕೂಡ ಒಮ್ಮೆ ಪುಟ್ಟಸ್ವಾಮಿಗೌಡರ ಮುಂದೆ ಸೋಲನ್ನು ಅನುಭವಿಸಬೇಕಾಯಿತು. ಹಾಗಾಗಿ ಜಿಲ್ಲೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಎರಡೂ ಪಕ್ಷಗಳು ಸಂಸದ ಸ್ಥಾನದ ಅಧಿಕಾರ ಅನುಭವಿಸಿವೆ. ಆದರೆ, ಬಿಜೆಪಿಗೆ ಈವರೆಗೂ ತನ್ನ ಸಂಸದರನ್ನು ಲೋಕಸಭೆಗೆ ಕಳುಹಿಸಲಾಗಿಲ್ಲ.

ಅಭ್ಯರ್ಥಿಗಳ ಪರಿಚಯ:

ಪ್ರಜ್ವಲ್‌ ರೇವಣ್ಣ:

ಬಹುತೇಕ ನಾಯಕರೆಲ್ಲಾ ಸ್ಥಳೀಯ ಸಂಸ್ಥೆಗಳ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಕಡೆಗೆ ಸಂಸತ್‌ ಮೆಟ್ಟಿಲು ಹತ್ತಿದವರು. ಆದರೆ, ಜೆಡಿಎಸ್‌ ಅಭ್ಯರ್ಥಿಯಾದ ಪ್ರಜ್ವಲ್‌ ಅವರು ನೇರವಾಗಿ ಲೋಕಸಭೆಗೆ ಕಾಲಿಡುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ತಮ್ಮ ತಾತ ಎಚ್‌.ಡಿ.ದೇವೇಗೌಡರ ರಾಜಕೀಯ ಪಟ್ಟುಗಳು ಹಾಗೂ ತಮ್ಮ ತಂದೆ ಎಚ್.ಡಿ.ರೇವಣ್ಣ ಅವರ ಕಾರ್ಯಕ್ಷಮತೆ ಜತೆಗೆ ತಮ್ಮ ಇಡೀ ಕುಟುಂಬವೇ ರಾಜಕೀಯದಲ್ಲಿ ತಲ್ಲೀನವಾಗಿರುವುದರಿಂದ ಪ್ರಜ್ವಲ್‌ ಅವರಿಗೆ ರಾಜಕೀಯ ಒಳ ಹೊರಗುಗಳನ್ನು ಅರಿಯಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಈಗಲೂ ಕೂಡ ತಮ್ಮ ತಾತ ಹಾಗೂ ತಂದೆಯ ಮಾರ್ಗದರ್ಶನವೇ ಅವರ ಶಕ್ತಿ.

ಶ್ರೇಯಸ್‌ ಪಟೇಲ್‌:

ಮಾಜಿ ಸಚಿವರು ಹಾಗೂ ಸಂಸದರೂ ಆಗಿದ್ದ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗನಾದ ಶ್ರೇಯಸ್‌ ಎಂ. ಪಟೇಲ್‌ಗೂ ರಾಜಕೀಯ ಹೊಸದೇನೂ ಅಲ್ಲ. ರಾಜಕೀಯ ಕುಟುಂಬದಿಂದಲೇ ಬಂದಿರುವ ಅವರು ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಎಚ್‌.ಡಿ.ರೇವಣ್ಣ ಎದುರು 2,380 ಮತಗಳ ಅಂತರದಲ್ಲಿ ಸೋತರು. ಜಿಲ್ಲೆಯ ಜನರು ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಇನ್ನೂ ಇಷ್ಟೊಂದು ಭರವಸೆ ಇಟ್ಟಿದ್ದಾರೆ ಎನ್ನುವ ವಿಶ್ವಾಸದೊಂದಿಗೇ ಈ ಬಾರಿ ಲೋಕಸಭಾ ಚುನಾವಣೆಗೆ ಧುಮುಕಿದ್ದಾರೆ.ಮತದಾರರ ವಿವರ:ಒಟ್ಟು 

ಮತದಾರರ ಸಂಖ್ಯೆ: 17,36,610.

ಪುರುಷ ಮತದಾರರು: 8,63,727.

ಮಹಿಳಾ ಮತದಾರರು: 8,72,840.ಇತರ ಮತದಾರರು: 43.2019ರ ಲೋಕಸಭಾ ಚುನಾವಣಾ ಫಲಿತಾಂಶ:

ಪ್ರಜ್ವಲ್‌ ರೇವಣ್ಣ - ಜೆಡಿಎಸ್‌ - ಗೆಲುವು - 6,76, 606.ಎ. ಮಂಜು - ಬಿಜೆಪಿ - ಸೋಲು - 5,35, 382.ಜಾತಿ ಲೆಕ್ಕಾಚಾರ:ಒಕ್ಕಲಿಗರು ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದು, ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಕ್ಕಲಿಗರು ಸರಿ ಸುಮಾರು 4.10 ಲಕ್ಷ, ಲಿಂಗಾಯಿತರು 2.90 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರು ಸುಮಾರು 2.10 ಲಕ್ಷ, ಕುರುಬರು 1.50 ಲಕ್ಷ, ಮುಸ್ಲಿಮರು 1.20 ಲಕ್ಷ ಹಾಗೂ ಇತರರು ಸುಮಾರು 20 ಸಾವಿರದಷ್ಟಿದ್ದಾರೆ.