ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಭಾರತದ ಗಡಿಯಲ್ಲಿ ವೀರ ಮರಣವನ್ನಪ್ಪುವ ಹಾಗೂ ವೀರಯೋಧರ ತಾಯಂದಿರು, ದೇಶ ಕಾಯುವ ವೀರ ಸೈನಿಕರು, ಮಣ್ಣಲ್ಲಿ ಮಣ್ಣಾಗಿ, ಮೈ ಬಣ್ಣ ಮಣ್ಣಿಗೆ ಕೊಟ್ಟು, ಮಣ್ಣಿನ ಬಣ್ಣ ತಾನು ತೆಗೆದುಕೊಳ್ಳುವ ಅನ್ನದಾತ ರೈತರು, ರಾಷ್ಟ್ರದ ಏಳಿಗೆ ಬಯಸಿ ರಾಷ್ಟ್ರಕ್ಕಾಗಿ ದುಡಿಯುವ ನಾಯಕರು ಹಾಗೂ ದೇಶವೇ ಹೆಮ್ಮೆಪಡುವಂತೆ ಮಾಡುವ ವಿಜ್ಞಾನಿಗಳು ನಮ್ಮ ಬದುಕಿನ ಹೀರೋಗಳಾಗಬೇಕೆಂದು ಮಲ್ಲದೇವರಪುರ ವಿರಕ್ತ ಮಠದ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ ಸಲಹೆ ನೀಡಿದರು. ಪಟ್ಟಣದಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ವೇದಿಕೆಯಡಿಯಲ್ಲಿ ನಮ್ಮ ದೇಶಕ್ಕಾಗಿ ಗಡಿಯಲ್ಲಿ ನಿಂತ ನಮ್ಮ ಸೈನಿಕರಿಗಾಗಿ ನಾವೆಲ್ಲರೂ ತಿರಂಗಾ ಯಾತ್ರೆಯಲ್ಲಿ ಗಟ್ಟಿಯಾಗಿ ಹೆಜ್ಜೆ ಹಾಕೋಣವೆಂಬ ಸಂಕಲ್ಪದೊಂದಿಗೆ ಆಯೋಜನೆ ಮಾಡಿದ್ದ ವೈಭವದ ತಿರಂಗ ಯಾತ್ರೆಯ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಶ್ಮೀರವನ್ನು ಹಿಂಪಡೆಯುವುದು ನಮ್ಮ ಗುರಿಯಾಗಿದ್ದು, ಭಾರತಮಾತೆಯ ಸೇವೆಯಲ್ಲಿ ತೊಡಗಿರುವ ವೀರಯೋಧ ಮಹಿಳೆಯರು ಮುಂದಿನ ದಿನಗಳಲ್ಲಿ ಅವರುಗಳೇ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದು ಪಾಕಿಸ್ತಾನ ಎಲ್ಲಿದೆ ಎಂದು ಅವರುಗಳೇ ಹುಡುಕಿಕೊಳ್ಳಬೇಕು. ಅಂತಹ ಪರಿಸ್ಥಿತಿ ತರಲಿದ್ದಾರೆ ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉದಾಹರಿಸಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಅವರ ತಾಯಿ ಭಗತ್ಸಿಂಗ್ ಉದ್ದೇಶಿಸಿ, ನಿನ್ನಂತ ನೂರಾರು ಪುತ್ರರಿಗೆ ಜನ್ಮ ನೀಡುವ ಶಕ್ತಿಯನ್ನು ದೇವರು ನೀಡಲಿಲ್ಲವೆಂದು ಅಳುತ್ತಿದ್ದೇನೆ ಎಂದು ಭಗತ್ಸಿಂಗ್ರನ್ನ ನೇಣಿಗೆ ಹಾಕುವ ಮುನ್ನ ತಿಳಿಸಿ, ದೇಶಪ್ರೇಮದಲ್ಲಿ ಭಾರತದ ಮಾತೆಯರ ಮಹತ್ವದ ವಿಷಯವನ್ನು ಪ್ರಸ್ತಾಪಿಸಿ, ದೇಶದ ವಿಷಯದಲ್ಲಿ ಎಲ್ಲರೂ ಜಾತಿ, ಧರ್ಮ, ಮತ, ಪಂಥ ಎಲ್ಲವನ್ನು ಮರೆದು ಎಲ್ಲರೂ ಒಂದಾಗಿ ದೇಶಕ್ಕಾಗಿ ಹೋರಾಡುವ ಸಂಕಲ್ಪ ಮಾಡೋಣವೆಂದು ಕರೆಕೊಟ್ಟರು.ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ದೇಶಕ್ಕಾಗಿ ಹೋರಾಡುತ್ತಿರುವ ವೀರಯೋಧರು, ನಿವೃತ್ತ ಯೋಧರು ಹಾಗೂ ಕುಟುಂಬ ಸದಸ್ಯರಿಗೆ ಭಗವಂತ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಪ್ರಧಾನಿ ಮೋದಿಜಿ ದೇಶಕ್ಕಾಗಿ ಕೈಗೊಳ್ಳುತ್ತಿರುವ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ನೀಡುವ ಜತೆಗೆ ಸೈನಿಕರಿಗೆ ಆತ್ಮಸ್ಥೈರ್ಯ ನೀಡುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗೋಣವೆಂದರು. ದೇಶದ ಉಳಿವಿಗಾಗಿ ಹೋರಾಡುತ್ತಿರುವ ಸೈನಿಕರಿಗೆ ಗೌರವ ಸಮರ್ಪಿಸುವ ಸಲುವಾಗಿ ಆಯೋಜಿಸಿರುವ ಇಂದಿನ ತಿರಂಗಾ ಯಾತ್ರೆಯಲ್ಲಿ ಭಾಗಿಯಾದ ಎಲ್ಲರಿಗೂ ಶುಭವಾಗಲಿ ಎಂದರು.ನಿ. ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಸಾಗರ್ ಎ.ಎಸ್., ತಾ. ಅಧ್ಯಕ್ಷ ಈಶ್ವರ್, ಸದಸ್ಯರಾದ ವಸಂತ ಕುಮಾರ್ ಎಚ್.ಡಿ., ಬಸಪ್ಪ, ರಮೇಶ್, ಚನ್ನಕೇಶವ, ರವಿಕುಮಾರ್, ಮಹದೇವಯ್ಯ, ರಾಜಯ್ಯ ಹಾಗೂ ಯೋಧ ರವಿ ಹಾಗೂ ಇತರರನ್ನು ಪೂಜ್ಯ ಸ್ವಾಮೀಜಿ ಸನ್ಮಾನಿಸಿದರು. ವೈಭವದಿಂದ ತಿರಂಗ ಯಾತ್ರೆಯ ಅದ್ಧೂರಿ ಮೆರವಣಿಗೆಯಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಹಾಗೂ ಸದಸ್ಯರು, ಸರ್ಕಾರಿ ನರ್ಸಿಂಗ್ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳು, ತಾ. ಪತ್ರಕರ್ತರ ಸಂಘ, ವರ್ತಕರ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷರಾದ ಸುದರ್ಶನ್ ಎಚ್.ಎಸ್. ಹಾಗೂ ಕೆ.ಶ್ರೀಧರ್, ಆರ್ಎಸ್ಎಸ್ ಜಿಲ್ಲಾ ಪ್ರಚಾರಕ್ ಚಂದನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಹಾಗೂ ಗಿರೀಶ್, ಜೆಡಿಎಸ್ ತಾ. ಅಧ್ಯಕ್ಷ ಪುಟ್ಟಸೋಮಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಪತಿ, ಕಾಂಗ್ರೆಸ್ ತಾ. ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ದೇಶಭಕ್ತರಾದ ಮಳಲಿ ನಾರಾಯಣ್, ಹೊ.ಸು.ರಮೇಶ್, ಅಂಕವಳ್ಳಿ ಮೋಹನ್, ಮುತ್ತುರಾಜ್, ನಾಗು, ಇಂದಿರ ನಾಗರಾಜ್, ಗೌರಮ್ಮ, ವಿಜಯಕುಮಾರಿ, ಪ್ರದೀಪ್, ಜೈಪ್ರಕಾಶ್, ಮುರಳೀಧರಗುಪ್ತ, ಖಾಲೀದ್, ಬಾಲಾಜಿ, ರೋಹಿತ್, ಪ್ರವೀಣ್, ಶಂಕರನಾರಾಯಣ ಐತಾಳ್, ನಂಜುಂಡ, ಕುಮಾರ್ ಇತರರು ಭಾಗಿಯಾಗಿದ್ದರು.